ಬೆಂಗಳೂರು | ಕ್ವಿಂಟಲ್ ಕೊಬ್ಬರಿಗೆ 16 ಸಾವಿರ ರೂ. ಬೆಂಬಲ ಬೆಲೆ ನಿಗದಿಗೆ ಆಗ್ರಹ

Date:

ಮಾರುಕಟ್ಟೆಯಲ್ಲಿ ಕೊಬ್ಬರಿಯನ್ನು ಕ್ವಿಂಟಲ್‌ಗೆ 6 ಸಾವಿರ ರೂ.ಗಳಿಗೆ ಮಾರಾಟ ಮಾಡುವ ದುಸ್ಥಿತಿ ಇದೆ. ಆದರೆ, ರೈತರು ತೆಂಗು ಬೆಳೆದು ಒಂದು ಕ್ವಿಂಟಲ್‌ ಕೊಬ್ಬರಿಯನ್ನು ಮಾರುಕಟ್ಟೆ ತರುವಷ್ಟದಲ್ಲಿ 16 ಸಾವಿರ ರೂ.ಗಳಿಗೂ ಹೆಚ್ಚು ವೆಚ್ಚವಾಗುತ್ತದೆ. ಹೀಗಿದ್ದರು ಕೇಂದ್ರ ಸರ್ಕಾರ 11 ಸಾವಿರ ಬೆಲೆ ನಿಗದಿಪಡಿಸಿ ರೈತರಿಗೆ ಟೋಪಿ ಹಾಕುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್‌) ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ಆಕ್ರೋಶ ವ್ಯಕ್ತಪಡಿಸಿದರು.

ಕ್ವಿಂಟಲ್ ಕೊಬ್ಬರಿಗೆ ಕನಿಷ್ಠ 16,730 ರೂ. ಬೆಂಬಲ ಬೆಲೆ ನಿಗದಿ ಪಡಿಸುವಂತೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ‘ತೆಂಗು ಬೆಳೆಗಾರರ ಹೋರಾಟ ಸಮಿತಿ’ ಪ್ರತಿಭಟನೆ ನಡೆಸಿದೆ. ಪ್ರತಿಭಟನೆಯಲ್ಲಿಅವರು ಮಾತನಾಡಿದರು.

“ಮಾರುಕಟ್ಟೆಯಲ್ಲಿ ಕೊಬ್ಬರಿ ಒಂದು ಕ್ವಿಂಟಲ್‌ಗೆ 6 ಸಾವಿರ ಮಾರಾಟ ಮಾಡುವ ದುಸ್ಥಿತಿ ಇದೆ. ಆದರೆ, ಒಂದು ಕ್ವಿಂಟಲ್‌ಗೆ 16,730 ಖರ್ಚು ಬರುತ್ತದೆ ಎಂದು ರಾಜ್ಯ ತೋಟಗಾರಿಕೆ ಇಲಾಖೆಯ ವರದಿ ಹೇಳಿದೆ. ಆದರೂ, ಕೇಂದ್ರ ಸರ್ಕಾರ 11 ಸಾವಿರ ಬೆಲೆ ನಿಗದಿಪಡಿಸಿ ರೈತರಿಗೆ ಟೋಪಿ ಹಾಕುತ್ತಿದೆ. ಇಷ್ಟೆ ಅಲ್ಲದೆ ಕೇಂದ್ರ ಸರ್ಕಾರ ನಫೇಡ್ ಮೂಲಕ ಖರೀದಿಗೆ ಹಣವೆ ನೀಡಿಲ್ಲ. ತೋಟಗಾರಿಕೆ ಇಲಾಖೆ ಶಿಫಾರಸು ಮಾಡಿರುವ 16,730 ರೂ.ಗೆ ಖರೀದಿ ಮಾಡಬೇಕು. ಸರ್ಕಾರ ರೈತರ ಮಾತು ಕೇಳದಿದ್ದರೆ, ವಿಧಾನಸೌಧಕ್ಕೆ ನುಗ್ಗಲಿದ್ದೇವೆ” ಎಂದು ಎಚ್ಚರಿಕೆ ನೀಡಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ರಾಜ್ಯದಲ್ಲಿ ಒಟ್ಟು 6.46 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆ ಬೆಳೆಯಲಾಗುತ್ತಿದ್ದು, ವಾರ್ಷಿಕ ಕೊಬ್ಬರಿ ಉತ್ಪಾದನೆ 2.18 ಲಕ್ಷ ಮೆಟ್ರಿಕ್ ಟನ್‌ನಷ್ಟಿದೆ. ಇಂತಹ ಪ್ರಮುಖ ತೋಟಗಾರಿಕಾ ಬೆಳೆಯಾದ ಕೊಬ್ಬರಿ ಬೆಲೆಯು ಹಿಂದೆಂದೂ ಕೇಳಿರದ ಪ್ರಮಾಣದಲ್ಲಿ, ಕ್ವಿಂಟಲ್‌ಗೆ 6-7 ಸಾವಿರಕ್ಕೆ ಕುಸಿದಿದೆ. ಕೊಬ್ಬರಿಯ ಬೆಲೆ ಪಾತಾಳಕ್ಕೆ ಇಳಿದಿರುವುದು ತೆಂಗು ಬೆಳೆಯುವ ಪ್ರದೇಶದ ರೈತರಲ್ಲಿ ಆತಂಕವನ್ನು ಉಂಟುಮಾಡಿದೆ” ಎಂದು ಹೇಳಿದರು.

ಕೆಪಿಆರ್‌ಎಸ್ ರಾಜ್ಯ ಹಣಕಾಸು ಕಾರ್ಯದರ್ಶಿ ಎಚ್.ಆರ್‌. ನವೀನ್ ಕುಮಾರ್ ಮಾತನಾಡಿ, “ಕೇಂದ್ರ ಸರ್ಕಾರದ ತಪ್ಪು ಆಮದು ನೀತಿ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷದಿಂದಾಗಿ ರಾಜ್ಯದ ತೆಂಗು ಬೆಳೆಯುವ ರೈತರು ಅತ್ಯಂತ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಹೊರ ದೇಶಗಳಿಂದ ತೆಂಗು, ಕೊಬ್ಬರಿ, ತೆಂಗಿನ ಉಪ ಉತ್ಪನ್ನಗಳು ಮತ್ತು ಪಾಮಾಯಿಲ್ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇದರ ಪರಿಣಾಮವಾಗಿ ಸ್ಥಳೀಯವಾಗಿ ತೆಂಗು ಬೆಳೆಯುವ ರೈತರಿಗೆ ಸರಿಯಾದ ಮಾರುಕಟ್ಟೆ ಸಿಗುತ್ತಿಲ್ಲ” ಎಂದು ಆರೋಪಿಸಿದರು.

“ಕೇಂದ್ರ ಸರ್ಕಾರದ ತಪ್ಪು ಆಮದು ನೀತಿಗಳೇ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿವೆ. ಕೂಡಲೇ ರೈತ ವಿರೋಧಿ ನೀತಿಗಳನ್ನು ಕೈಬಿಟ್ಟು ಸಂಕಷ್ಟದಲ್ಲಿರುವ ರೈತರ ನೆರವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಬೇಕು” ಎಂದು ನವೀನ್ ಆಗ್ರಹಿಸಿದರು.

ಕೆಪಿಆರ್‌ಎಸ್ ರಾಜ್ಯ ಉಪಾಧ್ಯಕ್ಷರಾದ ಎನ್‌. ವೆಂಕಟಾಚಲಯ್ಯ ಮಾತನಾಡಿ, “ರಾಜ್ಯ ತೋಟಗಾರಿಕಾ ಇಲಾಖೆಯು, ಕೇಂದ್ರ ಸರ್ಕಾರದ ಕೃಷಿ ವೆಚ್ಚ ಮತ್ತು ದರ ಆಯೋಗ (CACP) ಕ್ಕೆ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 16730 ರೂಗಳನ್ನು ನೀಡಬೇಕು ಎಂದು ಉತ್ಪಾದನಾ ವೆಚ್ಚದ ಆಧಾರದಲ್ಲಿ ಶಿಫಾರಸ್ಸು ಮಾಡಿದೆ. ಆದರೂ ಕೇಂದ್ರ ಸರ್ಕಾರ ಬೆಂಬಲ ಬೆಲೆಯಾಗಿ ಕೇವಲ 11750 ರೂ. ಮಾತ್ರ ನಿಗದಿಪಡಿಸಿದೆ. ರೈತರ ಆಗ್ರಹಕ್ಕೆ ಮಣಿದು ರಾಜ್ಯ ಸರ್ಕಾರವು ಪ್ರತಿ ಕ್ವಿಂಟಲ್ ಕೊಬ್ಬರಿಗೆ 1250 ರೂ. ನಿಗದಿ ಮಾಡಿದೆ. ಆದರೆ ಮಾರುಕಟ್ಟೆಯಲ್ಲಿ ಕೇವಲ 6500 ಮಾತ್ರ ಇದೆ” ಎಂದು ಹೇಳಿದರು.

“ಸರ್ಕಾರಗಳು ಘೋಷಿಸಿರುವ ಬೆಂಬಲ ಬೆಲೆ ಜಾರಿಗೆ ಬರಬೇಕಾದರೆ ಖರೀದಿ ಕೇಂದ್ರಗಳನ್ನು ವ್ಯಾಪಕವಾಗಿ ತೆರೆಯಬೇಕು. ಸಮರ್ಪಕ ಖರೀದಿ ಕೇಂದ್ರಗಳು ಇಲ್ಲದೇ ಇದ್ದರೆ ಬೆಂಬಲ ಬೆಲೆ ಕೇವಲ ಕಾಗದದಲ್ಲಿ ಮಾತ್ರ ಉಳಿಯುತ್ತದೆ. ಅದ್ದರಿಂದ ವ್ಯಾಪಕವಾಗಿ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಬೇಕು” ಎಂದು ಅವರು ವೆಂಕಟಾಚಲಯ್ಯ ಒತ್ತಾಯಿಸಿದರು.

ಹೋರಾಟಗಾರರ ಹಕ್ಕೊತ್ತಾಯಗಳು

  1. ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ ಶಿಫಾರಸ್ಸಿನಂತೆ ಕೂಡಲೇ ಒಂದು ಕ್ವಿಂಟಲ್ ಉಂಡೆ ಕೊಬ್ಬರಿಯ ಬೆಲೆ 16,730 ರೂ ನಿಗದಿಯಾಗಬೇಕು. ರಾಜ್ಯ ಸರ್ಕಾರ ಕನಿಷ್ಟ 5000 ರೂ ಸಹಾಯಧನ ಘೋಷಣೆ ಮಾಡಬೇಕು.
  2. ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿ ಮಾಡಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು.
  3. ತೆಂಗಿನ ಬೆಲೆಯೂ ಮಾರುಕಟ್ಟೆಯಲ್ಲಿ ವಿಪರೀತ ಕುಸಿತವನ್ನು ಕಂಡಿರುವುದರಿಂದ ಕೃಷಿ ತಜ್ಞ ಡಾ.ಎಂ. ಎಸ್. ಸ್ವಾಮಿನಾಥನ್‌ ಅವರ ಆಯೋಗದ ಶಿಫಾರಸ್ಸಿನಂತೆ ಉತ್ಪಾದನಾ ವೆಚ್ಚಕ್ಕೆ 50% ರಷ್ಟು ಲಾಭಾಂಶವನ್ನು ಸೇರಿಸಿ ಬೆಲೆ ನಿಗದಿ ಮಾಡಬೇಕು.
  4. ತೆಂಗು ಮತ್ತು ಕೊಬ್ಬರಿಯನ್ನು ಎಪಿಎಂಸಿ ಮಾರುಕಟ್ಟೆ ಖರೀದಿ ಕೇಂದ್ರಗಳ ಮೂಲಕ ವರ್ಷಪೂರ್ತಿ ಸರ್ಕಾರವೇ ಖರೀದಿಸಬೇಕು.
  5. ನಫೆಡ್ (NAFED) ಮೂಲಕ ನಡೆಯುವ ಕೊಬ್ಬರಿ ಖರೀದಿಯನ್ನು ಬಲಪಡಿಸಬೇಕು ಹಾಗೂ ವಿಸ್ತರಿಸಬೇಕು, ವರ್ಷಪೂರ್ತಿ ಖರೀದಿಸಬೇಕು.
  6. ನೀರಾವರಿ ಪಂಪ್‌ಸೆಟ್‌ಗಳಿಗೆ ಡಿಜಿಟಲ್ ಮೀಟರ್ ಅಳವಡಿಕೆಯನ್ನು ಕೈಬಿಡಬೇಕು, ಹಾಗೂ ಪಂಪ್‌ಸೆಟ್‌ಗಳ ಆರ್‌ಆರ್ ನಂಬರ್ ಮತ್ತು ಆಧಾರ್ ಕಾರ್ಡ್ ಜೋಡಣೆಯನ್ನು ಕೈಬಿಡಬೇಕು.
  7. ರೈತರಿಗೆ ಅನುಕೂಲವಾಗುವಂತೆ ಎಪಿಎಂಸಿ ಮಾರುಕಟ್ಟೆ ಬಲಪಡಿಸಿ, ಭ್ರಷ್ಟಾಚಾರ ತಡೆಗಟ್ಟಬೇಕು, ಮಾರುಕಟ್ಟೆಯ ಪ್ರಾಂಗಣದಲ್ಲಿ ರೈತರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು.
  8. ತೆಂಗಿನ ಉತ್ಪನ್ನ ಮತ್ತು ಉಪ ಉತ್ಪನ್ನಗಳ ಮೌಲ್ಯವರ್ಧನೆಗೆ ಅಗತ್ಯವಾದ ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಬೇಕು.
  9. ತೆಂಗು ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕು.
  10. ತೆಂಗು ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕಾಗಿ ಬೆಳೆ ಪ್ರದೇಶದ ರೈತ ಮುಖಂಡರು, ಶಾಸಕರು, ಸಂಸದರ ನಿಯೋಗವನ್ನು ಪ್ರಧಾನಿಗಳ ಬಳಿಗೆ ಕರೆದೊಯ್ಯಬೇಕು, ತೆಂಗು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಕಾಣಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ತೆಂಗು ಬೆಳೆಗಾರರ ಸಭೆ ನಡೆಸಬೇಕು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಸ್ಟ್ರಾಂಗ್ ರೂಮ್ ಪರಿಶೀಲಿಸಿದ ಜಿಲ್ಲಾಧಿಕಾರಿ

ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಕ್ಷೇತ್ರ ವ್ಯಾಪ್ತಿಗೆ ಒಳಪಡುವ...

ಚಿಕ್ಕಬಳ್ಳಾಪುರ | ಅನುಚಿತ ಪ್ರಭಾವ, ಲಂಚ, ಭ್ರಷ್ಟಾಚಾರ ಪ್ರಕರಣದಡಿ ಕೆ.ಸುಧಾಕರ್ ವಿರುದ್ಧ ಎಫ್‌ಐಆರ್

ಚುನಾವಣೆಯಲ್ಲಿ ಮತದಾರರಿಗೆ ಲಂಚ ನೀಡಲು ಮನೆಯೊಂದರಲ್ಲಿ ಅಕ್ರಮವಾಗಿ ಹಣ ದಾಸ್ತಾನು ಮಾಡಿದ್ದ...

ದ್ವಿತೀಯ ಪಿಯುಸಿ ಪರೀಕ್ಷೆ-2 ಏಪ್ರಿಲ್ 29 ರಿಂದ ಆರಂಭ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಕಳೆದ ತಿಂಗಳಷ್ಟೇ ಪಿಯುಸಿ...