ಸರ್ಕಾರದಿಂದ ಬರ ಘೋಷಣೆಯಾದ ದಿನದಿಂದ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರವಹಿಸಿ, ಇಲ್ಲವಾದರೆ ಸೂಕ್ತ ಕ್ರಮ ಜರುಗಿಸಲಾಗುತ್ತದೆಂದು ಚಿತ್ರದುರ್ಗ ಜಿಲ್ಲಾಡಳಿತ ಸರ್ಕಾರ ಎಚ್ಚರಿಕೆ ನೀಡಿತ್ತು. ಆದರೂ ಸಹ ಜಿಲ್ಲೆಯ ಮೊಳಕಾಲ್ಮುರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್ ವಿ ಮಂಜುನಾಥ್ ನಿರ್ಲಕ್ಷ್ಯ ತೋರಿದ್ದರು.
ಕುಡಿಯುವ ನೀರು ಸರಬರಾಜಿನಲ್ಲಿ ನಿರ್ಲಕ್ಷ್ಯ ಹಾಗೂ ಖಾತೆ ಬದಲಾವಣೆ ಅರ್ಜಿಗಳನ್ನು ವಿಲೇವಾರಿ ಮಾಡುವಲ್ಲಿ ವಿಳಂಬ ಮಾಡುತ್ತಿದ್ದರು. ಈ ಎಲ್ಲವನ್ನೂ ಗಮನಿಸಿದ ಜಿಲ್ಲಾಡಳಿತ ಎಲ್ ವಿ ಮಂಜುನಾಥ್ ಅಮಾನತು ಮಾಡಿ ಆದೇಶ ಹೊರಡಿಸಿದೆ.
ಮುಖ್ಯಾಧಿಕಾರಿ ಮಂಜುನಾಥ್ ಇಲ್ಲಿಗೆ ವರ್ಗಾವಣೆಯಾಗಿ ಬಂದಾಗಿನಿಂದಲೂ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಉಡಾಫೆ ಉತ್ತರ ನೀಡುತ್ತಾರೆ. ನಾಗರಿಕರಿಗೆ ಬೇಕಾಬಿಟ್ಟಿ ಉತ್ತರ ನೀಡಿ ಕಳುಹಿಸುತ್ತಾರೆಂದು ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯರು ಆರೋಪಿಸಿದ್ದರು. ಈಚೆಗೆ ಚಿತ್ರದುರ್ಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ ಮನವಿಯನ್ನೂ ಸಲ್ಲಿಸಿದ್ದರು.
ಕುಡಿಯುವ ನೀರಿಗೆ ಸಂಬಂಧಪಟ್ಟ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಉದಾಸೀನ ತೋರಿರುವ ಜತೆಗೆ ಈ ಬಗ್ಗೆ ಪಂಚಾಯಿತಿ ಸಿಬ್ಬಂದಿ ಮಾತಿಗೂ ಸ್ಪಂದನೆ ನೀಡುತ್ತಿರಲಿಲ್ಲ. ಖಾತೆ ಬದಲಾವಣೆ ಮತ್ತು ಇ-ಸ್ವತ್ತು ಮಾಡಿಕೊಡಲು ತಹಶೀಲ್ದಾರ್ ಅನುಮತಿ ಅಗತ್ಯ. ಆಸ್ತಿಗಳು ಗ್ರಾಮ ಠಾಣಾ ಹೊರಗಡೆ, ಒಳಗಡೆ ಎಂಬ ವಿಷಯ ಮುಂದಿಟ್ಟುಕೊಂಡು ಸಾರ್ವಜನಿಕರಲ್ಲಿ ಅನಗತ್ಯ ಗೊಂದಲ ಸೃಷ್ಟಿಸಿರುವುದು ಕಂಡುಬಂದಿರುವುದನ್ನು ಉಲ್ಲೇಖಿಸಿ ಜಿಲ್ಲಾಧಿಕಾರಿ ಟಿ ವೆಂಕಟೇಶ್ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮೈತ್ರಿ ಪಾಲಿಸಲು ಬಿಜೆಪಿ ನಿರ್ದೇಶನ, ಎನ್ಡಿಎ ಅಭ್ಯರ್ಥಿಗೆ ಬೆಂಬಲ: ಮಾಜಿ ಶಾಸಕ ಶಿವಶಂಕರ್
“ಮಾರ್ಚ್ 21ರಂದು ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಇ-ಮೇಲ್ ಮೂಲಕ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದರೂ ಸ್ಪಂದನೆ ನೀಡದ ಜತೆಗೆ ಮೊಬೈಲ್ ಸಂಪರ್ಕಕ್ಕೂ ಸಿಗದ ಕಾರಣ, ಅಂತಿಮವಾಗಿ ಪಂಚಾಯಿತಿ ಕಚೇರಿಗೆ ಭೇಟಿ ನೀಡಿದಾಗ ನಾಗರಿಕರು ಮತ್ತು ಪಟ್ಟಣ ಪಂಚಾಯಿತಿ ಸದಸ್ಯರು ಸಲ್ಲಿಸಿದ್ದ ಆಕ್ಷೇಪಣೆಗಳನ್ನು ಪರಿಗಣಿಸಿ ಅಮಾನತು ಮಾಡಲಾಗಿದೆ” ಎಂದು ಆದೇಶದಲ್ಲಿ ಉಲ್ಲೇಖಿಸಿದೆ.