ಮನುಷ್ಯನ ಬದುಕಿನಲ್ಲಿ ಮೂರು ಭಾಗ್ಯಗಳು ಮುಖ್ಯವಾಗಿ ಬೇಕು. ಸುಸಂಸ್ಕೃತ ತಂದೆ-ತಾಯಿಗಳು, ಗುರು ಸಮಾಜದ ಬಗ್ಗೆ ಗೌರವ, ಶಿಷ್ಯರ ಏಳ್ಗೆ ಕಂಡು ಸಂತೋಷಪಡಬೇಕು. ಅರಿವಿನ ಆಗರವಾಗಿರಬೇಕು. ಭಗವಂತನ ಆಶೀರ್ವಾದ ಇರಬೇಕು. ಈ ಮೂರು ಸೌಭಾಗ್ಯಗಳಿದ್ದಾಗ ನಾವು ಭಾಗ್ಯವಂತರಾಗಲು ಸಾಧ್ಯ ಎಂದು ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯ ಎಸ್ ಎಸ್ ರಂಗಮಂದಿರದಲ್ಲಿ ಆಯೋಜಿಸಿದ್ದ ʼಹಳೆ ಬೇರು ಹೊಸ ಚಿಗುರು’ ದವಸ ಸಮರ್ಪಣೆ ಮತ್ತು ಹಿರಿಯ ಚೇತನಗಳಿಗೆ ಅಭಿನಂದನೆಯ ಸಾನ್ನಿಧ್ಯವಹಿಸಿದ್ದ ಅವರು ಮಾತನಾಡಿದರು.
ಮನುಷ್ಯ ಎಷ್ಟು ವರ್ಷ ಬಾಳಿದ ಎನ್ನುವುದಕ್ಕಿಂತ ಆರೋಗ್ಯ ವಂತ ನಾಗಿ, ಎಲ್ಲರ ಪ್ರೀತಿ-ವಿಶ್ವಾಸವನ್ನು ಗಳಿಸಿಕೊಂಡು ಸಮಾಜದಲ್ಲಿ ಗೌರವಯುತವಾಗಿ ಬಾಳುವುದು ಮುಖ್ಯ. ಹಿರಿಯರನ್ನು ಗೌರವಿಸದ ಸಮಾಜ, ಜಾಗೃತ ಸಮಾಜ ವಾಗಲಾರದು ಸಂಸ್ಕಾರವಂತ ಸಮಾಜವಾಗಲಾರದು. ಮತ್ತು ಮಠ, ಮನೆಯಲ್ಲಿರುವಂಥ ಹಿರಿಯರನ್ನು ಗೌರವಿಸಬೇಕು. ಆಗ ಸುಸಂಸ್ಕೃತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ನ್ಯಾಯಮೂರ್ತಿ ಹೆಚ್ ಬಿಲ್ಲಪ್ಪ ಮಾತನಾಡಿ ಸತ್ಸಂಗ ಎನ್ನುವುದನ್ನು ತುಂಬಾ ಶ್ರೇಷ್ಟವಾಗಿರುವಂಥದ್ದು. ಅಂತಹ ಸತ್ಸಂಗದ ಕಾರ್ಯ ನಿರಂತರವಾಗಿ ನಡೆಯಬೇಕು. ಹಿರಿಯರಿಗೆ ಗೌರವಿಸುವುದು ಸಂಸ್ಕಾರವಂತ ಸಮಾಜದ ಕರ್ತವ್ಯ. ಸತ್ಯಕ್ಕಾಗಿ ಹೋರಾಟ ಮಾಡಿದ ವ್ಯಕ್ತಿಗಳು ದುರಂತ ಸಾವಿನಲ್ಲಿ ಅಂತ್ಯವಾಗಿರುವುದು ತುಂಬಾ ನೋವಿನ ಸಂಗತಿ. ನಮ್ಮ ಹಿರಿಯರು ಮನೆಯಲ್ಲಿ ಪ್ರಶ್ನೆ ಮಾಡಿ ನಮ್ಮನ್ನು ಸರಿದಾರಿಗೆ ನಡೆಸುವಂಥವರನ್ನು ಗೌರವಿಸುವ ಕಾರ್ಯ ನಡೆಯಬೇಕು ಎಂದರು.
ನಮ್ಮ ಹಿರಿಯರು ಅಪಾರ ಜೀವನಾನುಭವನ್ನು ಪಡೆದು ಬದುಕಿ ಬಾಳಿದವರು. ನಮ್ಮ ಸಮಾಜಕ್ಕೆ ಮುಂದಿನ ದಿನಗಳಲ್ಲಿ ಹಿರಿಯರ ಮಾರ್ಗದರ್ಶನ ತುಂಬಾ ಅಗತ್ಯ. ನಾವೆಲ್ಲರೂ ನಮ್ಮ ಮನೆಗಳನ್ನು ಆಶ್ರಮದ ರೀತಿಯಲ್ಲಿಟ್ಟುಕೊಳ್ಳಬೇಕು. ನಮ್ಮ ಮನಸ್ಸಿನಲ್ಲಿ ಕೆಟ್ಟ ಕೆಟ್ಟ ಮೃಗೀಯ ಆಲೋಚನೆಗಳಿವೆ, ಗುಣಗಳಿವೆ. ಅಂತಹ ಗುಣಗಳನ್ನು ದೂರ ತಳ್ಳಿ ಮನುಷ್ಯತ್ವದ ಗುಣಗಳನ್ನು ಅಳವಡಿಸಿಕೊಂಡಾಗ ಮಾತ್ರ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲಿಕ್ಕೆ ಸಾಧ್ಯ ಎಂದು ಆಶಿಸಿದರು.
ಅತಿಥಿಗಳಾಗಿ ಆಗಮಿಸಿದ್ದ ಚಟ್ನಳ್ಳಿ ಮಹೇಶ್ ಮಾತನಾಡಿ, ನಮ್ಮ ವಚನಕಾರರು ಹಿರಿತನಕ್ಕೆ ಹೆಚ್ಚು ಮಹತ್ವವನ್ನು ಕೊಟ್ಟಿದ್ದರು. ವಯಸ್ಸಿನಲ್ಲಿ ಕಿರಿಯರಾಗಿದ್ದರೂ ಅರಿವಿನಲ್ಲಿ ಹಿರಿಯರಾಗಿದ್ದವರು. ಶರಣರು ಸತ್ಯವನ್ನು ಒರೆಗಲ್ಲಿಗಚ್ಚಿ ನೋಡುತ್ತಿದ್ದರು. ಹಿರಿತನ ಮತ್ತು ಹಿರಿತನದ ಮಧ್ಯೆದಲ್ಲಿದ್ದ ಸಮನ್ವಯತೆಯ ವಿಚಾರಗಳನ್ನು ಅನುಭವ ಮಂಟಪದಲ್ಲಿ ಚರ್ಚಿಸುತ್ತಿದ್ದರು. ಕನ್ನಡ ಸಾಹಿತ್ಯ ಹಿರಿಯರ ಬಗ್ಗೆ ಹೆಚ್ಚಿನ ಮಹತ್ವ ಕೊಟ್ಟಿದೆ. ಹಿರಿಯರನ್ನು ಗೌರವಿಸುವ ಜವಾಬ್ದಾರಿ ಮಠ ಹಾಗೂ ಮನೆಗಳ ಮೇಲಿದೆ, ಇವತ್ತು ಸಾಣೇಹಳ್ಳಿ ಮಠ ಹಿರಿಯರನ್ನು ಗೌರವಿಸುತ್ತಿರುವುದು ಬೇರೆ ಮಠಗಳಿಗೆ ಮಾದರಿಯಾಗಿದೆ ಎಂದು ತಿಳಿಸಿದರು.
ಹಿರೇಕಾನವಂಗಲ ಕಲ್ಲೇಶಪ್ಪ, ಈಶ್ವರಪ್ಪ, ಸಪ್ಪನಹಳ್ಳಿ ಶೆಟ್ಟಿಹಳ್ಳಿಯ ರಾಮಜ್ಜ ಮೊದಲಾದ ಹಿರಿಯ ಚೇತನಗಳನ್ನು ಪಂಡಿತಾರಾಧ್ಯ ಶ್ರೀಗಳು ಶಾಲು, ಹಾರ ಹಾಕಿ, ಫಲಹಾರ, ಸ್ಮರಣಿಕೆಯನ್ನು ನೀಡಿ ಅಭಿನಂದಿಸಿದರು. ಸಮಾಜಕ್ಕಾಗಿ ಶ್ರಮಿಸಿ ನಿಧನರಾದ ಹಿರಿಯ ಚೇತನಗಳನ್ನು ಮೌನಾಚರಣೆಯ ಮೂಲಕ ಸಂತಾಪ ಸೂಚಿಸಿ ಸ್ಮರಿಸಿಕೊಳ್ಳಲಾಯಿತು.
ಆರಂಭದಲ್ಲಿ ಶಿವಸಂಚಾರದ ನಾಗರಾಜ್.ಎಚ್ ಮತ್ತು ತಬಲಸಾಥಿ ಶರಣ್ ವಚನಗೀತೆಗಳನ್ನು ಹಾಡಿದರು. ಆಲದಹಳ್ಳಿ ಓಂಕಾರಪ್ಪ, ಎಸ್.ಆರ್. ಚಂದ್ರಶೇಖರಯ್ಯ, ಎಸ್.ಪಿ. ಶೋಭಾ, ಆರ್ ಚಂದ್ರಪ್ಪ ಹಾಗೂ ಭಕ್ತರು, ಗ್ರಾಮಸ್ಥರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ 2 ಲಕ್ಷ ಹಣ, 41 ಕ್ವಿಂಟಲ್ ರಾಗಿ ಮತ್ತು ಕಡಲೆ, ಅಕ್ಕಿ, ಮೆಣಸಿನಕಾಯಿ ಶ್ರೀಮಠಕ್ಕೆ ಭಕ್ತರು ಸಮರ್ಪಿಸಿದರು.