ಎಎಪಿ ಯಿಂದ ಆಯ್ಕೆಯಾಗಿದ್ದ ಏಕೈಕ ಸಂಸತ್ ಸದಸ್ಯ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪಂಜಾಬ್ನ ಜಲಂಧರ್ ಕ್ಷೇತ್ರದ ಸಂಸದ ಸುಶೀಲ್ ಕುಮಾರ್ ರಿಂಕು ಹಾಗೂ ಪಶ್ಚಿಮ ಜಲಂಧರ್ನ ಶಾಸಕ ಶೀತಲ್ ಅಂಗುರಾಲ್ ಅವರು ಇಂದು ದೆಹಲಿಯ ಮುಖ್ಯ ಕಚೇರಿಯಲ್ಲಿ ಬಿಜೆಪಿಗೆ ಸೇರಿದರು.
ಸುಶೀಲ್ ಕುಮಾರ್ ರಿಂಕು ಅವರು 2023ರ ಲೋಕಸಭೆಯ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಈ ಮೊದಲು ಕಾಂಗ್ರೆಸ್ನಲ್ಲಿದ್ದ ರಿಂಕು 2022ರ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡ ನಂತರ ಎಎಪಿಗೆ ಸೇರ್ಪಡೆಗೊಂಡಿದ್ದರು.
ರಿಂಕು ವಿರುದ್ಧ ಪಶ್ಚಿಮ ಜಲಂಧರ್ನ ವಿಧಾನಸಭಾ ಕ್ಷೇತ್ರದಲ್ಲಿ 2022ರಲ್ಲಿ ಜಯ ಸಾಧಿಸಿದ್ದ ಎಎಪಿಯ ಶಾಸಕ ಶೀತಲ್ ಅಂಗುರಾಲ್ ಕಮಲ ಪಕ್ಷಕ್ಕೆ ಸೇರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಆಳುವವರ ಕೊಡಲಿಗೆ ಹಾಡಹಗಲೇ ಬಲಿಯಾಗತೊಡಗಿವೆ ಒಕ್ಕೂಟದ ಬೇರುಗಳು
ಸುಶೀಲ್ ಕುಮಾರ್ ರಿಂಕು ಅವರು 543 ಸಂಸತ್ ಸದಸ್ಯರಲ್ಲಿ ಎಎಪಿಯ ಏಕೈಕ ಸಂಸದರಾಗಿದ್ದರು. ಬಿಜೆಪಿಗೆ ಜಿಗಿದಿರುವ ರಿಂಕು ತಮ್ಮ ಸ್ವಕ್ಷೇತ್ರದಿಂದಲೇ ಲೋಕಸಭಾ ಚುನಾವಣೆಗೆ ಕಮಲ ಪಕ್ಷದಿಂದ ಸ್ಪರ್ಧಿಸುವ ಸಾಧ್ಯತೆಯಿದೆ.
“ನನಗೆ ಅಧಿಕಾರದ ದಾಹವಿಲ್ಲ.ಜಲಂಧರ್ನ ಒಳಿತಿಗಾಗಿ ಹಾಗೂ ಅಭಿವೃದ್ಧಿಪಡಿಸುವ ಕಾರಣದಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ” ಎಂದು ಸುಶೀಲ್ ಕುಮಾರ್ ರಿಂಕು ತಿಳಿಸಿದ್ದಾರೆ.
ಪಂಜಾಬ್ನ ಒಟ್ಟು 13 ಲೋಕಸಭಾ ಕ್ಷೇತ್ರಗಳಿಗೆ ಜೂನ್ 1ರಂದು, ಕೊನೆಯ ಹಾಗೂ ಏಳನೇ ಹಂತದ ಚುನಾವಣೆಯಲ್ಲಿ ಮತದಾನ ನಡೆಯಲಿದೆ.