ಆರ್ಎಸ್ಎಸ್ನಲ್ಲಿ ತರಬೇತಿ ಪಡೆದಿದ್ದೇನೆ ಎಂದು ಹೇಳುವ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಹೊಡಿ, ಬಡಿ, ಕೊಲ್ಲು ಎಂದು ಮಾತಾಡುತ್ತಾರೆ ಅವರ ಹೇಳಿಕೆ ಬಗ್ಗೆ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಭಗೀರಥ ಗುರುಪೀಠದ ಕಾರ್ಯಕ್ರಮಕ್ಕೆ ತೆರಳುವ ಮೊದಲು ಹೆಲಿಪ್ಯಾಡ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ವಿಭಜನೆ ಬಗ್ಗೆ ಮಾತನಾಡುವವರಿಗೆ ಗುಂಡಿಕ್ಕಿ ಕೊಲ್ಲುವ ಕಾನೂನು ರೂಪಿಸಬೇಕು ಎಂದು ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ಉತ್ತರ ನೀಡಿ, ಈಶ್ವರಪ್ಪ ಹೇಳಿಕೆ ನೋಡಿದರೆ ಆರ್ಎಸ್ಎಸ್ ಎಂತಹ ಪಾಠ ಕಲಿಸುತ್ತದೆ ಎಂದು ತಿಳಿಯುತ್ತಿದೆ. ಸಂಸದ ಡಿ.ಕೆ.ಸುರೇಶ್ ಅವರನ್ನು ಗುಂಡಿಕ್ಕಿ ಕೊಲ್ಲಿ ಅಂತಿದ್ದಾರೆ. ಒಂದು ರಾಜಕೀಯ ಪಕ್ಷದ ಮುಖಂಡರಾಗಿ ಈ ರೀತಿ ಹೇಳಿಕೆಗಳನ್ನು ನೀಡುತ್ತಾರೆ. ಇವರನ್ನು ರಾಜಕೀಯ ಧುರೀಣರು ಎಂದು ಕರೆಯಬೇಕಾ ಎಂದು ಪಶ್ನಿಸಿದರು.
ಅಧಿಕಾರಿಗಳು 40% ಲಂಚ ಕೇಳುತ್ತಿದ್ದಾರೆ ಎಂಬ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ ಮಾಡುವ ಬದಲು ನಾಗಮೋಹನ್ ದಾಸ್ ಸಮಿತಿಗೆ ದೂರು ನೀಡಲಿ ಯಾವ ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆ ಎಂದು ಸಮಿತಿಗೆ ತಿಳಿಸಲಿ ಎಂದು ಹೇಳಿದರು.
ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಸಚಿವೆ ನಿರ್ಮಾಲ ಸಿತಾರಾಮನ್ 5,300ಕೋಟಿ ಬಜೆಟ್ನಲ್ಲಿ ಘೋಷಿಸಿದ್ದರು. ಆದರೆ, ಇದೂವರೆಗೆ ಭದ್ರಾ ಯೋಜನೆಗೆ ಒಂದು ನಯಾಪೈಸೆ ಕೊಟ್ಟಿಲ್ಲ. ಯಾಕೆ ಎಂಬುದನ್ನು ರಾಜ್ಯದ ಸಂಸದರು ಕೇಳಬೇಕಲ್ಲವೇ? ಎಂದು ಪ್ರಶ್ನಿಸಿದ ಅವರು, ನಾನು ಸೇರಿದಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ನಿರ್ಮಾಲ ಸೀತಾರಾಮನ್ ಹಾಗೂ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು ಕೂಡ ಹಣ ನೀಡಿಲ್ಲ ಎಂದು ದೂರಿದರು.
ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಒಂದು ವರ್ಷ ಟ್ಯಾಕ್ಸ್ ಬೇಡ ಎಂದು ಹೇಳಿದ್ದರು ನರೇಂದ್ರ ಮೋದಿ ಆಗ ಹೇಳಿದ್ದು ದೇಶ ವಿರೋಧಿ ಹೇಳಿಕೆಯೇ ಎಂದು ಪ್ರಶ್ನಿಸಿ. ಮಿಸ್ಟರ್ ಮೋದಿ ಅವರಿಂದ ಆಗ ಒಂದು ಮಾತು. ಈಗ ಒಂದು ಮಾತು ಎಂದು ಲೇವಡಿ ಮಾಡಿದರು.
ಈ ವೇಳೆ ಸಚಿವ ಕೆ.ಎಚ್.ಮುನಿಯಪ, ಡಿ.ಸುಧಾಕರ್, ಶಾಸಕ ಬಿ.ಜಿ.ಗೋವಿಂದಪ್ಪ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಎಚ್. ಆಂಜನೇಯ ಇತರರು ಜೊತೆಯಲ್ಲಿದ್ದರು.