ಬೀದರ್ ಜಿಲ್ಲೆ ಭಾಲ್ಕಿ ಮತಕ್ಷೇತ್ರದ ಶಾಸಕ ಈಶ್ವರ್ ಖಂಡ್ರೆ ಅವರಿಗೆ ರಾಜ್ಯದಲ್ಲಿ ನೂತನವಾಗಿ ರಚನೆ ಆಗಿರುವ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ಒತ್ತಾಯಿಸಿದೆ.
ಕರವೇ ಜಿಲ್ಲಾಧ್ಯಕ್ಷ ಸಂಗಮೇಶ ಗುಮ್ಮೆ ನೇತೃತ್ವದಲ್ಲಿ ಭಾಲ್ಕಿ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
“ಭಾಲ್ಕಿ ಕ್ಷೇತ್ರದಿಂದ ಶಾಸಕ ಈಶ್ವರ ಖಂಡ್ರೆ ಅವರು ಸತತ ನಾಲ್ಕನೆಯ ಬಾರಿಗೆ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಜತೆಗೆ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರೂ ಆಗಿರುವ ಈಶ್ವರ ಖಂಡ್ರೆ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಸಂಕಷ್ಟದ ಸಮಯದಲ್ಲಿ ಪಕ್ಷವನ್ನು ಬಲಪಡಿಸುವ ಕೆಲಸ ಮಾಡಿದ್ದಾರೆ” ಎಂದರು.
“ರಾಜ್ಯದಲ್ಲಿ ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ತರುವಲ್ಲಿ, ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ಗೆ ಹೆಚ್ಚು ಸ್ಥಾನ ತಂದು ಕೊಡುವಲ್ಲಿ ಶಾಸಕ ಈಶ್ವರ ಖಂಡ್ರೆ ಅವರ ಕೊಡುಗೆ ದೊಡ್ಡದಿದೆ. ಸಚಿವರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಹಾಗಾಗಿ ಅವರ ಹಿರಿತನ, ಪಕ್ಷ ಸಂಘಟನೆ, ಪಕ್ಷ ನಿಷ್ಠೆ ಗುರುತಿಸಿ ಶಾಸಕ ಖಂಡ್ರೆ ಅವರಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲವಾದಲ್ಲಿ ತಮ್ಮ ನಿವಾಸದ ಎದುರು ಹೋರಾಟ ಮಾಡಬೇಕಾಗುತ್ತದೆ” ಎಂದು ಮುಖ್ಯಮಂತ್ರಿ ಅವರಿಗೆ ಬರೆದ ಮನವಿ ಪತ್ರದಲ್ಲಿ ಎಚ್ಚರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್; ಕೆಲವರಿಂದ ‘ಮಾನ್ಯ ಅಧ್ಯಕ್ಷರೆ’ ಪದ ಕೇಳಲು ಉತ್ಸುಕಳಾಗಿದ್ದೇನೆ: ನಜ್ಮಾ
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಸಂಜೀವಕುಮಾರ ನಾವದಗಿ, ಪ್ರಮುಖರಾಗಿರುವ ಚಂದು ಸಂಪಂಗೆ, ಆದಿಲ್ ಸಯ್ಯದ್, ದಯಾನಂದ ಸಜ್ಜನಶೆಟ್ಟಿ, ಸಿದ್ದು ಜಮಾದಾರ್, ಮಾಳಸ್ಕಾಂತ ವಾಘೆ, ರಾಜಕುಮಾರ ಡಾವರಗಾಂವೆ, ಸಚಿನ ಸೋನಾಳೆ, ಜಯರಾಜ ಹಚ್ಚಿಗಾಂವೆ, ಬಾಲಾಜಿ ಜಾಯಿಗಾಂವ ಸೇರಿದಂತೆ ಇತರರು ಇದ್ದರು.