- 2018ರ ಚುನಾವಣೆಗೆ ಹೋಲಿಸಿದರೆ ಈ ಬಾರಿ 4.5 ಪಟ್ಟು ಹೆಚ್ಚಳ
- ರಾಜ್ಯಾದ್ಯಂತ 2,896 ಎಫ್ಐಆರ್ ದಾಖಲು; ಚುನಾವಣಾ ಆಯೋಗ
ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ನಡೆಯುತಿದ್ದು, ರಾಜ್ಯದಲ್ಲಿ ಹಲವು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಹಣದ ಹೊಳೆಯನ್ನೇ ಹರಿಸಿದ್ದಾರೆ ಎಂಬುದಕ್ಕೆ ಚುನಾವಣಾ ಆಯೋಗ ವಶಪಡಿಸಿಕೊಂಡಿರುವ ಭಾರೀ ಮೊತ್ತದ ಹಣ, ಚಿನ್ನ ಮತ್ತು ವಸ್ತುಗಳೇ ಸಾಕ್ಷಿ.
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಈ ವೇಳೆ ಚುನಾವಣಾಧಿಕಾರಿಗಳು ಸಾಕಷ್ಟು ನಗದು ಮತ್ತು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಅದು 2018ರ ಚುನಾವಣೆಗೆ ಹೋಲಿಸಿದರೆ ಈ ವರ್ಷ ವಶಪಡಿಸಿಕೊಂಡಿರುವ ಒಟ್ಟು ಮೌಲ್ಯ 4.5 ಪಟ್ಟು ಹೆಚ್ಚಳವಾಗಿದೆ.
ರಾಜ್ಯಾದ್ಯಂತ ಚುನಾವಣಾಧಿಕಾರಿಗಳು, ಐಟಿ ಅಧಿಕಾರಿಗಳ ದಾಳಿ ವೇಳೆ ಮತ್ತು ಚೆಕ್ ಪೋಸ್ಟ್ಗಳಲ್ಲಿ ಈವರೆಗೆ ಬರೋಬ್ಬರಿ ₹ 147 ಕೋಟಿ ಜಪ್ತಿ ಮಾಡಿದ್ದಾರೆ. ₹ 375 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಅಧಿಕೃತ ಮಾಹಿತಿ ನೀಡಿದೆ.
ಇನ್ನು ಅಕ್ರಮವಾಗಿ ಹಣ ಸಂಗ್ರಹಿಸಿದ್ದ ನೂರಕ್ಕೂ ಅಧಿಕ ಕಡೆ ಐಟಿ ದಾಳಿ ನಡೆಸಿದ್ದು, ಬರೊಬ್ಬರಿ ₹ 42 ಕೋಟಿ ಹಣ ಸೀಜ್ ಮಾಡಿದೆ. ವಿಜಿಲೆನ್ಸ್, ಚೆಕ್ ಪೋಸ್ಟ್ಗಳಲ್ಲಿ ₹ 105 ಕೋಟಿ ನಗದು ಸೇರಿ ಒಟ್ಟು ₹147.46 ಕೋಟಿ ವಶಪಡಿಸಿಕೊಳ್ಳಲಾಗಿದೆ.
₹ 96.60 ಕೋಟಿಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳು. ಸೀರೆ, ಕುಕ್ಕರ್ ಸೇರಿ ₹ 24.21 ಕೋಟಿ ಮೌಲ್ಯದ ಹಲವು ಬಗೆಯ ಉಡುಗೊರೆಗಳು, ₹ 83.66 ಕೋಟಿ ಮೌಲ್ಯದ 22.27 ಲಕ್ಷ ಲೀಟರ್ ಮದ್ಯ, ₹ 23.67 ಕೋಟಿ ಮೌಲ್ಯದ ಮಾದಕ ವಸ್ತುಗಳು (ಡ್ರಗ್) ಸೀಜ್ ಮಾಡಲಾಗಿದೆ. ಚುನಾವಣೆ ಅಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಒಟ್ಟು 2,896 ಎಫ್ಐಆರ್ ದಾಖಲಾಗಿವೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾಧಿಕಾರಿಗಳು ಒಟ್ಟು ₹ 83.93 ಕೋಟಿ ಮೌಲ್ಯದ ವಸ್ತುಗಳು ಮತ್ತು ನಗದು ವಶಪಡಿಸಿಕೊಳ್ಳಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಸ್ವಕ್ಷೇತ್ರದಲ್ಲಿ ಕೈ ಮುಗಿದು ಮತಭಿಕ್ಷೆ ಕೇಳಿದ ಎಚ್ಡಿಕೆ, ಡಿಕೆಶಿ, ಬೊಮ್ಮಾಯಿ: ಬಹಿರಂಗ ಪ್ರಚಾರಕ್ಕೆ ತೆರೆ