ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಚುನಾವಣೆ ಪ್ರಚಾರ ವೆಚ್ಚದ ದರ ನಿಗದಿಪಡಿಸುವ ಕುರಿತು ಗುರುವಾರ (ಡಿ.21) ಬೆಳಗಾವಿ ಜಿಲ್ಲಾಧಿಕಾರಿ ನಿತೀಶ ಪಾಟಿಲ್ ಸಭೆ ನಡೆಸಿದ್ದಾರೆ.
ಬರಲಿರುವ ಲೋಕಸಭೆ ಚುನಾವಣೆ ಸಂದರ್ಭ ಚುನಾವಣೆ ಪ್ರಚಾರಕ್ಕಾಗಿ ಅಭ್ಯರ್ಥಿಗಳು ಬಳಸುವ ಸಾಮಗ್ರಿಗಳು ಮತ್ತು ಸೇವೆಗಳ ವೆಚ್ಚದ ದರವನ್ನು ಮಾರುಕಟ್ಟೆಯ ನಿರ್ದಿಷ್ಟ ದರ ಆಧರಿಸಿಯೇ ನಿಗದಿಗೊಳಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದರು.
ಆರು ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲೇ ವಿವಿಧ ಸಾಮಗ್ರಿ ಮತ್ತು ಸೇವೆಗಳ ದರ ನಿಗದಿಪಡಿಸಲಾಗಿತ್ತು. ಆದರೆ, ಪ್ರಸ್ತುತ ಮಾರುಕಟ್ಟೆ ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಲಹೆಯನ್ನು ಆಧರಿಸಿ, ದರಗಳಲ್ಲಿ ಅಗತ್ಯ ಪರಿಷ್ಕರಣೆ ಮಾಡಲಾಗುವುದು ಎಂದರು. ಈ ವೇಳೆ ಚುನಾವಣಾ ಪ್ರಚಾರ ಸಂದರ್ಭ ಬಳಸಲಾಗುವ ಹೂವುಗಳ ದರ ಕಡಿಮೆಗೊಳಿಸಬೇಕು ಎಂದು ಪ್ರತಿನಿಧಿಗಳು ಸಲಹೆ ನೀಡಿದರು.
2024 ಜನವರಿ 1ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗುವುದು ಅಲ್ಲಿಯವರೆಗೂ ಚುನಾವಣಾ ಆಯೋಗದ ಮಾರ್ಗಸೂಚಿ ಮತ್ತು ನಿರ್ದೇಶನದ ಪ್ರಕಾರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ನಡೆಯಲಿದೆ. ಚುನಾವಣೆಗೆ ಸಾಕಷ್ಟು ಕಾಲಾವಕಾಶವಿದ್ದು ನಗರದಲ್ಲಿನ ಪುಷ್ಪ ಹರಾಜು ಕೇಂದ್ರದಿಂದ ಸಗಟು ಮಾರುಕಟ್ಟೆಯ ದರ ಪಡೆದುಕೊಂಡು ಪರಿಷ್ಕರಿಸಲಾಗುವುದು. ಹೊಸ ಸಾಮಗ್ರಿ ಅಥವಾ ಸೇವೆಗಳನ್ನು ಸೇರ್ಪಡೆಗೊಳಿಸಲಾಗುವುದು ಎಂದ ಜಿಲ್ಲಾಧಿಕಾರಿ ಅ.27ರಿಂದ ಡಿ.9ರ ಅವಧಿಯಲ್ಲಿ ಮಾಡಿರುವ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿಯಾದ ವಿಜಯಕುಮಾರ ಹೊನಕೇರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಶ್ರೀಶೈಲ ಕಂಕಣವಾಡಿ, ಮಹಾನಗರ ಪಾಲಿಕೆ ಉಪ ಆಯುಕ್ತೆ ರೇಷ್ಮಾ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಾಳಿಕೋಟೆ ಇದ್ದರು.