ಸೋಲು-ಗೆಲುವು ಜನರ ಕೈಯಲ್ಲಿದೆ. 03 ಲಕ್ಷ ಮತಗಳ ಅಂತರದಿಂದ ಜಯಗಳಿಸುವುದಾಗಿ ಅಷ್ಟೊಂದು ಖಚಿತವಾಗಿ ಹೇಳಬೇಕಾದರೆ ಬಿಜೆಪಿಯು ತನ್ನ ಕುತಂತ್ರದಿಂದ ಇವಿಎಂ ಗದ್ದಲ ಮಾಡಲೂಬಹುದು ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿನೋದ್ ಅಸೂಟಿ ತಿರುಗೇಟು ನೀಡಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 03 ಲಕ್ಷ ಮತಗಳ ಅಂತರದಿಂದ ಜಯಗಳಿಸುವುದಾಗಿ ಹೇಳಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತಿಗೆ ತಿರುಗೇಟು ನೀಡಿದ್ದಾರೆ.
“ನಮ್ಮ ಪಕ್ಷದ ಎಲ್ಲ ಮುಖಂಡರ ಸಲಹೆ ಪಡೆದು ನನಗೆ ಟಿಕೆಟ್ ಕೊಟ್ಟಿದೆ. ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕೆಂಬ ಕಾರಣದಿಂದಲೇ ನನಗೆ ಟಿಕೆಟ್ ಕೊಟ್ಟಿದ್ದು, ಪಕ್ಷದಲ್ಲಿ ಯಾರಿಗೂ, ಯಾವುದೇ ಅಸಮಾಧಾನವಿಲ್ಲ” ಎಂದರು.
“ಕ್ಷೇತ್ರದಲ್ಲಿ ಗ್ಯಾರಂಟಿ ಯೋಜನೆಗಳ ಪರಿಣಾಮ ಆಗಲಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಲೆ ಕೆಲಸಕ್ಕೆ ಬರುವುದಿಲ್ಲ. ಹತ್ತು ತಿಂಗಳ ಹಿಂದೆ ವಿಧಾನಸಭೆ ಚುನಾವಣೆ ಆಗಿದೆ. ಪ್ರಧಾನಿ ಮೋದಿ ನಮ್ಮ ರಾಜ್ಯಕ್ಕೆ ಬಂದು ಹೋಗಿದ್ದರು. ಆದರೂ ಕಾಂಗ್ರೆಸ್ ರಾಜ್ಯದಲ್ಲಿ 135 ಸ್ಥಾನ ಗಳಿಸಿದೆ. ಜನರ ಆರ್ಶೀವಾದದಿಂದ ಸರ್ಕಾರ ಅಡಳಿತ ನಡೆಸುತ್ತಿದೆ” ಎಂದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಪರಮೇಶ್ವರ್, ರಾಜಣ್ಣ, ಮುದ್ದಹನುಮೇಗೌಡ ವಲಸಿಗರು: ಬಿಜೆಪಿ ಅಭ್ಯರ್ಥಿ ಠಕ್ಕರ್
“ಧಾರವಾಡ ಕ್ಷೇತ್ರವು ಬಿಜೆಪಿಗೂ ಮೊದಲು ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಕ್ಷೇತ್ರದ ಜನತೆ ಬದಲಾವಣೆ ಬಯಸುತ್ತಿದ್ದಾರೆ. ಕಾಂಗ್ರೆಸ್ ನುಡಿದಂತೆ ನಡೆದಿದೆ. ಈಗ ಚುನಾವಣೆ ವೇಳೆ ಅನೇಕರು ಸುಳ್ಳು ಅಶ್ವಾಸನೆ ಕೊಡುತ್ತಿದ್ದಾರೆ. ಆದರೆ ಅದಾವುದೂ ಉಪಯೋಗವಾಗುವುದಿಲ್ಲ” ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು.