ಚುನಾವಣಾ ರಾಜಕಾರಣದಿಂದ ನಿವೃತ್ತಿ ಪಡೆಯುವುದಾಗಿ ಜೆಡಿಎಸ್ನ ಮುಖಂಡ, ಮಾಜಿ ಶಾಸಕ ವೈಎಸ್ವಿ ದತ್ತ ಘೋಷಿಸಿದ್ದಾರೆ. ಕಡೂರು ಕ್ಷೇತ್ರದಲ್ಲಿ ಪಶ್ಚಾತ್ತಾಪದ ಪಾದಯಾತ್ರೆ ನಡೆಯಲು ಮುಂದಾಗಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಡೂರು ಕ್ಷೇತ್ರದಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿದ್ದ ಅವರು ಸೋಲುಂಡಿದ್ದರು. ಈ ಬೆನ್ನಲ್ಲೇ ಚುನಾವಣಾ ರಾಜಕೀಯಕ್ಕೆ ಗುಡ್ಬೈ ಹೇಳಲು ಮುಂದಾಗಿದ್ದಾರೆ. ಈ ಬಗ್ಗೆ ಪತ್ರವೊಂದನ್ನು ಅವರು ಬರೆದಿದ್ದಾರೆ.
ಪತ್ರದಲ್ಲಿ ಚುನಾವಣೆಯ ಸಂದರ್ಭದಲ್ಲಾದ ಬೆಳವಣಿಗೆಗಳ ಪಟ್ಟಿ ಮಾಡಿರುವ ಅವರು, “ನಾನೀಗ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ನಾನು ಎಲ್ಲಿ ಎಡವಿದೆ. ನನ್ನ ಮತದಾರ ಬಂಧುಗಳಾದ ನಿಮ್ಮ ನಿರೀಕ್ಷೆಯನ್ನು ಮುಟ್ಟಲು ನಾನು ಎಲ್ಲಿ ವಿಫಲನಾದೆ ಎಂಬ ತಿಳಿದುಕೊಳ್ಳಬೇಕು” ಎಂದು ಹೇಳಿದ್ದಾರೆ.
“ಇತ್ತೀಚೆಗೆ ನಡೆದ ಚುನಾವಣೆ ನನ್ನ ಪಾಲಿಗೆ ಅವಿಸ್ಮರಣೀಯವಾಗಿರುತ್ತದೆ ಎಂದು ಭಾವಿಸಿದ್ದೆ. ಇದೇ ನನ್ನ ಕೊನೆಯ ಚುನಾವಣೆ ಎಂದೂ ಹೇಳಿದ್ದೆ. ಫಲಿತಾಂಶವು ನನಗೆ ವಾಸ್ತವಾಂಶದ ದರ್ಶನ ನೀಡಿತು” ಎಂದು ಪರಾಜಿತಗೊಂಡ ಬಗ್ಗೆ ಉಲ್ಲೇಖಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?:ಬಿಜೆಪಿ ಸೋಲಿಗೆ ಪ್ರಮುಖ ಐದು ಕಾರಣಗಳಿವು
“2006ರಲ್ಲಿ ಕಡೂರು ಕ್ಷೇತ್ರಕ್ಕೆ ಕಾಲಿಟ್ಟ ದಿನದಿಂದ 2023ರವರೆಗಿನ ನನ್ನ ನಡೆವಳಿಕೆ, ನಿರ್ಧಾರಗಳು ಹಾಗೂ ಮತದಾರರೊಂದಿಗಿನ ನನ್ನ ಒಡನಾಡದ ವಿಚಾರದಲ್ಲಿ ನಾನೇ ಎಲ್ಲೋ ಎಡವಿದ್ದೇನೆ ಎಂಬ ಅನುಮಾನ ನನ್ನನ್ನು ಸದಾ ಕಾಡತೊಡಗಿದೆ. ಚುನಾವಣಾ ಫಲಿತಾಂಶದ ಬಗ್ಗೆ ನಾನೆಂದೂ ತಲೆಕಡೆಸಿಕೊಂಡವನಲ್ಲ. ನನ್ನ ರಾಜಕೀಯ ಜೀವನದಲ್ಲಿ ಗೆಲುವಿಗಿಂತ ಸೋಲನ್ನೇ ಜಾಸ್ತಿ ನೋಡಿದವನು. ಸೋಲು ಗೆಲುವು ಎರಡನ್ನೂ ಸಮಚಿತ್ತದಿಂದ ಸಮಭಾವದಿಂದ ನೋಡುವ ಮನಸ್ಥಿತಿ ನನ್ನದು. ಹಾಗಾಗಿ ಬಂದ ಫಲಿತಾಂಶದ ಬಗ್ಗೆ ನನಗೆ ಎಳ್ಳಷ್ಟೂ ಬೇಸರವಿಲ್ಲ” ಎಂದು ತಿಳಿಸಿದ್ದಾರೆ.
“ನನ್ನನ್ನು ಬೆಂಬಲಿಸಿದ ಹಿತೈಷಿಗಳಿಗೆ ಹಾಗೂ ನನ್ನ ತಪ್ಪಿನ ಕಾರಣದಿಂದ ನನ್ನಿಂದ ದೂರವಾಗಿರುವ ಮಾನಸ್ಸುಗಳನ್ನು ಒಗ್ಗೂಡಿಸುವ ಸಲುವಾಗಿ ನನ್ನ ಜನ್ಮದಿನವಾದ ಜೂನ್ 24ರಿಂದ ‘ಪ್ರಾಯಶ್ಚಿತ್ತ ಪಾದಯಾತ್ರೆ ‘ ಎಂಬ ಹೆಸರಿನೊಂದಿಗೆ ನಿಮ್ಮ ಊರುಗಳಿಗೆ ಬರುತ್ತಿದ್ದೇನೆ. ನನ್ನ ತಪ್ಪನ್ನು ನಿಮ್ಮ ಮುಂದೆ ನಿವೇದಿಸಿಕೊಂಡು, ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ್ದೇನೆ” ಎಂದು ಅವರು ಹೇಳಿದ್ದಾರೆ.