ಅಲೆಮಾರಿ, ಅರೆಅಲೆಮಾರಿ ಸಮುದಾಯಗಳಿಗೆ ಭೂಮಿ, ವಸತಿ ಹಾಗೂ ಮೂಲ ಸೌಲಭ್ಯ ನೀಡಬೇಕೆಂದು ಅಲೆಮಾರಿ, ಅರೆಅಲೆಮಾರಿ ಒಕ್ಕೂಟದ (ಎಸ್ಸಿ/ಎಸ್ಟಿ) ಮುಖಂಡರು ಆಗ್ರಹಿಸಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಒಕ್ಕೂಟದ ಮುಖಂಡರು, “ಜಿಲ್ಲೆಯಲ್ಲಿ ಅಲೆಮಾರಿ, ಅರೆಅಲೆಮಾರಿ ಸಮುದಾಯಗಳಲ್ಲಿ ಸುಮಾರು 50,000ಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ನಾಗರಿಕ ಮೂಲಭೂತ ಸೌಲಭ್ಯಗಳಿಂದ ವಂಚಿತ ಸಮುದಾಯವಾಗಿದೆ. ಭಿಕ್ಷೆ ಬೇಡಿ ಜೀವನ ನಡೆಸುವ ಅಲೆಮಾರಿಗಳಿಗೆ ಭೂಮಿ, ವಸತಿ, ಶಿಕ್ಷಣ, ಸಾಮಾಜಿಕ ಸ್ಥಾನಮಾನ, ರಾಜಕೀಯ ವ್ಯವಸ್ಥೆ ಸೇರಿದಂತೆ ಯಾವುದೇ ಸ್ಥನಮಾನಗಳು ಇಲ್ಲದಂತಾಗಿದೆ. ಅಲೆಮಾರಿಗಳು ಊರಿಂದ ಊರಿಗೆ ಅಲೆದು ಭಿಕ್ಷೆ ಬೇಡಿ ಕಲೆಗಳನ್ನು ಪ್ರದರ್ಶನ ಮಾಡಿ ಜೀವನವನ್ನು ನಡೆಸಿಕೊಂಡು ಬಂದ ಈ ನೆಲದ ಸಮುದಾಯವಾಗಿದ್ದು, ಇಂದು ಸರ್ಕಾರಿ ಸೌಲಭ್ಯಗಳು ಸೇರಿದಂತೆ ನಾಗರಿಕ ಮೂಲ ಸೌಲಭ್ಯಗಳಿಂದ ವಂಚಿತವಾಗಿರುವ ಬಹುದೊಡ್ಡ ಸಮುದಾಯವಾಗಿದೆ” ಎಂದು ಮಾಹಿತಿ ನೀಡಿದರು.
“ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 50,000 ಹೆಚ್ಚು ಜನಸಂಖ್ಯೆ ಹೊಂದಿರುವ ಅಲೆಮಾರಿಗಳಾದ ಸುಡಗಾಡು ಸಿದ್ದ, ಬುಡ್ಗಜಂಗಮ, ಸಿಳ್ಳೆಕ್ಯಾತ, ಚನ್ನದಾಸ, ಹಂದಿಜೋಗಿ, ಕೊರಚ, ಕೊರಮ ಸಮುದಾಯಗಳು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದು, ಇಂತಹ ಸಮುದಾಯಗಳು ಸರ್ಕಾರದ ಯಾವುದೇ ಸೌಲಭ್ಯಗಳಿಲ್ಲದೆ, ಬಟ್ಟೆಯಿಂದ ನಿರ್ಮಾಣ ಮಾಡಿಕೊಂಡಿರುವ ಟೆಂಟ್ಗಳಲ್ಲಿ ವಾಸವಿದ್ದು, ಸರ್ಕಾರ ಅಲೆಮಾರಿ ಸಮುದಾಯಗಳ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಬೇಡಿಕೆಗಳನ್ನು ಜಾರಿ ಮಾಡಬೇಕಾದ ಆದ್ಯ ಕರ್ತವ್ಯವಾಗಿದೆ” ಎಂದು ಒತ್ತಾಯಿಸಿದರು.
“ಅಲೆಮಾರಿ ಜನಾಂಗಕ್ಕಾಗಿ ಸ್ಥಾಪನೆಯಾಗಿರುವ ನಿಗಮಕ್ಕೆ ಪ್ರತಿವರ್ಷ ₹500 ಕೋಟಿ ರೂಪಾಯಿ ನೀಡಬೇಕು. ಅಲೆಮಾರಿ ಜನಾಂಗಕ್ಕೆ ಭೂಮಿ, ವಸತಿ, ವ್ಯವಸ್ಥೆಯನ್ನು ಖಾಯಂಗೊಳಿಸಬೇಕು. ಅಲೆಮಾರಿಗಳು ವ್ಯಾಪಾರ ನಡೆಸಲು ಸರ್ಕಾರದಿಂದ ಸರ್ಕಾರಿ ಸೌಲಭ್ಯಗಳನ್ನು ನೀಡಬೇಕು. ಸರ್ಕಾರದ ನಿಗಮಗಳಿಗೆ ಅಲೆಮಾರಿ ಜನಾಂಗದವರಿಗೆ ಆದ್ಯತೆ ನೀಡಬೇಕು. ಇತರೆ ಸರ್ಕಾರಿ ಸೌಲಭ್ಯಗಳು ಸೇರಿದಂತೆ ಈ ಸಮುದಾಯಗಳ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಅಕ್ಕಮಹಾದೇವಿ ವಿವಿಯಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಆಚರಣೆ
ವಿಮುಕ್ತಿ ವಿದ್ಯಾಸಂಸ್ಥೆ ನಿರ್ದೇಶಕ ಆರ್ ವಿಶ್ವಸಾಗರ್, ಸುಡಗಾಡು ಸಿದ್ದರು ಜನಾಂಗದ ಜಿಲ್ಲಾಧ್ಯಕ್ಷ ಕೃಷ್ಣಪ್ಪ, ಅಲೆಮಾರಿ ಸಂಘಟನೆ ಜಿಲ್ಲಾಧ್ಯಕ್ಷ ನಾಗರಾಜು, ಸಿಳ್ಳೆಕ್ಯಾತ ಮುಖಂಡರು, ಅಧ್ಯಕ್ಷರು ಮಾರಿಕಾಂಬ ಕೃಷ್ಣಪ್ಪ, ಚನ್ನದಾಸ ಜನಾಂಗ ಜಿಲ್ಲಾಧ್ಯಕ್ಷ ರಂಗಪ್ಪ ಸೇರಿದಂತೆ ಬಹುತೇಕರು ಇದ್ದರು.