ಭೂಮಿ ಅ ಖರಾಬ್ ತೆಗೆಯಲು ಒಂದು ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟು ಮುಂಗಡವಾಗಿ 50 ಲಕ್ಷ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರ್ ಲೋಕಾ ಬಲೆಗೆ ಬಿದ್ದಿದ್ದಾರೆ.
ಮುದೋಳ್ ಮೂಲದ ಡೆವಲಪರ್ ಬಳಿ ಒಂದು ಕೋಟಿ ರೂ. ಹಣಕ್ಕೆ ಲಂಚದ ಬೇಡಿಕೆ ಇಟ್ಟಿದ್ದರು. ಅದರಂತೆ ಬುಧವಾರ ಮುಂಗಡವಾಗಿ 50 ಲಕ್ಷ ರೂ. ಹಣ ಪಡೆಯುವಾಗ ತಹಶೀಲ್ದಾರ್ ಸಚ್ಚಿದಾನಂದ ಸಿಕ್ಕಿ ಬಿದ್ದಿದ್ದಾರೆ. ಡೆವಲಪರ್ ಧಾರವಾಡ ತಾಲೂಕಿನ ಯರಿಕೊಪ್ಪ ಬಳಿ ಜಮೀನು ಖರೀದಿಸಿದ್ದು, ಜಮೀನಿನಲ್ಲಿನ ಅ ಖರಾಬ್ ತೆಗೆದು ಡೆವಲಪ್ಮೆಂಟ್ ಮಾಡಲು ಮುಂದಾಗಿದ್ದರು. ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ದಾಳಿ ನಡೆದಿದೆ.
ಈ ಬಗ್ಗೆ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, “ಬಾಗಲಕೋಟೆ ಮೂಲದ ಮಂಜುನಾಥ್ ಅನ್ನೋ ಡೆವಲಪರ್ ಯರಿಕೊಪ್ಪದಲ್ಲಿ 33 ಎಕರೆ ಜಮೀನು ಖರೀದಿಸಿದ್ದಾರೆ. ಇನ್ನೊಂದು ಸ್ವಲ್ಪ ಜಮೀನು ಖರೀದಿಸಲಿದ್ದಾರೆ. ಖರಾಬ್ ಒಂದು ಕಡೆ, ಸಾಗುವಳಿ ಒಂದು ಕಡೆ ಸರ್ವೆ ಮಾಡಿದ್ದರು. ಎಡಿಎಲ್ಆರ್ ಅವರು ಹಿಂದೆ ಪೋಡಿ ಮಾಡಿರುವ ಆದೇಶ ರದ್ದು ಮಾಡಿದ್ದರು. ತಹಶೀಲ್ದಾರ್ಗೆ ಎಡಿಎಲ್ಆರ್ ಖರಾಬ್, ಸಾಗುವಳಿ ಎಲ್ಲಿ ಬರುತ್ತದೆ ಎನ್ನುವ ಬಗ್ಗೆ ಪ್ರಪೋಸಲ್ ಕಳುಹಿಸಿದ್ದರು. ಒಂದು ಎಕರೆ ಜಮೀನು ಹಾಗೂ ಒಂದು ಕೋಟಿ ಕ್ಯಾಶ್ ಅಮೌಂಟ್ ಕೇಳಿದ್ದಾರೆ. ಹಣ ಪಡೆಯುವಾಗ ತಹಶೀಲ್ದಾರ್ ಸಚ್ಚಿದಾನಂದ ಕುಚನೂರ್ ಅವರನ್ನು ಟ್ರ್ಯಾಪ್ ಮಾಡಿದ್ದೇವೆ” ಎಂದು ಹೇಳಿದರು.
“ನಿನ್ನೆ ಬೆಳಗ್ಗೆ(ಬುಧವಾರ) ದೂರು ಕೊಟ್ಟಿದ್ದರು. ರಾತ್ರಿ 9:30 ಗಂಟೆ ಸುಮಾರಿಗೆ ಲೋಕಾಯುಕ್ತ ದಾಳಿ ಆಗಿದೆ. ಕೆಸಿಡಿ ಹತ್ತಿರ ಬರಲು ಹೇಳಿ 50 ಲಕ್ಷ ರೂ. ಹಣ ಪಡೆಯುತ್ತಿದ್ದರು. ದೂರುದಾರರು ಅವರ ಬ್ಯಾಗ್ನಲ್ಲಿ ತಂದಿದ್ದ ಹಣ ತಹಶೀಲ್ದಾರ್ ತಮ್ಮ ಬ್ಯಾಗ್ಗೆ ಹಾಕಿಕೊಂಡಿದ್ದರು. ರಾಜ್ಯದಲ್ಲಿ ಇದು ದೊಡ್ಡ ರೇಡ್ ಆಗಿದೆ” ಎಂದು ವಿವರಿಸಿದರು.




