ಸರ್ಕಾರಿ ಅತಿಥಿ ಗೃಹದಲ್ಲಿ ಜೂಜಾಟ ಆಡುತ್ತಿದ್ದರೆಂಬ ಆರೋಪದ ಮೇಲೆ ನಗರಸಭೆಯ ಮೂವರು ಸದಸ್ಯರು ಸೇರಿ 16 ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿರುವ ವಾಣಿವಿಲಾಸಪುರ ಸರ್ಕಾರಿ ಅತಿಥಿ ಗೃಹದಲ್ಲಿ ಹಿರಿಯೂರು ನಗರಸಭೆ ಸದಸ್ಯರಾದ ಜಗದೀಶ್, ಅಜ್ಜಪ್ಪ ಹಾಗೂ ಅನಿಲ್ ಕುಮಾರ್ ಸೇರಿದಂತೆ 16 ಮಂದಿ ಜೂಜು ಆಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಅತಿಥಿ ಗೃಹದಲ್ಲಿ ಜೂಜಾಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಹಿರಿಯೂರು ಗ್ರಾಮಾಂತರ ಠಾಣೆಯ ಪೊಲೀಸರು ದಾಳಿ ನಡೆಸಿದ್ದಾರೆ. ಜೂಜಾಟ ಆಡುತ್ತಿದ್ದ ಎಲ್ಲರನ್ನೂ ಬಂಧಿಸಲಾಗಿದೆ. ಅವರೆಲ್ಲರಿಂದ ಒಟ್ಟು 4.3 ಲಕ್ಷ ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಜೂಜಾಟದಲ್ಲಿ ಅತಿಥಿ ಗೃಹದ ಸಿಬ್ಬಂದಿ ನಾಸಿರ್ ಕೂಡ ಭಾಗಿಯಾಗಿದ್ದರು ಎಂದು ಆರೋಪಿಸಲಾಗಿದೆ. ಮೂವರು ನಗರಸಭೆ ಸದಸ್ಯರು, ನಾಸಿರ್ ಹಾಗೂ ಎಚ್ ಧನರಾಜ್, ರಾಜಪ್ಪ, ಕೆ.ಎಂ ಕೊಟ್ಟಿಗೆ ಬಾಬು, ಟಿ.ಮಂಜುನಾಥ್, ಮಾರುತಿ, ಮುದಿಯಣ್ಣ, ಕಬಡ್ಡಿ ರವಿ, ಚಿತ್ರಲಿಂಗೇಶ್, ಕೆ.ಮಂಜುನಾಥ್ ಯಾದವ್, ಟಿ.ಕೆ.ಚಿಕ್ಕಣ್ಣ, ಓಂಕಾರೇಶ್ವರ, ಮಣಿಕಂಠ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.