12ನೇ ಶತಮಾನದಲ್ಲಿ ಜೀವಿಸಿದ್ದ ಕಾಯಕಯೋಗಿ ಸಿದ್ದರಾಮೇಶ್ವರರ ಕೊಡುಗೆ ಅಪಾರವಾದದ್ದು. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ಮಾಜಿ ಮಹಾಪೌರ ಹಾಗೂ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಅಧ್ಯಕ್ಷ ಈರೇಶ ಅಂಚಟಗೇರಿ ಹೇಳಿದರು.
ಧಾರವಾಡ ಜಿಲ್ಲೆಯ ಎತ್ತಿನಗುಡ್ಡದ ಗ್ರಾಮದಲ್ಲಿ ನಡೆದ ಸಿದ್ದರಾಮೇಶ್ವರರ 852ನೇ ಜಯಂತಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಸಿದ್ದರಾಮೇಶ್ವರರು 12ನೇ ಶತಮಾನದಲ್ಲಿ ಅನುಭವ ಮಂಟಪದ ಅಧ್ಯಕ್ಷರಾಗಿದ್ದರು. ಬಸವಣ್ಣ, ಅಲ್ಲಮಪ್ರಭು, ಮಾದರ ಚನ್ನಯ್ಯ, ಚನ್ನಬಸವಣ್ಣ, ಅಕ್ಕಮಹಾದೇವಿ, ಸಿದ್ದರಾಮೇಶ್ವರರು ಹಾಗೂ ಇನ್ನೂ ಅನೇಕ ಶಿವಶರಣೆಯರ ಆದರ್ಶಗಳು ನಮಗೆಲ್ಲ ದಾರಿದೀಪವಾಗಲಿ” ಎಂದು ಆಶಿಸಿದರು.
“ಶಿವಯೋಗಿ ಸಿದ್ದರಾಮೇಶ್ವರರು ವೇಷ ಧರಿಸಿ ಫಲವೇನಯ್ಯ, ವೇಷದಂತೆ ಆಚರಣೆ ಇಲ್ಲದಿದ್ದಾಗ ಎನ್ನುವ ವಚನ ಸಾರಿ ಹೇಳಿದ 12ನೇ ಶತಮಾನದ ಖ್ಯಾತ ಶಿವಶರಣರು ಮತ್ತು ವಚನಕಾರರಾಗಿದ್ದರು” ಎಂದರು.
“ಬಸವತತ್ವ ವೈಚಾರಿಕ ಚಿಂತನೆಯಲ್ಲಿ ಅರಳಿದ ಅವರು, ಉಪದೇಶಿಸಿರುವ ಜ್ಞಾನ ಸಂದೇಶಗಳನ್ನು ಅವಲೋಕನ ಮಾಡಿಕೊಳ್ಳುವುದರ ಮೂಲಕ ಅವುಗಳನ್ನು ತನುಮನಗಳಲ್ಲಿ ಕ್ರಿಯಾತ್ಮಕವಾಗಿ ರೂಪಿಸಿಕೊಳ್ಳುವ ಪ್ರಯತ್ನದೊಂದಿಗೆ ಅವರಿಗೆ ಸಲ್ಲಿಸುವ ನಮನ ನಿಜಕ್ಕೂ ಅರ್ಥಪೂರ್ಣ ಎನಿಸುತ್ತದೆ. ಭೋವಿ ಸಮಾಜಕ್ಕೆ ಸಿದ್ದರಾಮೇಶ್ವರರ ಕೊಡುಗೆ ಅಪಾರವಾಗಿದೆ” ಎಂದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಭೋವಿ ವಡ್ಡರ ಯುವಕ್ರಾಂತಿ ರಾಜ್ಯ ಉಪಾಧ್ಯಕ್ಷ ಮಂಜುನಾಥ ಹಿರೇಮನಿ ಹಾಗೂ ಖ್ಯಾತ ಕುಸ್ತಿಪಟು ಬಸವರಾಜ ವಡ್ಡರ ಅವರನ್ನು ಸನ್ಮಾನಿಸಿದರು. ಅನ್ನ ಸಂತರ್ಪಣೆ ಜರುಗಿತು. ನಂತರ ಮಕ್ಕಳಿಂದ ಹಾಗೂ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಸುದ್ದಿ ಓದಿದ್ದೀರಾ? ಮೈಸೂರು | ಫ್ಲೆಕ್ಸ್ ಅಳವಡಿಕೆಗೆ ನಿಷೇಧ; ಆದೇಶ ಉಲ್ಲಂಘನೆ ಆರೋಪ
ಶ್ರೀ ಸಿದ್ದರಾಮೇಶ್ವರ ಭೋವಿ ವಡ್ಡರ ಸಂಘದ ಅಧ್ಯಕ್ಷ ಬಸವರಾಜ ರುದ್ರಾಪುರ, ಮಾಜಿ ಪಾಲಿಕೆ ಸದಸ್ಯ ವೀರನಗೌಡ ಪಾಟೀಲ, ಮಂಜುನಾಥ ಭೋವಿ, ಶ್ರೀನಿವಾಸ ಉಣಕಲ್, ಸುನೀಲ ಮೋರೆ, ಮಂಜುನಾಥ ಕಮ್ಮಾರ, ಮಂಜುನಾಥ ಹಳಿಯಾಳ, ರಾಜು ರುದ್ರಪುರ, ಬಸಪ್ಪ ರುದ್ರಪುರ, ಬಸವರಾಜ ಆನೆಗುಂದಿ, ಸಂತೋಷ ರುದ್ರಾಪುರ, ರಾಮಣ್ಣ ರುದ್ರಾಪುತ, ತಿಮ್ಮಣ್ಣ ಬಂಡಿವಡ್ಡರ, ಹನುಮಂತ ಬಂಡಿವಡ್ಡರ, ರಾಜೇಶ್ವರಿ ರುದ್ರಾಪುರ, ಲಕ್ಷ್ಮೀ ಬಂಡಿವಡ್ಡರ, ತಿಮ್ಮವ್ವ ಬಂಡಿವಡ್ಡರ, ರಾಜೇಶ್ವರಿ ಮುತ್ತೂರು, ಹುಲುಗವ್ವ ಬಂಡಿವಡ್ಡರ ಸೇರಿದಂತೆ ಇತರರು ಇದ್ದರು.