ಕನ್ನಡ ರಾಜ್ಯೋತ್ಸವದಂದು ಬೆಳಗಾವಿಯಲ್ಲಿ ಕರಾಳ ದಿನಾಚರಣೆ ಮಾಡಿದ್ದ ಎಂಇಎಸ್ ಕಾರ್ಯಕರ್ತರ ವಿರುದ್ಧ ಬೆಳಗಾವಿ ಪೊಲೀಸರು ಸ್ವಯಂ ಪ್ರೇರಿಯ ದೂರು ದಾಖಲಿಸಿಕೊಂಡಿದ್ದಾರೆ.
ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಎಂಇಎಸ್ನ ಮಾಲೋಜಿರಾವ್ ಅಷ್ಟೇಕರ್, ಮನೋಹರ ಕಿಣೇಕರ್, ರಂಜಿತ್ ಚವ್ಹಾಣ್, ಸರಿತಾ ಪಾಟೀಲ್, ಸಾರಿಕಾ ಪಾಟೀಲ್, ಅಂಕುಶ ಕೇಸರಕರ್ ಸೇರಿದಂತೆ ಒಟ್ಟು 18ಮಂದಿಯ ವಿರುದ್ಧ ದೂರು ದಾಖಲಾಗಿದೆ. ಅನುಮತಿ ಇಲ್ಲದಿದ್ದರೂ ನಗರದಲ್ಲಿ ಕರಾಳ ದಿನಾಚರಣೆ ಹೆಸರಲ್ಲಿ ಮೆರವಣಿಗೆ ಮಾಡಿದ್ದರು.
ಬೆಳಗಾವಿಯ ಸಂಭಾಜಿ ಉದ್ಯಾನದಿಂದ ಕಪ್ಪು ಬಟ್ಟೆ ಧರಸಿ ನೂರಾರು ಜನ ಎಂಇಎಸ್ ಪುಂಡರು ಮೆರವಣಿಗೆ ನಡೆಸಿ, ನಾಡದ್ರೋಹಿ ಘೋಷಣೆ ಕೂಗಿದ್ದರು. ಇನ್ನೊಂದೆಡೆ ಕರಾಳ ದಿನ ಆಚರಣೆ ಅನುಮತಿ ಇಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿ ಹೇಳಿದ್ದರು. ಆದರೂ, ಎಂಇಎಸ್ ಕಾರ್ಯಕರ್ತರು ಮೆರವಣಿಗೆ ಮಾಡಿ ಕರಾಳ ದಿನಾಚರಣೆ ಮಾಡಿದ್ದರು. ಇದಕ್ಕೆ ಪೊಲೀಸರೇ ಭದ್ರತೆ ನೀಡಿದ್ದು, ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ ಜಿಲ್ಲಾಡಳಿತದ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಪೊಲಿಸರು ಇದೀಗ ಕರಾಳ ದಿನ ಆಚರಣೆ ಮಾಡಿದ್ದವರ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ.