- ‘ಪ್ರತಿ ಆರು ತಿಂಗಳಿಗೊಮ್ಮೆ ಗರಿಷ್ಠ ಶೇ. 5ರವರೆಗೆ ಹಾಲಿನ ದರ ಹೆಚ್ಚಳವಾಗಲಿ’
- ಕೆಎಂಎಫ್ ಹಂತದಲ್ಲೇ ಹಾಲಿನ ದರ ಪರಿಷ್ಕರಣೆಗೆ ಅನುಮತಿ ನೀಡಲು ಮನವಿ
ಪ್ರತಿ ಆರು ತಿಂಗಳಿಗೊಮ್ಮೆ ಆರ್ಥಿಕ ಸ್ಥಿತಿಗತಿಗಳನ್ನು ಆಧರಿಸಿ ಹಾಲಿನ ದರ ಹೆಚ್ಚಳಕ್ಕೆ ಅನುಮತಿ ನೀಡಬೇಕು ಎಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪಶುಸಂಗೋಪನಾ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ.
”ಪ್ರತಿ ಆರು ತಿಂಗಳಿಗೊಮ್ಮೆ ಗರಿಷ್ಠ ಶೇ. 5ರವರೆಗೆ ಹಾಲಿನ ದರ ಹೆಚ್ಚಳಕ್ಕೆ ಅವಕಾಶ ನೀಡಬೇಕು. ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ಹಂತದಲ್ಲೇ ಹಾಲಿನ ದರ ಪರಿಷ್ಕರಣೆಗೆ ಅನುಮತಿ ನೀಡಬೇಕು” ಎಂದು ಪ್ರಸ್ತಾವದಲ್ಲಿ ತಿಳಿಸಲಾಗಿದೆ.
ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಅವರು ಸುದ್ದಿಗಾರರ ಜೊತೆ ಶುಕ್ರವಾರ ಮಾತನಾಡಿ, “ಹಾಲಿನ ದರ ಏರಿಕೆ ಮಾಡುವಂತೆ ರೈತರು ಮತ್ತು ಹಾಲು ಒಕ್ಕೂಟಗಳಿಂದ ಒತ್ತಡವಿದೆ. ಆದರೆ, ಸದ್ಯಕ್ಕೆ ದರ ಹೆಚ್ಚಳ ಇಲ್ಲ” ಎಂದು ಹೇಳಿದರು.
ಕೆಎಂಎಫ್ ನಂದಿನ ಹಾಲಿನ ದರವನ್ನು ಸೆಪ್ಟೆಂಬರ್ 1 ರಂದು ಪ್ರತಿ ಲೀಟರ್ ಗೆ ₹3ರಷ್ಟು ಹೆಚ್ಚಳ ಮಾಡಲಾಗಿದೆ. ಆದರೆ, ಅಮೂಲ್ 2022ರ ಮಾರ್ಚ್ ನಿಂದ 2023ರ ಫೆಬ್ರುವರಿಯವರೆಗೆ ಹತ್ತು ತಿಂಗಳ ಅವಧಿಯಲ್ಲಿ ಲೀಟರ್ ಗೆ 12 ಹೆಚ್ಚಳ ಮಾಡಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ನಿತೀಶ್ ಕುಮಾರ್ ಅಭದ್ರ ಭಾಷೆ ನಿಂದನೀಯ
“ಉತ್ಪಾದನಾ ವೆಚ್ಚ ಹೆಚ್ಚಳದಿಂದ ಆಗುತ್ತಿರುವ ಹೊರೆ ಕುರಿತು ಹಾಲು ಉತ್ಪಾದಕರ ಒಕ್ಕೂಟಗಳು ಸಭೆಯಲ್ಲಿ ಅಹವಾಲು ಸಲ್ಲಿಸಿವೆ. ನಂದಿನಿ ಹಾಲಿನ ದರ ಪ್ರತಿ ಲೀಟರ್ಗೆ ₹47 ಇದೆ. ಇತರ ರಾಜ್ಯಗಳಲ್ಲಿ ಹಾಲಿನ ದರ ಇನ್ನೂ ಹೆಚ್ಚಾಗಿದೆ” ಎಂದು ತಿಳಿಸಿದರು.
“ಕ್ಷೀರ ಭಾಗ್ಯ ಯೋಜನೆಗೆ ಕೆಎಂಎಫ್ ಪೂರೈಸುತ್ತಿರುವ ಹಾಲಿನಪುಡಿಯ ದರವನ್ನು ಪ್ರತಿ ಕೆ.ಜಿ.ಗೆ ₹400+ ಸರಕು ಮತ್ತು ಸೇವಾ ತೆರಿಗೆ ಎಂಬುದಾಗಿ ನಿಗದಿಪಡಿಸಬೇಕು. ಈಗ ಪ್ರತಿ ಕೆ.ಜಿ. ಹಾಲಿನ ಪುಡಿಗೆ ₹300+ ತೆರಿಗೆ ನೀಡಲಾಗುತ್ತಿದೆ. ಇದರಿಂದ ಕೆಎಂಎಫ್ ಗೆ ನಷ್ಟವಾಗುತ್ತಿದೆ” ಎಂದರು.