ಲೋಕಸಭಾ ಚುನಾವಣೆಗೆ 90 ದಿನ ಪ್ರಸಾರಕ್ಕೆ ಅವಕಾಶ ನೀಡಿರುವುದು ವಿಶ್ವಗುರು ದೇಶಾದ್ಯಂತ ಭಾಷಣ ಮಾಡುವುದಕ್ಕಾಗಿ. ಅವರ ಮನ್ ಕೀ ಬಾತ್, ಪೂರಿ ಕಿ ಬಾತ್, ಚೌಚೌ ಬಾತ್ ಹೇಳಬೇಕಲ್ಲ ಅದಕ್ಕೆ ಎಂದು ಸಚಿವ ಸಂತೋಷ್ ಲಾಡ್ ವ್ಯಂಗ್ಯವಾಡಿದ್ದಾರೆ.
ಸೋಮವಾರ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಮಾಡಿದ ಸಾಧನೆ ಏನೆಂಬುದನ್ನು ಹೇಳಿ, ಜನರ ಮುಂದಿಡಲಿ” ಎಂದು ಸವಾಲೆಸೆದರು.
ಜನಾರ್ದನ ರೆಡ್ಡಿ ಬಿಜೆಪಿಗೆ ಸೇರ್ಪಡೆ ವಿಚಾರಕ್ಕೆ ಮಾತನಾಡಿದ ಅವರು ಬಿಜೆಪಿ ನಿರ್ಮಾ ವಾಷಿಂಗ್ ಪೌಡರ್ ಇದ್ದಂತೆ. ವಿಪಕ್ಷದಲ್ಲಿದ್ದಾಗ ಕೊಳೆಯಾಗಿದ್ದವರು ಬಿಜೆಪಿ ಸೇರಿದ ಕೂಡಲೇ ಸ್ವಚ್ಛ-ಶುದ್ಧವಾಗಿ ಬಿಡುತ್ತಾರೆ. ಜನಾರ್ದನ ರೆಡ್ಡಿ ವಿರುದ್ದದ ಹಗರಣಗಳ ಬಗ್ಗೆ ದೊಡ್ಡದಾಗಿ ಟೀಕಿಸಿದ್ದ ಬಿಜೆಪಿ ಇದೀಗ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿರುವುದು ಬಿಜೆಪಿಗೆ ಸೋಲಿನ ಭೀತಿ ಕಾಡುತ್ತಿದೆ. ನನ್ನ ಲೆಕ್ಕಾಚಾರದಲ್ಲಿ ಲೋಕಸಭೆಯಲ್ಲಿ ಬಿಜೆಪಿ 160ರಿಂದ 180 ಸ್ಥಾನಗಳಲ್ಲಿ ಮಾತ್ರ ಗೆಲ್ಲಲಿದೆ ಎಂದರು.
ಬಾಂಗ್ಲಾದೇಶದ ಜಿಡಿಪಿ, ತಲಾ ಆದಾಯ ನಮಗಿಂತ ಹೆಚ್ಚಿದೆ. ಇದರ ಬಗ್ಗೆ ಪ್ರಧಾನಿ ಮಾತನಾಡಲಿ. ಪ್ರಧಾನಿ ಮೋದಿಯವರು ನೀಡಿದ್ದ ಕಪ್ಪು ಹಣ, ಉದ್ಯೋಗ ಸೃಷ್ಟಿ ಇನ್ನಿತರ ವಿಷಯಗಳ ಬಗ್ಗೆ ಚರ್ಚೆಗೆ ಬರಲಿ. ಸುದ್ದಿಗೋಷ್ಠಿ ನಡೆಸಲು ಪ್ರಧಾನಿ ಹಿಂದೇಟು ಹಾಕುವುದು ಯಾಕೆ ಎಂದು ಲಾಡ್ ಪ್ರಶ್ನಿಸಿದರು.
ಮೋದಿ, ಜೋಶಿ ಟೀಕೆಗೆ ಕಾಂಗ್ರೆಸ್ ನನಗೆ ಟಾರ್ಗೆಟ್ ನೀಡಿದೆ ಎಂಬುದು ಜೋಶಿಯವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಜೋಶಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡುತ್ತಾರಲ್ಲ ಅವರಿಗೂ ಟಾರ್ಗೆಟ್ ನೀಡಿರಬೇಕಲ್ಲ. ಖಾಸಗಿಯಾಗಿ ಮಾತನಾಡಿದ್ದನ್ನು ಸಾರ್ವಜನಿಕವಾಗಿ ಹೇಳಿಕೆ ನೀಡುವಂತಹದ್ದು ಜೋಶಿಗೆ ಶೋಭೆ ತರದು ಎಂದರು.