ಅಪಘಾತಗಳ ಹೆದ್ದಾರಿ ಎಂಬ ಕುಖ್ಯಾತಿಗೆ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪಾತ್ರವಾಗಿದೆ. ಈ ಎಕ್ಸ್ಪ್ರೆಸ್ವೇನಲ್ಲಿ ಈಗ ವಿಧಿಸಲಾಗುತ್ತಿರುವ ಟೋಲ್ ದರವನ್ನೇ ಕಡಿಮೆ ಮಾಡಬೇಕೆಂದು ಹಲವಾರು ಪ್ರತಿಭಟನೆಗಳು ನಡೆಯುತ್ತಿವೆ. ಈ ನಡುವೆ, ಇದೇ ರಸ್ತೆಯ 2ನೇ ಹಂತದ ಟೋಲ್ ಸಂಗ್ರಹವನ್ನು ಆರಂಭವಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಮಂಡ್ಯ ಜಿಲ್ಲೆಯ ಗಣಂಗೂರು ಬಳಿ ನಿರ್ಮಾಣವಾಗಿರುವ ಟೋಲ್ ಪ್ಲಾಜಾದಲ್ಲಿ ಜುಲೈ 1ರಿಂದ ಸುಂಕ ವಸೂಲಿ ಆರಂಭವಾಗಲಿದೆ.
ಮೊದಲ ಹಂತದಲ್ಲಿ ಬೆಂಗಳೂರು ಮತ್ತು ಮದ್ದೂರು ತಾಲೂಕಿನ ನಿಡಘಟ್ಟವರೆಗೆ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಇದೀಗ, ಎರಡನೇ ಹಂತದಲ್ಲಿ ನಿಡಘಟ್ಟದಿಂದ ಮೈಸೂರುವರೆಗೆ ಟೋಲ್ ಸಂಗ್ರಹಕ್ಕೆ ಮುಂದಾಗಿದ್ದು, ಶ್ರೀರಂಗಪಟ್ಟಣದ ಗಣಂಗೂರು ಟೋಲ್ನಲ್ಲಿ ಸುಂಕ ವಸೂಲಿ ಶನಿವಾರದಿಂದ ಪ್ರಾರಂಭವಾಗಲಿದೆ ಎಂದು ಹೆದ್ದಾರಿ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ.
ಒಂದನೇ ಹಂತದಲ್ಲಿ ಬಿಡದಿ ಬಳಿಕ ಕಣಮಿಣಕಿ ಟೋಲ್ನಲ್ಲಿ ಸುಂಕ ವಸೂಲಿ ಮಾಡಲಾಗುತ್ತಿತ್ತು. ಈ ಸುಂಕವು ಬೆಂಗಳೂರಿನಿಂದ ನಿಡಘಟ್ಟದವರೆಗೆ ಅನ್ವಯವಾಗುತ್ತದೆ ಎಂದು ಹೇಳಲಾಗಿತ್ತು. ಇದೀಗ, ಎರಡನೇ ಹಂತದಲ್ಲಿ ಗಣಂಗೂರು ಟೋಲ್ನಲ್ಲಿ ಸುಂಕ ವಸೂಲಿ ಆರಂಭವಾಗಲಿದೆ. ಇದು ನಿಡಘಟ್ಟದಿಂದ ಮೈಸೂರಿನವರೆಗೆ ಅನ್ವಯವಾಗಲಿದೆ. ಅಂತಯೇ ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣಿಸುವವರು ಎರಡು ಕಡೆ ಟೋಲ್ ಪಾವತಿ ಮಾಡಬೇಕಾಗಿದೆ.
ಆದರೆ, ನಿಡಘಟ್ಟ ಮತ್ತು ಮೈಸೂರು ನಡುವಿನ ರಸ್ತೆ ಕಾಮಗಾರಿ ಸಂಪೂರ್ಣವಾಗಿ ಮುಗಿದಿಲ್ಲ. ಆರು ಪಥದ ರಸ್ತೆಯ ಕಾಮಗಾರಿಯಷ್ಟೇ ಮುಗಿದಿದೆ. ಇನ್ನೂ ಎರಡೂ ಬದಿಯ ನಾಲ್ಕು ಪಥದ ಸರ್ವೀಸ್ ರಸ್ತೆ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ರಸ್ತೆ ಬದಿಯಲ್ಲಿ ಚರಂಡಿಗಳ ನಿರ್ಮಾಣವಾಗಿಲ್ಲ. ಹಲವೆಡೆ ಕೆಳ ಸೇತುವೆಗಳಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಲಾಗಿಲ್ಲ. ಸರ್ವೀಸ್ ರಸ್ತೆ ಪೂರ್ಣಗೊಳ್ಳದೆ ಟೋಲ್ ವಸೂಲಿ ಮಾಡಬಾರದು ಎಂದು ಆಗ್ರಹಗಳು ಕೇಳಿಬಂದಿವೆ.
“ಸರ್ವೀಸ್ ರಸ್ತೆ ಪೂರ್ಣಗೊಳ್ಳದೆ ಟೋಲ್ ವಸೂಲಿ ಆರಂಭಿಸಬಾರದು” ಎಂದು ಮಂಡ್ಯ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಕೂಡ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೂ, ಟೋಲ್ ಸುಂಕ ಆರಂಭಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.