- ಮಾರ್ಚ್ 29ರಿಂದ ಏಪ್ರಿಲ್ 6ರವರೆಗೆ ಕರಗ ಶಕ್ತ್ಯೋತ್ಸವ
- ಚುನಾವಣಾ ನೀತಿ ಸಂಹಿತೆ ಹಿನ್ನಲೆ ವೇದಿಕೆ ಕಾರ್ಯಕ್ರಮವಿಲ್ಲ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಿಶ್ವವಿಖ್ಯಾತ ಕರಗ ಮಾ. 29ರ ರಾತ್ರಿ ಅದ್ದೂರಿ ರಥೋತ್ಸವ ಮತ್ತು ಮುಂಜಾನೆ 3 ಗಂಟೆಗೆ ಧ್ವಜಾರೋಹಣ ನಡೆಸುವ ಮೂಲಕ ಕರಗಕ್ಕೆ ಅಧಿಕೃತ ಚಾಲನೆ ದೊರೆಯಲಿದೆ.
‘ಕರಗ ಶಕ್ತ್ಯೋತ್ಸವ‘ 11 ದಿನ ನಡೆಯಲಿದೆ. ಈ ವೇಳೆ, ನಾನಾ ಕೈಂಕರ್ಯಗಳು ಜರುಗಲಿವೆ. ಮಾರ್ಚ್ 29ರಿಂದ ಏಪ್ರಿಲ್ 6ರವರೆಗೆ ಕರಗ ಮಹೋತ್ಸವ ನಡೆಯಲಿದೆ. ಪ್ರತಿ ಬಾರಿಯಂತೆ ಈ ವರ್ಷವೂ ಕೂಡಾ ಪೂಜಾರಿ ಜ್ಞಾನೇಂದ್ರ ಅವರು ಕರಗವನ್ನು ಹೊರಲಿದ್ದಾರೆ.
ಏ. 6ರಂದು ಕರಗ ಮೆರವಣಿಗೆ
ಕರಗ ಮೆರವಣಿಗೆ ಏ. 6ರಂದು ರಾತ್ರಿ ಆರಂಭಗೊಳ್ಳಲಿದೆ. ದ್ರೌಪದಮ್ಮನ ಕರಗ ರಾತ್ರಿ 12.30ಕ್ಕೆ ಕುಂಬಾರಪೇಟೆ, ನಗರ್ತಪೇಟೆ, ಗೊಲ್ಲರಪೇಟೆಗಳಲ್ಲಿ ಸಂಚರಿಸಲಿದೆ.
ದಶಕದ ಸಂಪ್ರದಾಯದಂತೆ ಮಸ್ತಾನ್ ಸಾಬ್ ದರ್ಗಾಕ್ಕೆ ಕರಗ ಭೇಟಿ ನೀಡಿ, ಬಳಿಕ ಮರುದಿನ (ಏಪ್ರಿಲ್ 7) ಬೆಳಗ್ಗೆ ಧರ್ಮರಾಯಸ್ವಾಮಿ ದೇವಾಲಯ ತಲುಪಲಿದೆ. ಏಪ್ರಿಲ್ 8ರ ಸಂಜೆ 4 ಗಂಟೆಗೆ ವಸಂತೋತ್ಸವ ಹಾಗೂ ರಾತ್ರಿ 12ಕ್ಕೆ ಧ್ವಜಾರೋಹಣ ಮೂಲಕ 2023 ರ ಕರಗಕ್ಕೆ ತೆರೆ ಬೀಳಲಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಕ್ಕಳ ಕಳ್ಳಿಯನ್ನು ಬಂಧಿಸಿದ ಕಲಾಸಿಪಾಳ್ಯ ಪೊಲೀಸರು
ಕರಗದ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಧರ್ಮದರ್ಶಿ ಲಕ್ಷ್ಮಣ, “ನೂರಾರು ವರ್ಷಗಳಿಂದ ತುಂಬಾ ನಂಬಿಕೆಯಿಂದ ಈ ಕರಗ ಉತ್ಸವವನ್ನು ಮಾಡಲಾಗುತ್ತಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಕರಗ ಉತ್ಸವ ವಿಜೃಂಭಣೆಯಿಂದ ನೆರವೇರಲಿದೆ” ಎಂದರು.
“ಚುನಾವಣಾ ನೀತಿ ಸಂಹಿತೆ ಇರುವುದರಿಂದ ವೇದಿಕೆ ಕಾರ್ಯಕ್ರಮ ಇರುವುದಿಲ್ಲ. ಗಣ್ಯವ್ಯಕ್ತಿಗಳಿಗೂ ಸಾಮಾನ್ಯ ಜನರಂತೆ ದರ್ಶನ ಮಾಡಲು ಅವಕಾಶ ನೀಡಲಾಗುತ್ತದೆ. ವೀರಕುಮಾರರ ಸಂಖ್ಯೆ ಈ ವರ್ಷ ಹೆಚ್ಚಾಗಲಿದೆ. ಈ ಹಿಂದೆ 3,500 ವೀರಕುಮಾರರಿದ್ದರು. ನಾಳೆಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವೀರಕುಮಾರರು ಸೇರ್ಪಡೆಯಾಗಲಿದ್ದಾರೆ” ಎಂದು ಹೇಳಿದರು.
“ಹಿಂದುಗಳು ಮುಸ್ಲಿಮರ ದರ್ಗಾಕ್ಕೆ ಯಾಕೆ ಹೋಗಬೇಕು ಎಂಬ ಕೂಗು ಇದೆ. ಆದರೆ, ಈ ಹಿಂದಿನಿಂದಲೂ ನಮ್ಮ ಹಿರಿಯರು ನಡೆಸಿಕೊಂಡು ಬಂದ ಸಂಪ್ರದಾಯವನ್ನು ನಾವು ಮುನ್ನಡೆಸಬೇಕು. ಕರಗ ಹಿಂದೂ ಮತ್ತು ಮುಸ್ಲಿಂ ಏಕತೆಯನ್ನು ಸಂಕೇತಿಸುತ್ತದೆ” ಎಂದು ತಿಳಿಸಿದರು.