ಗೆದ್ದ ವ್ಯಕ್ತಿಗೆ ಚಪ್ಪಾಳೆ ಹೊಡೆಯುವುದಕ್ಕಿಂತ ಬಿದ್ದ ವ್ಯಕ್ತಿಯನ್ನು ಎತ್ತಿ ನಿಲ್ಲಿಸುವುದೇ ಶ್ರೇಷ್ಠ ಕೆಲಸ ಎಂದು ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್ ರಂಗಾರೆಡ್ಡಿ ಹೇಳಿದರು.
ಚಿತ್ರದುರ್ಗದ ಕೋಟೆನಾಡು ಬುದ್ಧ ವಿಹಾರದಲ್ಲಿ ‘ಮಾನವನ ಶ್ರೇಷ್ಠತೆಗೆ ನೈತಿಕತೆಯೇ ಸಾಧನ’ ಎಂಬ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಒಳ್ಳೆಯದನ್ನು ಕಲಿತು ಮತ್ತೊಬ್ಬರಿಗೆ ಒಳ್ಳೆಯ ವ್ಯಕ್ತಿಯಾಗುತ್ತಾನೆ. ಮನುಷ್ಯ ತನ್ನನ್ನು ತಾನು ಪ್ರೀತಿಸುವ ಬದಲು ತನ್ನ ಸಹಜೀವಿ ಗಳ ಪ್ರೀತಿಸಿದಾಗ ಮಾತ್ರ ಬದುಕಿಗೆ ಅರ್ಥ ಬರುತ್ತದೆ. ಆದ್ದರಿಂದಲೇ ಪಾಟೀಲ್ ಪುಟ್ಟಪ್ಪನವರು ‘ಮಾನವ ಕುಲವೇ ನಮ್ಮ ಕುಟುಂಬ, ಪ್ರಪಂಚವೇ ನಮ್ಮ ಮನೆ’ ಎಂದಿದ್ದಾರೆ. ವ್ಯಕ್ತಿ ಅಥವಾ ಸಂಸ್ಥೆಗಳು ಸ್ವಾರ್ಥ ಮತ್ತು ವ್ಯಕ್ತಿ ಪ್ರತಿಷ್ಠೆಗಳನ್ನು ಬಿಟ್ಟಾಗ ಮಾತ್ರ ಬೆಳವಣಿಗೆಯಾಗಲು ಸಾಧ್ಯ ಎಂದರು.
ಅಂಬೇಡ್ಕರ್ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಮಾತನಾಡಿ, “ಭಾರತವು ಸೇರಿದಂತೆ ಇಡೀ ಜಗತ್ತಿನ ಪ್ರಜ್ಞಾವಂತರನ್ನು ತನ್ನ ಉದಾತ್ತ ಚಿಂತನೆ ಗಳಿಂದ ಸೆಳೆದಿದ್ದ ಭಗವಾನ್ ಬುದ್ಧರ ಇತಿಹಾಸವು ಹಲವಾರು ಜಾತಕ ಮತ್ತು ಅಶ್ವಘೋಷನ ಕಥೆಗಳ ಮೂಲಕ ಸೃಷ್ಟಿಯಾಗಿ ಅನೇಕ ಸಂದೇಹ ಮತ್ತು ಗೊಂದಲಗಳನ್ನು ಸೃಷ್ಟಿ ಮಾಡಿತ್ತು” ಎಂದರು.
“ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಆಳವಾದ ಅಧ್ಯಯನದ ಮೂಲಕ ರಚಿಸಿದ ಬುದ್ಧ ಮತ್ತು ಆತನ ದಮ್ಮ ಕೃತಿಯು ಬುದ್ಧನ ಕುರಿತಾದ ಎಲ್ಲಾ ಸಂಶಯಗಳನ್ನು ನಿವಾರಿಸಿತು. ದಮ್ಮದ ದೈನಂದಿನ ಆಚರಣೆಯ ಹೆಸರಿನಲ್ಲಿ ಒಳ ನುಗಿದ್ದ ಮೌಡ್ಯದ ವೈದಿಕ ಆಚರಣೆಗಳನ್ನು ಹೊರಹಾಕಿರುವ ಬುದ್ಧ ಮತ್ತು ಆತನ ದಮ್ಮ ಕೃತಿಯೇ ಇಂದು ನವ ಬೌದ್ಧರಿಗೆ ನಂಬಲರ್ಹವಾದ ಅಮೂಲ್ಯ ಬೌದ್ಧ ದರ್ಶನ ಕೃತಿಯಾಗಿದೆ. ಈ ಕೃತಿಯ ಜೊತೆಗೆ ಬಾಬಾ ಸಾಹೇಬರು ರಚಿಸಿರುವ ‘ಕ್ರಾಂತಿ ಪ್ರತಿಕ್ರಾಂತಿ’ ಕೃತಿಯನ್ನು ಪೂರ್ತಿಯಾಗಿ ಅರ್ಥ ಮಾಡಿಕೊಂಡಾಗ ಮಾತ್ರ ಬುದ್ಧ ದಮ್ಮದ ಬಗ್ಗೆ ಬಾಬಾ ಸಾಹೇಬರ ಪೂರ್ಣ ದೃಷ್ಟಿಕೋನ ಅರಿಯಲು ಸಾಧ್ಯ” ಎಂದರು.
ಈ ಸಂದರ್ಭದಲ್ಲಿ ಕೋಟೆ ನಾಡು ಬುದ್ಧ ವಿಹಾರದ ಕಾರ್ಯಾಧ್ಯಕ್ಷ ಬಿ.ಪಿ. ಪ್ರೇಮನಾಥ್ ಅಧ್ಯಕ್ಷತೆವಹಿಸಿದ್ದರು. ಸ್ಕೌಟ್ಸ್ ಅಂಡ್ ಗೈಡ್ಸ್ ನಿವೃತ್ತ ಪ್ರಾಂಶುಪಾಲ ಬಿ.ಮಂಜುನಾಥ್, ನಿವೃತ್ತ ಮುಖ್ಯೋಪಾಧ್ಯಯ ಟಿ. ತಿಮ್ಮಪ್ಪ, ಜಿಲ್ಲಾ ಖಜಾನೆಯ ಎಸ್.ಆರ್.ಬೈಯಣ್ಣ, ಅಂಬೇಡ್ಕರ್ಕಾಲೇಜ್ ಉಪನ್ಯಾಸಕ ಈ. ನಾಗೇಂದ್ರಪ್ಪ ಮಾತನಾಡಿದರು. ನೀತಿಗೆರೆ ಮಂಜಪ್ಪ, ನನ್ನಿವಾಳ ರವಿಕುಮಾರ್, ಭೀಮನಕೆರೆ ತಿಪ್ಪೇಸ್ವಾಮಿ, ಬನ್ನಿಕೋಡು ರಮೇಶ್, ತಣಿಗೆಹಳ್ಳಿ ರುದ್ರಪ್ಪ ಇತರರು ಭಾಗವಹಿಸಿದ್ದರು.