- ಬೈಂದೂರಿನ ಹೊಟೇಲ್ ಉದ್ಯಮಿ ಗೋವಿಂದ ಬಾಬು ಪೂಜಾರಿ ಹೆಸರಲ್ಲಿ ಪತ್ರ ವೈರಲ್
- ‘ಇವೆಲ್ಲವೂ ಸುಳ್ಳು ಸುದ್ದಿ, ಸೈಬರ್ ಪೊಲೀಸರಿಗೆ ದೂರು ಕೊಡುತ್ತೇವೆ’ ಎಂದ ಚೈತ್ರಾ ಕುಂದಾಪುರ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಪಕ್ಷ ಮತ್ತು ಆರ್ಎಸ್ಎಸ್ ಹೆಸರಿನಲ್ಲಿ ಕೋಟ್ಯಂತರ ರೂ. ಪಡೆದು ಕೆಲವರು ವಂಚಿಸಿರುವುದಾಗಿ ಆರೋಪಿಸಿ, ಸೋಷಿಯಲ್ ಮೀಡಿಯಾಗಳಲ್ಲಿ ಪತ್ರವೊಂದು ವೈರಲ್ ಆಗಿದೆ.
ಕುಂದಾಪುರದ ಬಿಜೆಪಿ ಮುಖಂಡ, ಹೊಟೇಲ್ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರ ಹೆಸರಿನಲ್ಲಿ ಈ ಪತ್ರ ಹರಿದಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
‘ನಾನು ಗೋವಿಂದ ಬಾಬು ಪೂಜಾರಿ’ ಎಂಬ ಹೆಸರಿನ ಒಕ್ಕಣೆಯಿಂದ ಪ್ರಾರಂಭವಾಗಿರುವ ಪತ್ರದಲ್ಲಿ, ‘ಬಿಜೆಪಿಯ ಕುಂದಾಪುರ ಬೈಂದೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಟಿಕೆಟ್ಗಾಗಿ ಒಟ್ಟು ಮೂರೂವರೆ ಕೋಟಿ ನೀಡಿದ್ದೇನೆ. ಆದರೆ ನನಗೆ ಸಂಘದ ಹಾಗೂ ಪಕ್ಷದ ಹೆಸರಿನಲ್ಲಿ ಮೋಸ ಮಾಡಿರುವುದು ಗೊತ್ತಾಗಿದೆ. ಜವಾಬ್ದಾರಿ ಸ್ಥಾನದಲ್ಲಿ ಇರುವಂತಹ ನನ್ನ ಜೀವನದಲ್ಲಿ ಇದು ದೊಡ್ಡ ಮೋಸ. ಆದ್ದರಿಂದ ಹಿರಿಯವರಾದ ತಮ್ಮಲ್ಲಿ ವಿನಂತಿಸುವುದೇನೆಂದರೆ ನನಗೆ ನ್ಯಾಯ ಒದಗಿಸಿ ಕೊಡುತ್ತೀರಿ ಎಂದು ನಂಬಿರುತ್ತೇನೆ’ ಎಂದು ಕೊನೆಯಲ್ಲಿ ತಿಳಿಸಲಾಗಿದೆ. ಒಟ್ಟು ನಾಲ್ಕು ಪುಟದ ಪತ್ರದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಪತ್ರದಲ್ಲಿ ಸಂಘಪರಿವಾರದಲ್ಲಿ ಗುರುತಿಸಿಕೊಂಡಿರುವ ಚೈತ್ರಾ ಕುಂದಾಪುರ ಹಾಗೂ ಅವರ ಮೂಲಕ ಪರಿಚಯವಾದ ಚಿಕ್ಕಮಗಳೂರು ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಗಗನ್ ಕಡೂರು, ಹೊಸಪೇಟೆಯ ಹಾಲಶ್ರೀ ಮಠದ ಹಾಲಶ್ರೀ ಸ್ವಾಮೀಜಿಯ ಹೆಸರು ಸೇರಿದಂತೆ ಮೊಬೈಲ್ ಸಂಖ್ಯೆಯನ್ನು ಕೊನೆಯಲ್ಲಿ ಉಲ್ಲೇಖಿಸಿರುವುದು ಕಂಡು ಬಂದಿದೆ. ಆದರೆ ಈ ಪತ್ರವನ್ನು ಯಾರಿಗೆ, ಯಾವಾಗ ಬರೆಯಲಾಗಿದೆ ಎಂಬ ಉಲ್ಲೇಖವಿಲ್ಲ.
![](https://eedina.com/wp-content/uploads/bjp-letter.jpg)
ಈ ಹಿನ್ನೆಲೆಯಲ್ಲಿ ಈ ದಿನ.ಕಾಮ್ ಗೋವಿಂದ ಬಾಬು ಪೂಜಾರಿಯವರನ್ನು ಸಂಪರ್ಕಿಸಲಾಯಿತು.
‘ನಿಮ್ಮ ಹೆಸರಿನಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಪತ್ರ ವೈರಲ್ ಆಗಿರುವ ಬಗ್ಗೆ ಮಾಹಿತಿ ಇದೆಯೇ? ಇದು ನಿಜವೇ? ಸುಳ್ಳಾ? ನೀವೇ ಬರೆದಿರೋದಾ? ಎಂದು ಕೇಳಿದಾಗ, ‘ನಾನು ಕಾರ್ಯಕ್ರಮವೊಂದರಲ್ಲಿದ್ದೇನೆ. 15 ನಿಮಿಷ ಬಿಟ್ಟು ಕರೆ ಮಾಡಿ’ ಎಂದರು.
ಕೆಲ ಸಮಯದ ಬಳಿಕ ಅವರನ್ನು ಈ ದಿನ.ಕಾಮ್ ಸಂಪರ್ಕಕ್ಕೆ ಪ್ರಯತ್ನಿಸಲಾಯಿತಾದರೂ, ಕರೆ ಸ್ವೀಕರಿಸಿಲ್ಲ.
![](https://eedina.com/wp-content/uploads/WhatsApp-Image-2023-08-06-at-8.06.19-PM.jpeg)
ಅಲ್ಲದೇ, ಪತ್ರದಲ್ಲಿ ಹೆಸರು ಉಲ್ಲೇಖಗೊಂಡಿದ್ದ ಹಿನ್ನೆಲೆಯಲ್ಲಿ ಈ ದಿನ.ಕಾಮ್ ಚೈತ್ರಾ ಕುಂದಾಪುರ ಅವರನ್ನು ಸಂಪರ್ಕಿಸಿದಾಗ ಕರೆ ಸ್ವೀಕರಿಸಿದರು. ಪತ್ರದ ಬಗ್ಗೆ ಕೇಳಿದಾಗ, ‘ಆ ಪತ್ರ ಗೋವಿಂದ ಬಾಬು ಪೂಜಾರಿ ಬರೆದಿದ್ದಾರೆ ಅನ್ನೋದಕ್ಕೆ ಏನಾದರೂ ಸಾಕ್ಷಿ ಇದೆಯಾ? ಅಥವಾ ಅವರ ಸಹಿ ಇದೆಯಾ? ಅಥವಾ ಅವರೇನಾದರೂ ವಂಚನೆ ಆಗಿರುವ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದಾರಾ? ಎಫ್ಐಆರ್ ಏನಾದರೂ ಆಗಿದೆಯಾ?’ ಎಂದು ಕೇಳಿದರು.
‘ಇವೆಲ್ಲವೂ ಸುಳ್ಳು ಸುದ್ದಿ. ಸೋಷಿಯಲ್ ಮೀಡಿಯಾಗಳಲ್ಲಿ ಫೇಕ್ ಲೆಟರ್ಗಳನ್ನು ಹಾಕಿ, ನಮ್ಮ ತೇಜೋವಧೆ ಮಾಡುತ್ತಿರುವ ಬಗ್ಗೆ ಎಲ್ಲರ ವಿರುದ್ಧ ಸೈಬರ್ ಪೊಲೀಸರಿಗೆ ದೂರು ಕೊಡುತ್ತೇವೆ. ಇಂತಹ ಪತ್ರವೆಲ್ಲವೂ ಕಾಂಗ್ರೆಸ್ ಬೆಂಬಲಿತ ಕಾರ್ಯಕರ್ತರ ಸೃಷ್ಟಿ ಆಗಿರಬಹುದು. ಪೊಲೀಸರಿಗೆ ದೂರು ಕೊಟ್ಟ ಬಳಿಕ ತಿಳಿಸುತ್ತೇನೆ’ ಎಂದು ಚೈತ್ರಾ ಕುಂದಾಪುರ ಈ ದಿನ.ಕಾಮ್ಗೆ ತಿಳಿಸಿದ್ದಾರೆ.
ಉಳಿದಂತೆ ಪತ್ರದಲ್ಲಿರುವ ಗಗನ್ ಕಡೂರು ಹಾಗೂ ಹಾಲಶ್ರೀ ಸ್ವಾಮೀಜಿಯ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಲಾಯಿತಾದರೂ ‘ಸ್ವಿಚ್ಧ್ ಆಫ್’ ಆಗಿದೆ.
ಹರಿದಾಡಿದ ಪತ್ರದ ನಾಲ್ಕು ಪುಟದ ಪ್ರತಿಗಳು
![](https://eedina.com/wp-content/uploads/WhatsApp-Image-2023-08-06-at-8.07.30-PM.jpeg)
![](https://eedina.com/wp-content/uploads/WhatsApp-Image-2023-08-06-at-8.07.18-PM.jpeg)
![](https://eedina.com/wp-content/uploads/WhatsApp-Image-2023-08-06-at-8.07.04-PM.jpeg)
![](https://eedina.com/wp-content/uploads/4-1.jpg)