ರಾಜ್ಯದಲ್ಲಿ ಈಗಾಗಲೇ ಶೈಕ್ಷಣಿಕ ವರ್ಷ ಪ್ರಾರಂಭಗೊಂಡಿದ್ದು, ಶಾಲಾ ಕಾಲೇಜಿನಲ್ಲಿ ಶೈಕ್ಷಣಿಕ ವಾತಾವರಣ ಇಲ್ಲದೆ ನಲುಗುತ್ತಿವೆ. ಈ ಹಿನ್ನಲೆಯಲ್ಲಿ ಸಿದ್ದಾರಾಮಯ್ಯ ನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರ ರಾಜ್ಯದ ಶಾಲಾ ಕಾಲೇಜುಗಳಲ್ಲಿ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಎಸ್ಎಫ್ಐ ರಾಜ್ಯ ಪದಾಧಿಕಾರಿ ಗಣೇಶ ರಾಠೋಡ್ ಆಗ್ರಹಿಸಿದರು.
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕು ಪಟ್ಟಣದ ಭಾರತೀಯ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ನೇತೃತ್ವದಲ್ಲಿ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದರು.
“ಶೈಕ್ಷಣಿಕ ವಲಯದಲ್ಲಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಮುಂದಾಗಬೇಕು. ಕಾಂಗ್ರೆಸ್ ಚುನಾವಣೆಯ ಪೂರ್ವದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಮುಂದಾಗಬೇಕು. ತನ್ನ ಪ್ರಣಾಳಿಕೆಯಲ್ಲಿ ನೀಡಿದಂತೆ ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಕೂಡಲೇ ಹಿಂಪಡೆಯಬೇಕು” ಎಂದು ಒತ್ತಾಯಿಸಿದರು.
“ಪಠ್ಯಪುಸ್ತಕ ಪರಿಷ್ಕರಣೆ ಹೆಸರಲ್ಲಿ ವಿದ್ಯಾರ್ಥಿಗಳ ನಡುವೆ ಕೋಮು ವಿಷಬೀಜ ಬಿತ್ತಲು ಹೊರಟಿದ್ದ ಬಿಜೆಪಿ ನೀತಿಯನ್ನು ಕೈ ಬಿಟ್ಟು ಕೂಡಲೇ ಪಠ್ಯಪುಸ್ತಕ ಪರಿಷ್ಕರಣೆ ಮಾಡಲು ಮುಂದಾಗಬೇಕು. ಶಾಂತಿಯ ನೆಲವಾಗಿರುವ ಕರ್ನಾಟಕದಲ್ಲಿ ಶೈಕ್ಷಣಿಕ ವಲಯವನ್ನು ಸೌಹಾರ್ದ, ಸೋದರತ್ವದ ನೆಲೆಯಾಗಿ ಉಳಿಸಿಕೊಳ್ಳಬೇಕಿದೆ. ಇದಕ್ಕೆ ಪೂರಕವಾಗಿ ಪಠ್ಯಪುಸ್ತಕ ಪರಿಷ್ಕರಣೆಗೆ ಸರ್ಕಾರ ಮುಂದಾಗಬೇಕು. ಡೊನೇಷನ್ ಹಾವಳಿ ನಿಯಂತ್ರಣಕ್ಕೆ ಸರ್ಕಾರ ಕಡಿವಾಣ ಹಾಕಬೇಕು. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಮತ್ತು ತಾಲೂಕಿನ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಇರುವ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ (ಡೇರಾ) ಕಮಿಟಿಯನ್ನು ರಚಿಸಿ ಸಭೆ ಕರೆಯಬೇಕು” ಎಂದು ಒತ್ತಾಯಿಸಿದರು.
ಎಸ್ಎಫ್ಐ ತಾಲೂಕು ಮುಖಂಡ ಚಂದ್ರು ರಾಠೋಡ್ ಮಾತನಾಡಿ, “ವಿದ್ಯಾರ್ಥಿಗಳಿಗೆ ನೀಡಬೇಕಾದ ಪಠ್ಯಪುಸ್ತಕ, ಒಳ್ಳೆಯ ಸಮವಸ್ತ್ರ, ಶೂ, ವಿದ್ಯಾರ್ಥಿವೇತನ, ಸೈಕಲ್, ಬಸ್ಪಾಸ್ ಯೋಜನೆಯನ್ನು ಈವರೆಗೆ ನೀಡಿಲ್ಲ. ಇದರ ಜೊತೆಗೆ ಹಾಸ್ಟೆಲ್ಗಳ ಅರ್ಜಿ ಕರೆಯಬೇಕು. ಅರ್ಜಿ ಹಾಕಿದ ಎಲ್ಲ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ನೀಡಬೇಕು. ಹಾಸ್ಟೆಲ್ ಇಲ್ಲದ ಕಡೆ ಹೊಸ ಹಾಸ್ಟೆಲ್ ಪ್ರಾರಂಭಿಸಬೇಕು. ಬೋಧಕ ಬೋಧಕೇತರ ಸಿಬ್ಬಂದಿಗಳನ್ನು ಖಾಲಿ ಇರುವ ಎಲ್ಲ ಕಡೆ ಭರ್ತಿ ಮಾಡಿಕೊಳ್ಳಬೇಕು” ಎಂದು ಆಗ್ರಹಿಸಿದರು.
ಗಜೇಂದ್ರಗಡ ತಾಲೂಕು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುತ್ತಿದೆ. ಆದರೆ, ಇಲ್ಲಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಇಲ್ಲವಾಗಿದೆ. ಹಾಗಾಗಿ ಹೊಸ ಹಾಸ್ಟೆಲ್ ಪ್ರಾರಂಭಿಸಬೇಕು. ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಕೂಡಲೇ ಮುಂದಾಗಬೇಕು” ಎಂದು ಒತ್ತಾಯಿಸಿದರು.
“ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) 2020ನ್ನು ಕೂಡಲೇ ರದ್ದುಪಡಿಸಿ, ಶೈಕ್ಷಣಿಕ ವಾತಾವರಣದಲ್ಲಿ ಕೋಮು ವಿಷಬಿತ್ತುವ ಪಠ್ಯವನ್ನು ಕೈ ಬಿಟ್ಟು ತಕ್ಷಣ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಬೇಕು. ಈ ವರ್ಷ ಪುಸ್ತಕ ವಿತರಣೆಗೊಂಡಿರುವ ಕಾರಣ ಶಾಲೆಗಳಲ್ಲಿ ಕಳೆದ ವರ್ಷ ಸೇರ್ಪಡೆಗೊಂಡ ಪಾಠಗಳನ್ನು ಭೋದಿಸದೇ ಅವುಗಳನ್ನು ಕೈ ಬಿಟ್ಟು ಅದಕ್ಕೂ ಮುನ್ನ ಇದ್ದ ಪಾಠಗಳನ್ನು ಬೋಧಿಸಲು ಆದೇಶಿಸಬೇಕು” ಎಂದರು.
“ಶಾಲಾ-ಕಾಲೇಜುಗಳಲ್ಲಿ ಸಮರ್ಪಕ ಕಟ್ಟಡ, ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು. ಗ್ರಂಥಾಲಯದಲ್ಲಿ ಸರಿಯಾದಂತಹ ಪುಸ್ತಕಗಳು ಇಲ್ಲದಿರುವ ಕಾರಣ ಹೆಚ್ಚಿನ ಪುಸ್ತಕಗಳನ್ನು ಒದಗಿಸಬೇಕು. ಗ್ರಂಥಾಲಯಕ್ಕೆ ಒಬ್ಬರನ್ನು ಖಾಯಂ ಗ್ರಂಥಪಾಲಕರನ್ನು ನೇಮಿಸಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಬ್ರಿಜ್ ಭೂಷಣ್ ಬಂಧನಕ್ಕೆ ಭೀಮ್ ಆರ್ಮಿ ಆಗ್ರಹ
“ಪ್ರಯೋಗಾಲಯಗಳಿಗೆ ಬೇಕಾಗುವಂತಹ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಅಲ್ಲಿ ಸಿಬ್ಬಂದಿಗಳನ್ನು ನೇಮಿಸಬೇಕು. ವೃತ್ತಿಪರ ಕೊರ್ಸ್ಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ತಾಲೂಕಿಗೊಂದೊಂದು ಸರ್ಕಾರಿ ವೃತ್ತಿಪರ ಕೋರ್ಸ್ಗಳ ಕಾಲೇಜುಗಳನ್ನು ಸ್ಥಾಪಿಸಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಮುಖಂಡ ಆನಂದ ಎಂ, ವಿಶಾಲ, ಶಿವಯ್ಯ, ಸಂತೋಷ, ಯಮನೂರಪ್ಪ, ಅಕ್ಷತಾ, ನೇತ್ರಾವತಿ, ಲಕ್ಷ್ಮೀ, ಭಾಗ್ಯ, ಸಿದ್ದಲಿಂಗಮ್ಮ, ರೇಖಾ, ಕಾವೇರಿ, ಸುಧಾ, ಶಾಂತಾ, ಹೇಮಾ, ಅಶ್ವಿನಿ, ಅಡವಯ್ಯ, ಆನಂದ ಕಾರ್ಮಿಕ ಮುಖಂಡರಾಗಿರುವ ಬಸಮ್ಮ ಕಿತ್ತೂರು, ಕನಕಪ್ಪ ಎಂ ಸೇರಿದಂತೆ ಇತರರು ಇದ್ದರು.