- ಕಾಂಗ್ರೆಸ್ ಯಾವಾಗಲೂ ಚುನಾವಣೆ ನಡೆಸುವುದೇ ಕಡೇ 3 ದಿನದಲ್ಲಿ
- ಸುರ್ಜೇವಾಲ ಮೇಲೆ ಹದ್ದಿನ ಕಣ್ಣಿಡಬೇಕು: ಸಿ ಟಿ ರವಿ ಆಗ್ರಹ
ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲ ಅವರು ಮತ್ತೆ ಬೆಂಗಳೂರಿಗೆ ಬಂದಿದ್ದಾರೆ. ಮೊದಲನೇ ಕಂತು ಬಂತು; 2ನೇ ಕಂತು ಬಂತು, 3ನೇ ಕಂತು ಬೇಕು; 3ನೇ ಕಂತಿನಲ್ಲಿ ಚೌಕಾಸಿ ಆಗಬಾರದೆಂದು 3ನೇ ಕಂತಿಗೋಸ್ಕರ ಮತ್ತೆ ಬೆಂಗಳೂರಿಗೆ ಬಂದಂತಿದೆ ಎಂದು ಮಾಜಿ ಸಚಿವ ಸಿ ಟಿ ರವಿ ಆರೋಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, “ಕಾಂಗ್ರೆಸ್ ಯಾವಾಗಲೂ ಚುನಾವಣೆ ನಡೆಸುವುದೇ ಕಡೇ 3 ದಿನಗಳಲ್ಲಿ. ತೆಲಂಗಾಣ ಚುನಾವಣಾ ಉಸ್ತುವಾರಿಯನ್ನು ಕರ್ನಾಟಕದ ಉಪ ಮುಖ್ಯಮಂತ್ರಿಗಳಿಗೆ ನೀಡಿದ್ದಾರೆ. ಹಾಗಾಗಿ 3ನೇ ಕಂತಿಗಾಗಿ ಬಂದಂತಿದೆ” ಎಂದರು.
“ಕರ್ನಾಟಕವನ್ನು ಕಾಂಗ್ರೆಸ್ ಎಟಿಎಂ ಮಾಡುವ ಬಗ್ಗೆ ನಾವು ಮುಂಚೆಯೇ ತಿಳಿಸಿದ್ದೆವು. ಕಾಂಗ್ರೆಸ್ ಗೆಲ್ಲಿಸಬೇಡಿ ಎಂದು ಜನರಿಗೆ ಮನವಿ ಮಾಡಿದ್ದೆವು. ಆದರೆ, ಅದನ್ನು ಮನವರಿಕೆ ಮಾಡಿಕೊಡಲಾಗಲಿಲ್ಲ. ಗ್ಯಾರಂಟಿ ಆಸೆಗೋ, ಇನ್ಯಾವುದೋ ಕಾರಣಕ್ಕೋ ಕಾಂಗ್ರೆಸ್ ಅನ್ನು ಗೆಲ್ಲಿಸಿದ್ದಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಡಿಕೆಶಿ ವಿರುದ್ಧದ ಸಿಬಿಐ ತನಿಖೆ ವಾಪಸ್: ಸರ್ಕಾರದ ನಡೆ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ ಯತ್ನಾಳ
ಸುರ್ಜೇವಾಲ ಮೇಲೆ ಹದ್ದಿನ ಕಣ್ಣಿಡಬೇಕು
“ಈಗ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದ್ದಾರೆ. ಐಟಿ ದಾಳಿ ವೇಳೆ ಇಲ್ಲಿ ಸಿಕ್ಕಿದ್ದ 102 ಕೋಟಿಯೂ ಕಾಂಗ್ರೆಸ್ಸಿಗಾಗಿ ಸಂಗ್ರಹಿಸಿದ ಹಣ. ಚುನಾವಣೆ ಆಯೋಗ, ಐಟಿ, ಇಡಿಗಳು ಸುರ್ಜೇವಾಲ ಮೇಲೆ ಹದ್ದಿನ ಕಣ್ಣಿಡಬೇಕು” ಎಂದು ಆಗ್ರಹಿಸಿದರು.
ಗುತ್ತಿಗೆದಾರ ಅಂಬಿಕಾಪತಿ ಅವರ ಸಾವು ದುರದೃಷ್ಟಕರ. ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಬಯಸುತ್ತೇನೆ. ಹೆಸರು ಮುಚ್ಚಿಡುವ ಒತ್ತಡ ಬಂತೋ? ಯಾವ ಒತ್ತಡದಲ್ಲಿ ಅವರಿಗೆ ಹೃದಯಾಘಾತ ಆಗಿದೆ ಎಂದು ಗೊತ್ತಿಲ್ಲ” ಎಂದು ತಿಳಿಸಿದರು.
ಕಾಂಗ್ರೆಸ್ ಹೇಳಿದ್ದೊಂದು ಮಾಡಿದ್ದೊಂದು
“ಎಲ್ಲ ನಿರುದ್ಯೋಗಿಗಳಿಗೆ 3 ಸಾವಿರ ಎಂದರು. ಬಳಿಕ ಈ ವರ್ಷ ಪದವಿ ಮುಗಿಸಿದ ನಿರುದ್ಯೋಗಿಗಳಿಗೆ ಭತ್ಯೆ ಎಂದರು. ಅವರಿಗೂ ಬಂದಿಲ್ಲ. ಎಲ್ಲ ಮಹಿಳೆಯರಿಗೂ 2 ಸಾವಿರ ಎಂದಿದ್ದರು. ‘ಶೋಭಾ ಕರಂದ್ಲಾಜೆ ನಿಮಗೂ ಫ್ರೀ’ ಎಂದಿದ್ದರು. ಅದೂ ಸರಿಯಾಗಿ ಜಾರಿ ಆಗಿಲ್ಲ. 200 ಯೂನಿಟ್ ಎಲ್ಲರಿಗೂ ಫ್ರೀ ಎಂದಿದ್ದರು. ಅಲ್ಲೂ ಕೂಡ ಹೇಳಿದ್ದೊಂದು ಮಾಡಿದ್ದೊಂದು” ಎಂದು ಕಿಡಿಕಾರಿದರು.