ಕೊರಳಲ್ಲಿ ಲಿಂಗ ಕಟ್ಟಿಕೊಂಡು, ಹಣೆಯ ಮೇಲೆ ವಿಭೂತಿ ಧರಿಸಿ ವಿಶ್ವಗುರು ಬಸವಣ್ಣನವರನ್ನು ಜಪಿಸುವುದು ಎನ್ನುವುದು ಬಸವತತ್ವ ಅಲ್ಲ. ಯಾರು ಸಮಾನತೆಯಲ್ಲಿ ಗಾಢವಾದ ನಂಬಿಕೆ ಇಟ್ಟಿರುತ್ತಾರೋ ಅವರೇ ನಿಜವಾದ ಲಿಂಗಾಯತರು ಎಂದು ಯುವ ಚಿಂತಕ ಸಿದ್ದಪ್ಪ ಮೂಲಗೆ ಅಭಿಪ್ರಾಯಪಟ್ಟರು.
ಬೀದರ್ನಲ್ಲಿ ಜಿಲ್ಲಾ ಕಸಾಪ ಆಯೋಜಿದ್ದ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ʼಸಾಂಸ್ಕೃತಿಕ ನಾಯಕ ಬಸವಣ್ಣ : ಕನ್ನಡ ಅಸ್ಮಿತೆʼ ವಿಶೇಷ ಗೋಷ್ಠಿಯಲ್ಲಿ ಆಶಯ ನುಡಿ ವ್ಯಕ್ತಪಡಿಸಿದ ಅವರು,”ಇತ್ತೀಚೆಗೆ ರಾಜ್ಯ ಸರ್ಕಾರ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಘೋಷಿಸಿದ್ದು ಇಡೀ ದೇಶಕ್ಕೆ ಮಾದರಿ ಎನ್ನುವಂತಿದೆ. ಬಸವಣ್ಣನವರು ನಡೆದು ಬಂದ ದಾರಿಯಲ್ಲಿ ನಾಡಿನ ರಾಜಕಾರಣಿಗಳು ಹಾಗೂ ಮಠಾಧೀಶರು ಸಾಗಬೇಕಾಗಿರುವುದು ಬಹುದೊಡ್ಡ ಜವಾಬ್ದಾರಿಯಿದೆ” ಎಂದರು.
“ಮಾರ್ಕ್ಸ್ನ ಆರ್ಥಿಕ ಮೌಲ್ಯ, ಅಂಬೇಡ್ಕರ್ ಅವರ ಸಾಮಾಜಿಕ ಮೌಲ್ಯ, ಲೋಹಿಯಾ ಅವರ ರಾಜಕೀಯ ಮೌಲ್ಯ ಹಾಗೂ ಗಾಂಧೀಜಿಯವರ ಮೌಲ್ಯಗಳು ವಚನ ಸಾಹಿತ್ಯದಲ್ಲಿ ಅಡಕವಾಗಿವೆ. ಬಸವಣ್ಣ ಸೇರಿದಂತೆ ಸಮಕಾಲೀನ ಶರಣರು ಪ್ರಭುತ್ವದ ಜೊತೆಗೆ ಎಂದಿಗೂ ಕೈಜೋಡಿಸಿದವರಲ್ಲ, ಅವರ ಪ್ರಭುತ್ವವನ್ನು ಅನುಮಾನದ ದೃಷ್ಟಿಯಿಂದ ನೋಡಿದ್ದಾರೆ. ಆದರೆ ಇಂದಿನ ಬಹುತೇಕ ಪತ್ರಕರ್ತರು ಜನಪ್ರತಿನಿಧಿಗಳು, ಭ್ರಷ್ಟರು, ಸುಲಿಗೆಕೋರರ ಮನೆಸುತ್ತುತ್ತಾರೆ. ಪತ್ರಕರ್ತರು ವಿರೋಧ ಪಕ್ಷದಂತೆ ಕಾರ್ಯನಿರ್ಹಿಸುವುದು ನಿಜವಾದ ಲಕ್ಷಣ” ಎಂದು ಹೇಳಿದರು.
“ಮನುಷ್ಯತ್ವ ಉಳಿವಿಗಾಗಿ ಜಾತಿ, ವರ್ಗ, ವರ್ಣ ಹಾಗೂ ಶೋಷಣೆ ರಹಿತ ಸಮಾಜ ಕಟ್ಟಲು ಹೋರಾಡಿದ ಬಸವಾದಿ ಶರಣರ ಮೌಲ್ಯಗಳು ಸಂವಿಧಾನದಲ್ಲಿ ಕಾಣುತ್ತೇವೆ. ಸಂವಿಧಾನ ಇರದಿದ್ದರೆ ನಾವು ಶಿಕ್ಷಣ, ಉದ್ಯೋಗ ಪಡೆಯಲು ಸಾಧ್ಯವಾಗದೇ ಗುಲಾಮಗಿರಿ ಪರಿಸ್ಥಿತಿ ಎದುರಿಸಬೇಕಾಗಿತ್ತು. ನಾವು ಘನತೆಯಿಂದ ಸಮಾಜದಲ್ಲಿ ಬದುಕಲು ಸಂವಿಧಾನದ ಋಣವಿದೆ. ಆದರೆ ಸಂವಿಧಾನ ಬುಡಮೇಲು ಮಾಡುವ ಷಡ್ಯಂತ್ರ ನಡೆಯುತ್ತಿದೆ. ಎಂದು ಕಳವಳ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ ಕ್ಷೇತ್ರದಲ್ಲಿ ಬಿ.ಆರ್ ಪಾಟೀಲ್ ಸ್ಪರ್ಧಿಸಿದರೆ ಗೆಲುವಿಗೆ ಶ್ರಮಿಸುವೆ: ಸಚಿವ ಈಶ್ವರ ಖಂಡ್ರೆ
ಗುಜರಾತ್, ಉತ್ತರಪ್ರದೇಶ ಸೇರಿದಂತೆ ಉತ್ತರ ರಾಜ್ಯಗಳಲ್ಲಿ ನಡೆದಂತೆ ಕರ್ನಾಟಕದಲ್ಲಿ ಕೋಮು ಗಲಭೆ, ಭಯೋತ್ಪಾದನೆ ಕೃತ್ಯಗಳು ಹೆಚ್ಚಾಗಿ ನಡೆಯುವುದಿಲ್ಲ. ಅದಕ್ಕೆ ಈ ನೆಲದಲ್ಲಿ ಬೇರೂರಿದ ವಚನ ಸಾಹಿತ್ಯದ ಪ್ರಭಾವ ಕಾರಣ ಎಂಬುದು ಹೆಮ್ಮೆಪಡಬೇಕಾಗಿದೆ. ಬಸವಣ್ಣನವರನ್ನು ಬರೀ ಧಾರ್ಮಿಕ ವ್ಯಕ್ತಿಯಾಗಿ ನೋಡದೇ ರಾಜಕೀಯ, ಆರ್ಥಿಕ ತಜ್ಞ ಎಂಬುದು ಮನದಟ್ಟಾಗಬೇಕು. ಒಂದು ಸಮುದಾಯದ ಖಾಸಗೀಕರಣವಾಗಿದ್ದ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ಸಾಮಾಜಿಕರಣಗೊಳಿಸಿದ ಶ್ರೇಯಸ್ಸು ಸಿಎಂ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ” ಎಂದು ನುಡಿದರು.