ದಸರಾ ನಿಮಿತ್ತ ನಗರದಲ್ಲಿ ಪ್ರವಾಸಿಗರು ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದ್ದು, ನಗರದ ನೈರ್ಮಲ್ಯ ಕಾಪಾಡಲು 395 ಹೆಚ್ಚುವರಿ ಪೌರಕಾರ್ಮಿಕರನ್ನು ನೇಮಿಸಿಕೊಳ್ಳಲು ಮೈಸೂರು ಮಹಾನಗರ ಪಾಲಿಕೆ (ಎಂಸಿಸಿ) ಮುಂದಾಗಿದೆ.
ದಸರಾ ಕಾರ್ಯಕ್ರಮ ನಡೆಯುವ ರಸ್ತೆಗಳು, ಪ್ರವಾಸಿ ತಾಣಗಳು ಹಾಗೂ ಇತರ ಸ್ಥಳಗಳನ್ನು ಸ್ವಚ್ಚವಾಗಿಡಲು ಮತ್ತು ಅಚ್ಚುಕಟ್ಟಾಗಿಡಲು ಯಂತ್ರೋಪಕರಣ ಮತ್ತು ಹೆಚ್ಚುವರಿ ಪೌರಕಾರ್ಮಿಕರನ್ನು ನಿಯೋಜಿಸಲಾಗುತ್ತಿದೆ.
ಮೈಸೂರು ನಗರದಲ್ಲಿ ದಿನವೊಂದಕ್ಕೆ ಸರಾಸರಿ 150 ಟನ್ ಪ್ಲಾಸ್ಟಿಕ್ ತ್ಯಾಜ್ಯ ಮತ್ತು 10 ಟನ್ ತ್ಯಾಜ್ಯ ಸೇರಿ 500 ಟನ್ ಘನತ್ಯಾಜ್ಯ ಸಂಗ್ರಹವಾಗುತ್ತದೆ. ಪ್ರವಾಸಿತಾಣಗಳು, ದಸರಾ ನಡೆಯುವ ಸ್ಥಳ, ಮುಖ್ಯವಾಗಿ ಆಹಾರ ಮೇಳದ ಸ್ಥಳ ಮತ್ತು ಅರಮನೆ ಸುತ್ತಮುತ್ತಲಿನ ಪ್ರದೇಶದ ಸ್ವಚ್ಚತೆ ಒಂದು ಸವಾಲಿನ ಕೆಲಸವಾಗಿದೆ.
ಅಲ್ಲದೆ, ದಸರಾ ನಡೆಯುವ ಅಕ್ಟೋಬರ್ 15ರಿಂದ ಅಕ್ಟೋಬರ್ 24ರವರೆಗೆ ಲಕ್ಷಾಂತರ ಜನ ಪ್ರವಾಸಿಗರು ನಗರಕ್ಕೆ ಭೇಟಿ ನೀಡುವುವುದರಿಂದ ಇನ್ನೂ ಹೆಚ್ಚಿನ ಕಸ ಸಂಗ್ರಹವಾಗುತ್ತದೆ. ಹೀಗಾಗಿ, ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವ ಮೂಲಕ ನಗರವನ್ನು ಸ್ವಚ್ಚವಾಗಿಡಲು ಎಂಸಿಸಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸದ್ಯ 2,100 ಪೌರಕಾರ್ಮಿಕರು ಎಂಸಿಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಎಂಸಿಸಿ ಇನ್ನೂ 395 ಪೌರಕಾರ್ಮಿಕರನ್ನು ನೇಮಿಸಿಕೊಂಡು, ಜನ ಸಂದಣಿ ಇರುವ ಸ್ಥಳಗಳಲ್ಲಿ ನಿಯೋಜಿಸಲಾಗುತ್ತದೆ. ಯುವದಸರಾ, ವಸ್ತುಪ್ರದರ್ಶನ ಮೈದಾನ, ಚಾಮುಂಡಿ ಬೆಟ್ಟ ಹಾಗೂ ಮೃಗಾಲಯದ ಸ್ಥಳಗಳಲ್ಲಿ ಈ ಪೌರಕಾರ್ಮಿಕರನ್ನು ಸೇವೆಗೆ ನೇಮಿಸಲಿದೆ. ಈ ಪೌರ ಕಾರ್ಮಿಕರು ಶಿಫ್ಟ್ ಆಧಾರದ ಮೇಲೆ ಕೆಲಸ ಮಾಡಲಿದ್ದಾರೆ. ಅಲ್ಲದೆ, ಈ ವರ್ಷದ ಹತ್ತು ದಿನಗಳಿಗೆ ನಾಲ್ಕು ವಿಭಿನ್ನ ಪ್ಯಾಕೇಜ್ಗಳಲ್ಲಿ ಈ ಪೌರಕಾರ್ಮಿಕರನ್ನು ನಿಯೋಜಿಸಲು ಯೋಜನೆ ರೂಪಿಸಲಾಗಿದೆ. ನಿಯಮಿತ ಪೌರಕಾರ್ಮಿಕರು ತಮ್ಮ ವ್ಯಾಪ್ತಿಯ ಎಲ್ಲ 65 ವಾರ್ಡ್ಗಳನ್ನು ಸ್ವಚ್ಛವಾಗಿಡಲು ಶ್ರಮಿಸಲಿದ್ದಾರೆ ಎಂದು ಪಾಲಿಕೆ ಹೇಳಿದೆ.