ರಾಜ್ಯದ ಬೆಳಗಾವಿ ಮಾಹಿತಿ ಆಯೋಗದ ಪೀಠಕ್ಕೆ ಆಯುಕ್ತರನ್ನು ತಕ್ಷಣ ನೇಮಕ ಮಾಡಿ ಎಂದು ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಗೆ ನೈಜ ಹೋರಾಟಗಾರರ ವೇದಿಕೆ ಮನವಿ ಪತ್ರ ಸಲ್ಲಿಸಿದೆ.
ಕಳೆದ ವರ್ಷ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭಕ್ಕೂ ಮುನ್ನ ಬೆಳಗಾವಿ ಮಾಹಿತಿ ಆಯೋಗದ ಪೀಠಕ್ಕೆ ಚಾಲನೆ ನೀಡಬೇಕೆಂದು ಸಾಮಾಜಿಕ ಹೋರಾಟಗಾರ ಶ್ರೀನಿವಾಸ್ ಗೌಡ ಪಾಟೀಲ್ ಮನವಿ ಪತ್ರ ಬರೆದಿದ್ದರು. ಆದರೆ, ಇದೂವರೆಗೆ ಪೀಠಕ್ಕೆ ಆಯುಕ್ತರನ್ನು ನೇಮಕ ಮಾಡಲಾಗಿಲ್ಲ ಎಂದು ವೇದಿಕೆ ಅಸಮಾಧಾನ ವ್ಯಕ್ತಪಡಿಸಿದೆ.
ಇದೀಗ ಮತ್ತೊಮ್ಮೆ ಮನವಿ ಸಲ್ಲಿಸಿದ್ದು, ಮನವಿ ಪತ್ರದಲ್ಲಿ, “ಕರ್ನಾಟಕ ರಾಜ್ಯ ಸರ್ಕಾರವು ಉತ್ತಮ, ಜನಪರ, ಸ್ವಚ್ಛ, ಪ್ರಾಮಾಣಿಕ ಮತ್ತು ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ನೀಡಲು ನಿರಂತರವಾಗಿ ಶ್ರಮಿಸುತ್ತಿದೆ ಎಂದು ನಾವು ಭಾವಿಸಿದ್ದೇವೆ. ಬಹಳ ಮುಖ್ಯವಾಗಿ 2005ರಲ್ಲಿ ಯುಪಿಎ ಸರ್ಕಾರವು ದೇಶದಲ್ಲಿ ಪಾರದರ್ಶಕ ಆಡಳಿತ ನಡೆಸಲು ಬದ್ಧರಾಗಿ ‘ಮಾಹಿತಿ ಹಕ್ಕು ಅಧಿನಿಯಮ-2005’ ಜಾರಿಗೊಳಿಸಿದೆ. ಈ ನಿಟ್ಟಿನಲ್ಲಿ, ಕರ್ನಾಟಕ ರಾಜ್ಯ ಸರ್ಕಾರವು ಮುಂಬೈ ಕರ್ನಾಟಕ ವ್ಯಾಪ್ತಿಯಲ್ಲಿರುವ ಏಳು ಜಿಲ್ಲೆಗಳ ನಾಗರಿಕರಿಗೆ ಸುಲಭವಾಗಿ ಮಾಹಿತಿ ದೊರಕುವಂತೆ ಮಾಡಲು ಬೆಳಗಾವಿಯಲ್ಲಿ ಮಾಹಿತಿ ಆಯೋಗದ ಪೀಠವನ್ನು ರಚನೆ ಮಾಡಿ ಆಯುಕ್ತರನ್ನು ನೇಮಕ ಮಾಡಿತ್ತು” ಎಂದು ವಿವರಿಸಿದೆ.
“ಆದರೆ, ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಾಹಿತಿ ಆಯುಕ್ತರು ರಾಜೀನಾಮೆ ನೀಡಿದ ಕಾರಣ ಹುದ್ದೆಯು ಸುಮಾರು ಎರಡು-ಮೂರು ವರ್ಷಗಳಿಂದ ಖಾಲಿ ಉಳಿದಿದೆ. ಹೊಸ ಆಯುಕ್ತರನ್ನು ನೇಮಿಸದೆ ಸರ್ಕಾರವು ತನ್ನ ಜವಾಬ್ದಾರಿಯಿಂದ ಹಿಂದೆ ಸರಿದಿರುವುದು ದುರಾದೃಷ್ಟಕರ ಸಂಗತಿ. ಬೆಳಗಾವಿ ಜಿಲ್ಲೆ ಸೇರಿದಂತೆ ಸುಮಾರು ಏಳು ಜಿಲ್ಲೆಗಳ ನಾಗರಿಕರು ಸಲ್ಲಿಸಿದ್ದ ಸುಮಾರು 15 ಸಾವಿರ ಮೇಲ್ಮನವಿಗಳು ಇತ್ಯರ್ಥವಾಗದೇ ಉಳಿದಿವೆ” ಎಂದು ಅಸಮಾಧಾನ ವ್ಯಕ್ತಪಡಿಸಿದೆ.
“ಮಾಹಿತಿ ಆಯೋಗದ ಬೆಳಗಾವಿ ಪೀಠಕ್ಕೆ ತಕ್ಷಣ ಆಯುಕ್ತರನ್ನು ನೇಮಿಸಿ ಮಾಹಿತಿ ಆಯೋಗದ ಪೀಠವನ್ನು ಪುನರಾರಂಭಗೊಳಿಸಬೇಕು. ಇತ್ಯರ್ಥವಾಗದೇ ಉಳಿದಿರುವ 15 ಸಾವಿರಕ್ಕೂ ಹೆಚ್ಚು ಮೇಲ್ಮನವಿಗಳ ಇತ್ಯರ್ಥಕ್ಕೆ ಸರ್ಕಾರವು ಮುಂದಾಗಬೇಕು. ಸೂಕ್ತ ಕಾನೂನು ಕ್ರಮಗಳ ಪ್ರಕ್ರಿಯೆಗೆ ಚಾಲನೆ ನೀಡಿ, ನೆನೆಗುದಿಗೆ ಬಿದ್ದಿರುವ ಬೆಳಗಾವಿ ಮಾಹಿತಿ ಆಯೋಗದ ಪೀಠಕ್ಕೆ ಆಯುಕ್ತರನ್ನು ನೇಮಿಸಿ ಚಾಲನೆ ನೀಡಬೇಕು: ಎಂದು ನೈಜ ಹೋರಾಟಗಾರರ ವೇದಿಕೆ ಆಗ್ರಹಿಸಿದೆ.