ರಾಜ್ಯದ್ಯಾಂತ ಕೃಷಿಭಾಗ್ಯ ಯೋಜನೆಯಡಿ 30 ಕೃಷಿಹೊಂಡಗಳ ನಿರ್ಮಾಣ ಮಾಡಲಾಗುವುದು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಿಂದ 18ರವರೆಗೆ ಚಾಲನೆಯಲ್ಲಿದ್ದ ಕೃಷಿ ಭಾಗ್ಯ ಯೋಜನೆ ಸ್ಥಗಿತಗೊಂಡಿತ್ತು. ಈಗ ಮತ್ತೆ ಪ್ರಾರಂಭಿಸಲಾಗಿದೆ. ಎನ್ಡಿಆರ್ಎಫ್ನಿಂದ 100 ಕೋಟಿ ಅನುದಾನ ದೊರೆಯಲಿದೆ. ರಾಜ್ಯದಲ್ಲಿ 30 ಸಾವಿರ ಕೃಷಿ ಹೊಂಡಗಳ ನಿರ್ಮಾಣ ಮಾಡಲಾಗುವುದು ಎಂದರು.
ರಾಜ್ಯದಲ್ಲಿ ಮಳೆಯ ಕೊರತೆಯಿಂದ 13ಸಾವಿರ ಕೋಟಿಯಷ್ಟು ಬೆಳೆಹಾನಿಯಾಗಿದೆ. ಕೇಂದ್ರಕ್ಕೆ ಪರಿಹಾರ ಕೋರಿ ಪತ್ರ ಬರೆಯಲಾಗಿದೆ. ಕೇಂದ್ರ ಹಣಕಾಸು ಇಲಾಖೆ ಸಚಿವೆ ನಿರ್ಮಲಾ ಸೀತಾ ರಾಮನ್ ಭೇಟಿಗೆ ಸಮಯ ನೀಡಿರುವ ಹಿನ್ನೆಲೆಯಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಅವರೊಂದಿಗೆ ಭೇಟಿ ಮಾಡಿ, ಬರ ಪರಿಹಾರ ಅನುದಾನವನ್ನ ಆದಷ್ಟು ಬೇಗ ಬಿಡುಗಡೆ ಮಾಡುವಂತೆ ಕೋರಲಾಗುವುದು ಎಂದು ತಿಳಿಸಿದರು.
ನಮಗೆ ದೊರೆತ ಮಾಹಿತಿಯಂತೆ ಬರ ಪರಿಹಾರ ಅನುದಾನದ ಬಿಡುಗಡೆ ಪ್ರಕ್ರಿಯೆ ಬಹುತೇಕ ಪೂರ್ಣವಾಗಿದೆ. ಗುರುವಾರದ ಭೇಟಿ ಸಮಯದ ನಂತರ ಅನುದಾನ ಬಿಡುಗಡೆಯಾಗುವ ಎಲ್ಲ ವಿಶ್ವಾಸವೂ ಇದೆ. ಕೇಂದ್ರದಿಂದ ಅನುದಾನ ಬಿಡುಗಡೆಯಾಗುತ್ತಿದ್ದಂತೆಯೇ ಜಿಲ್ಲಾವಾರು ಬರ ಪರಿಹಾರ ವಿತರಣೆಗೆ ಕೃಷಿ, ತೋಟಗಾರಿಕೆ, ಕಂದಾಯ ಮೂರು ಇಲಾಖೆಗಳು ಎಲ್ಲ ಸಿದ್ಧತೆ ಮಾಡಿಕೊಂಡಿವೆ ಎಂದು ತಿಳಿಸಿದರು.
ಫೂಟ್ಸ್ನಡಿ ಶೇ.100ರಷ್ಟು ರೈತರ ನೋಂದಣಿ ಮುಗಿದಿದೆ. ಕೆಲವಾರು ಕಡೆ ಆರ್ಟಿಸಿ ಜೋಡಣೆ ಮತ್ತಿತರ ತಾಂತ್ರಿಕ ಕಾರಣಗಳಿಂದ ನೋಂದಣಿ ನಡೆಯುತ್ತಿದೆ. ಆದಷ್ಟು ಬೇಗ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಫೂಟ್ ನಡಿ ನೋಂದಣಿಯಾದಂತಹ ರೈತರಿಗೆ ಬರ ಪರಿಹಾರ, ಬೆಳೆ ವಿಮೆ ಒಳಗೊಂಡಂತೆ ಇಲಾಖೆಯ ಸೌಲಭ್ಯಗಳು ದೊರೆಯಲಿವೆ.
ಕೃಷಿ ವಿಶ್ವವಿದ್ಯಾಲಯಗಳನ್ನು ಹೆಚ್ಚು ಬಳಕೆ ಮಾಡಿಕೊಳ್ಳುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೃಷಿ ವಿಶ್ವವಿದ್ಯಾಲಯಗಳು ಸಂಶೋಧನೆ, ಕಡಿಮೆ ಪ್ರಮಾಣದ ನೀರು ಬಳಸಿ ಹೆಚ್ಚು ಇಳುವರಿ ನೀಡುವಂತಹ ಬೆಳೆಗಳು, ಮಣ್ಣಿನ ಫಲವತ್ತತೆ ಆಧಾರದಲ್ಲಿ ಪರ್ಯಾಯ ಬೆಳೆಗಳ ಬೆಳೆಯುವುದು ಒಳಗೊಂಡಂತೆ ರೈತರಿಗೆ ಹೆಚ್ಚಿನ ಮಾಹಿತಿ ನೀಡುವ ಕೆಲಸ ಮಾಡಲಿದ್ದಾರೆ.
ಭತ್ತ, ಕಬ್ಬನ್ನು ಇನ್ನೂ ಹೆಚ್ಚಿನ ಯಾಂತ್ರಿಕವಾಗಿ ಕಟಾವು ಮಾಡು ವಂತಹ 100 ಕೇಂದ್ರ ಪ್ರಾರಂಭಿಸಲಾಗುವುದು. ಭತ್ತದಂತೆ ತೊಗರಿಯನ್ನೂ ನಾಟಿ ಮಾಡುವ ಪ್ರಯೋಗ ಧನಾತ್ಮಕ ಫಲಿತಾಂಶ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲೆಡೆ ವಿಸ್ತರಣೆ ಮಾಡಲಾಗುವುದು.
ಕೇಂದ್ರ ಸರ್ಕಾರ ಯಾಂತ್ರಿಕೃತ ಕೃಷಿಗೆ ಅನುದಾನ ನೀಡಬೇಕಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ, ಕೇಂದ್ರಕ್ಕೆ ಪತ್ರವನ್ನು ಬರೆದಿದ್ದಾರೆ. ಹಣಕಾಸು ಇಲಾಖೆ ಸಚಿವರ ಭೇಟಿ ಸಂದರ್ಭದಲ್ಲಿ ಈ ವಿಷಯವನ್ನೂ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ರೈತರೇ ಹಣ ಖರ್ಚು ಮಾಡಬೇಕು ಎಂಬುದಾಗಿ ಇಂಧನ ಇಲಾಖೆಯ ಹೊಸ ಮಾರ್ಗಸೂಚಿಗೆ ಎಲ್ಲೆಡೆ ವಿರೋಧ, ಆಕ್ಷೇಪಣೆ ಕೇಳಿ ಬರುತ್ತಿರುವ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಇಂಧನ ಇಲಾಖೆ ಸಚಿವರ ಗಮನಕ್ಕೆ ತರಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.