ಭೂ ದಾಖಲೆಗಳ ತಿದ್ದುಪಡಿ ಮತ್ತು ‘ಖರಾಬು’ ಜಮೀನಿನ ಮಾರ್ಪಾಟು ಮಾಡಿಕೊಡಲು ಬರೋಬ್ಬರಿ 50 ಲಕ್ಷ ರೂ. ಲಂಚ ಪಡೆಯುತ್ತಿದ್ದ ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ಅವರನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ.
ಬಾಗಲಕೋಟೆ ಮೂಲದ ಮಂಜುನಾಥ ಅರಳಿಕಟ್ಟಿ ಎಂಬುವವರು ಧಾರವಾಡ-ಕಲಘಟಗಿ ಮಧ್ಯದ ಯರಿಕೊಪ್ಪ ಗ್ರಾಮದಲ್ಲಿ 33 ಎಕರೆ ಜಮೀನು ಖರೀದಿಸಿದ್ದರು. ಅದರಲ್ಲಿರುವ 13 ಎಕರೆ ಖರಾಬು ಜಮೀನಿನ ಪಹಣಿ ತಿದ್ದುಪಡಿ ಮಾಡಿ ‘ಪೋಡಿ’ ಮಾಡಿಕೊಡಲು ತಹಶೀಲ್ದಾರ್ ಸಚ್ಚಿದಾನಂದ 50 ಲಕ್ಷ ರೂ. ನಗದು ಹಾಗೂ 2 ಎಕರೆ ಜಮೀನು ನೀಡುವಂತೆ ಬೇಡಿಕೆಯಿಟ್ಟಿದ್ದರು ಎಂದು ಆರೋಪಿಸಲಾಗಿದೆ.
ತಹಶೀಲ್ದಾರ್ ಲಂಚಗುಳಿತನದ ವಿರುದ್ಧ ಮಂಜುನಾಥ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಲೋಕಾಯುಕ್ತ ಅಧಿಕಾರಿಗಳು ಮಂಜುನಾಥರಿಗೆಹಣ ಕೊಟ್ಟು, ಮುಂದೆ ಕಳಿಸಿದ್ದಾರೆ. ಬುಧವಾರ ರಾತ್ರಿ ಕರ್ನಾಟಕ ಕಾಲೇಜು (KCD) ಆವರಣದಲ್ಲಿ ಮಂಜುನಾಥ್ ಬಳಿ ತಹಶೀಲ್ದಾರ್ ಲಂಚದ ಹಣ ಪಡೆಯುವಾಗ, ಲೋಕಾಯುಕ್ತ ಎಸ್.ಪಿ ಸಿದ್ದಲಿಂಗಪ್ಪ ನೇತೃತ್ವದ ತಂಡ ದಾಳಿ ನಡೆಸಿದೆ. ಸಚ್ಚಿದಾನಂದ ಅವರನ್ನು ವಶಕ್ಕೆ ಪಡೆದಿದೆ.
ವಿಚಿತ್ರವೆಂದರೆ, ಲಂಚ ಪಡೆಯುತ್ತಿದ್ದ ದಿನವೇ ತಹಶೀಲ್ದಾರ್ ಸಚ್ಚಿದಾನಂದ ತಮ್ಮ ಕಚೇರಿಯಲ್ಲಿ ಸತ್ಯನಾರಾಯಣ ಪೂಜೆ ಮತ್ತು ಸುಮಾರು 2,000ಕ್ಕೂ ಹೆಚ್ಚು ಜನರಿಗೆ ಅನ್ನಸಂತರ್ಪಣೆ ಆಯೋಜಿಸಿದ್ದರು. ಅಡುಗೆ ತಯಾರಿ ಭರದಿಂದ ಸಾಗುತ್ತಿದ್ದ ವೇಳೆಯಲ್ಲೇ ಲೋಕಾಯುಕ್ತ ಅಧಿಕಾರಿಗಳು ಇವರ ಭ್ರಷ್ಟಾಚಾರದ ಜಾಲವನ್ನು ಭೇದಿಸಿ ಬಲೆಗೆ ಕೆಡವಿದ್ದಾರೆ.
ಸದ್ಯ ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ಅವರನ್ನು ಲೋಕಾಯುಕ್ತ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.



