ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪೌರಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಪೌರಕಾರ್ಮಿಕರ ಸಂಘ ತಹಸೀಲ್ದಾರ್ ಕಲಗೌಡ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಪಾಲಿಕೆಯ ಕಾಯಂ, ನೇರ ಪಾವತಿ ಹಾಗೂ ಹೊರಗುತ್ತಿಗೆ ಪೌರಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ವೇಳೆ ಮಾತನಾಡಿದ ಪೌರಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ಎಂ. ಗುಂಟ್ರಾಳ, 25 ವರ್ಷಗಳಿಂದ ಅವಳಿ ನಗರದ ಸ್ವಚ್ಛತೆಗೆ ಶ್ರಮಿಸುತ್ತಿರುವ ಪೌರಕಾರ್ಮಿಕರಿಗೆ ಸ್ವಂತ ಸೂರು ಇಲ್ಲವಾಗಿದೆ.
ಕಾಯಂ ಪೌರಕಾರ್ಮಿಕರಿಗೆ ನವನಗರದಲ್ಲಿ 122ನಿವೇಶನಗಳನ್ನು ನೀಡಲಾಗಿದೆ. ಮಂಟೂರ ರಸ್ತೆಯಲ್ಲಿ ನಿರ್ಮಿಸುತ್ತಿರುವ 320ಮನೆಗಳ ನಿರ್ಮಾಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಯಲ್ಲಾಪುರ ಗ್ರಾಮದ ಪಾಲಿಕೆ ಜಾಗದಲ್ಲಿ ಗೃಹಭಾಗ್ಯ ಹಾಗೂ ರಾಜೀವ್ಗಾಂಧಿ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಿ, ಎಲ್ಲಾ ಪೌರಕಾರ್ಮಿಕರಿಗೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗಾಳೆಪ್ಪ ದ್ವಾಸಲಕೇರಿ, ಗಂಗಮ್ಮ ಸಿದ್ರಾಮಪುರ, ದತ್ತಪ್ಪಾ ಆಪುಸಪೇಟ, ಲಕ್ಷ್ಮಿ ಬೇತಾಪಲ್ಲಿ, ರಾಜು ನಾಗರಾಳ, ಅನಿತಾ ಎನಗೊಂಡ, ಯಲ್ಲಪ್ಪ ಪಾಳೇದ, ರೇಣುಕಾ ನಾಗರಾಳ, ಕನಕಪ್ಪ ಕೊಟಬಾಗಿ, ಸುನೀಲ ದೊಡ್ಡಮನಿ, ಭಾಗ್ಯಲಕ್ಷ್ಮಿ ಮಾದರ ಇದ್ದರು.