ರೈತರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸೆಪ್ಟೆಂಬರ್ 14 ರಂದು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿ ಸಂಪೂರ್ಣ ಬಂದ್ಗೆ ಕರ್ನಾಟಕ ರೈತ ಸಂಘ, ರೈತ ಸಂಘಗಳ ಒಕ್ಕೂಟದಿಂದ ಕರೆ ನೀಡಿದ್ದಾರೆ.
ತಾಲೂಕು ರೈತ ಸಂಘದ ಅಧ್ಯಕ್ಷ ಗುರುಪಾದಪ್ಪ ಬಂಕದ ಮಾತನಾಡಿ, “ಈ ವರ್ಷದ ಮಳೆಯ ಅಭಾವದಿಂದಾಗಿ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಸರಿಯಾದ ಸಮಯಕ್ಕೆ ಮಳೆಯಾಗದೆ ಬೆಳೆ ನಾಶವಾಗಿ ರೈತರು ಗೋಳಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಹಾಗೂ ರೈತರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕುಂದಗೋಳ ತಾಲೂಕು ಬಂದ್ಗೆ ಕರೆ ನೀಡಲಾಗುತ್ತಿದೆ” ಎಂದು ಈ ದಿನ.ಕಾಮ್ಗೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ರೈತರ ಅಗತ್ಯತೆ ಈಡೇರಿಕೆಗೆ ಸೆ.25ರಂದು ರಾಜ್ಯಾದ್ಯಂತ ಧರಣಿ
“ಈ ಕುರಿತು ಹಲವು ಬಾರಿ ಮನವಿ ಮಾಡಿಕೊಂಡರೂ ಏನೂ ಪ್ರಯೋಜನವಾಗಿಲ್ಲ. ಹಿಂದಿನ ಸರ್ಕಾರ ಇದ್ದಾಗಿನಿಂದಲೂ ರೈತರ ಗೋಳು ಕೇಳುವವರಿಲ್ಲ. ಈ ಸಲ ರೈತರ ಬೇಡಿಕೆಗಳಿಗೆ ಸ್ಪಂದಿಸದೇ ಇದ್ದಲ್ಲಿ ಧರಣಿ ಸತ್ಯಾಗ್ರಹ ಮಾಡಲು ಅಣಿಯಾಗಬೇಕಾಗುತ್ತದೆ. ರೈತರ ಸಾಲಮನ್ನಾ, ಕುಂದಗೋಳ ತಾಲೂಕು ಬರಪೀಡಿತ ತಾಲೂಕನ್ನಾಗಿ ಘೋಷಿಸುವುದು, ರೈತರ ಬೆಳೆ ವಿಮೆ ಪರಿಹಾರ ನೀಡುವುದು, ನಾಶವಾದ ಬೆಳೆಗೆ ಪರಿಹಾರ ಒದಗಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಬಂದ್ಗೆ ಕರೆ ನೀಡಿದ್ದೇವೆ” ಎಂದು ತಿಳಿಸಿದರು.