ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಶಕ್ತಿನಗರದ ನಲ್ಯಪದವು ಎಂಬಲ್ಲಿ ಪ್ರಾರಂಭವಾದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೇವಲ ಎರಡು ತರಗತಿ ಕೊಠಡಿಗಳಿದ್ದು, ಸರ್ಕಾರಿ ಪ್ರೌಢಶಾಲಾ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಕಳಪೆ ಮೂಲಸೌಕರ್ಯಗಳ ಹೊರತಾಗಿಯೂ, ನಾಲ್ಕು ವರ್ಷಗಳ ಹಿಂದೆ ಆರಂಭವಾದ ಕಾಲೇಜು ಉತ್ತಮ ಸಂಖ್ಯೆಯ ಪ್ರವೇಶ ಮತ್ತು ಫಲಿತಾಂಶಗಳನ್ನು ಹೊಂದಿದೆ. ಆದರೆ ತರಗತಿ ಕೊಠಡಿಗಳು ಲಭ್ಯವಿಲ್ಲದ ಕಾರಣ ಕಾಲೇಜಿಗೆ ಹೆಚ್ಚಿನ ದಾಖಲಾತಿ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಮೈಸೂರಿನ ಕೆ ಜಿ ಕೊಪ್ಪಲಿನ ಸರ್ಕಾರಿ ಪಿಯು ಕಾಲೇಜನ್ನು ಮಂಗಳೂರಿನ ಶಕ್ತಿನಗರಕ್ಕೆ ಸ್ಥಳಾಂತರಿಸಿ ಸರ್ಕಾರ 2020ರ ನವೆಂಬರ್ 25ರಂದು ಆದೇಶ ಹೊರಡಿಸಿತ್ತು. ನಲ್ಯಪದವು ಕಾಲೇಜು ಜಿಲ್ಲೆಯ 54ನೇ ಸರ್ಕಾರಿ ಪಿಯು ಕಾಲೇಜಾಗಿದ್ದು, ಈ ಹಿಂದೆ ನಗರ ಪ್ರದೇಶದ ಇತರ ಕಾಲೇಜುಗಳನ್ನು ಅವಲಂಬಿಸಿದ್ದ ಶಕ್ತಿನಗರ ಮತ್ತು ಸುತ್ತಮುತ್ತಲಿನ ನೂರಾರು ವಿದ್ಯಾರ್ಥಿಗಳು ಈ ಕಾಲೇಜಿಗೆ ದಾಖಲಾಗುತ್ತಿದ್ದಾರೆ.
ಕಲಾ ವಿಭಾಗದ 11 ವಿದ್ಯಾರ್ಥಿಗಳು ಸೇರಿದಂತೆ 15 ವಿದ್ಯಾರ್ಥಿಗಳೊಂದಿಗೆ ಕಾಲೇಜು ಪ್ರಾರಂಭವಾಗಿರುವುದಾಗಿ ಕಾಲೇಜಿನ ಪ್ರಾಂಶುಪಾಲೆ ಜಯಾನಂದ ಎನ್ ಸುವರ್ಣ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
“ಕುತೂಹಲಕಾರಿ ಸಂಗತಿಯೆಂದರೆ, ಕಾಲೇಜು ಆರಂಭವಾದಾಗ ಎಲ್ಲ ವಿದ್ಯಾರ್ಥಿಗಳು ಪುನರಾವರ್ತಿತರಾಗಿದ್ದರೇ ಹೊರತು, ಹೊಸಬರಲ್ಲ. ಅವರು ಕಳೆದ ಶೈಕ್ಷಣಿಕ ವರ್ಷದಲ್ಲಿ ತಮ್ಮ ದ್ವಿತೀಯ ಪಿಯುಸಿಯನ್ನು ಪೂರ್ಣಗೊಳಿಸಿದ್ದು, ಕಾಲೇಜು ಶೇ.100ರಷ್ಟು ಫಲಿತಾಂಶವನ್ನು ಗಳಿಸಿತ್ತು. ಪ್ರಸ್ತುತ, ಶಕ್ತಿನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುತ್ತಿರುವ 15 ಬಾಲಕಿಯರು ಸೇರಿದಂತೆ 45 ವಿದ್ಯಾರ್ಥಿಗಳು ಇದ್ದಾರೆ” ಎಂದು
“ಪ್ರವೇಶಕ್ಕೆ ಉತ್ತಮ ಬೇಡಿಕೆ ಇದೆ. ಆದರೆ ಮೂಲಸೌಕರ್ಯಗಳಿಲ್ಲದ ಕಾರಣ ನಮಗೆ ಏನೂ ತೋಚದಂತಾಗಿದೆ. ತರಗತಿಗಳು ಸರ್ಕಾರಿ ಪ್ರೌಢಶಾಲಾ ಕಟ್ಟಡದಲ್ಲಿ ನಡೆಯುತ್ತಿದ್ದು, ನಮಗೆ ಎರಡು ತರಗತಿಗಳನ್ನು ನೀಡಲಾಗಿದೆ. ಪ್ರಥಮ ಮತ್ತು ದ್ವಿತೀಯ ವರ್ಷದ ಕಲಾ ಹಾಗೂ ವಾಣಿಜ್ಯ ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಕಲ್ಪಿಸಲು ಈ ಎರಡು ತರಗತಿ ಕೊಠಡಿಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ವಾಣಿಜ್ಯ ವಿಷಯಕ್ಕೆ ಇಬ್ಬರು ಅತಿಥಿ ಬೋಧಕರು ಸೇರಿದಂತೆ ಆರು ಮಂದಿ ಬೋಧಕ ಸಿಬ್ಬಂದಿ ಇದ್ದಾರೆ” ಎಂದು ಸುವರ್ಣ ವಿವರಿಸಿದರು.
“ಕಾಲೇಜಿಗೆ ವಿಜ್ಞಾನ ವಿಭಾಗವೂ ಮಂಜೂರಾಗಿದೆ. ತರಗತಿ ಕೊಠಡಿಗಳು ಮತ್ತು ಪ್ರಯೋಗಾಲಯ ಆಗುವವರೆಗೆ ವಿಜ್ಞಾನ ವಿಭಾಗ ಪ್ರಾರಂಭಿಸಲು ಸಾಧ್ಯವಿಲ್ಲ. ಕಾಲೇಜು, ಯಾವುದೇ ಸೌಲಭ್ಯಗಳಿಲ್ಲದರ ನಡುವೆಯೂ ಕ್ರೀಡೆಯಲ್ಲಿ ಸಾಧನೆ ಮಾಡಿದೆ. ಕಾಲೇಜಿನ ಇಬ್ಬರು ಬಾಲಕಿಯರು ರಾಜ್ಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅಲ್ಲದೆ, ಅದೇ ಕ್ಯಾಂಪಸ್ನಲ್ಲಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 600 ಮಂದಿ ವಿದ್ಯಾರ್ಥಿಗಳು ಮತ್ತು ಪ್ರೌಢಶಾಲೆಯಲ್ಲಿ 150 ಮಂದಿ ವಿದ್ಯಾರ್ಥಿಗಳನ್ನು ಹೊಂದಿದೆ” ಎಂದು ಸುವರ್ಣ ಹೇಳಿದರು.
ಈ ಸುದ್ದಿ ಓದಿದ್ದೀರಾ? ಬಸವಣ್ಣ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ ಸೌಭಾಗ್ಯ ನನ್ನದು: ಸಿಎಂ ಸಿದ್ದರಾಮಯ್ಯ
“ಈ ಹಿಂದೆ ಸುಮಾರು ಎಂಟು ತರಗತಿ ಕೊಠಡಿಗಳನ್ನು ನಿರ್ಮಿಸಲು ಹಣ ಮಂಜೂರು ಮಾಡಲಾಗಿತ್ತು. ಆದರೆ, ಸರ್ಕಾರ ಬದಲಾದ ಕಾರಣ ಟೆಂಡರ್ ಪ್ರಕ್ರಿಯೆ ವಿಳಂಬವಾಯಿತು. ಆದರೂ ಹಣ ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲಾಗುವುದು. ಶಕ್ತಿನಗರದಲ್ಲಿರುವ ಪಿಯು ಕಾಲೇಜು ಆ ಪ್ರದೇಶದ ಪ್ರಮುಖ ಬೇಡಿಕೆಯಾಗಿದ್ದು, ಅದನ್ನು ಆದಷ್ಟು ಬೇಗ ಕಾರ್ಯರೂಪಕ್ಕೆ ತರಲಾಗುವುದು” ಎಂದು ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.