- ‘ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಸಿಎಂ ಹುದ್ದೆ ನೀಡದೆ ಅನ್ಯಾಯ’
- ‘ಬಿಎಸ್ಪಿ ರಾಜ್ಯ ಸಂಚಾಲಕ ಮಾರಸಂದ್ರ ಮುನಿಯಪ್ಪ ಗಂಭೀರ ಆರೋಪ’
ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದು, ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆ ತೀವ್ರವಾಗಿದೆ. ಇದರ ಬೆನ್ನಲ್ಲೆ ರಾಜ್ಯದಲ್ಲಿ ಶೇ.30ರಷ್ಟು ಜನಸಂಖ್ಯೆ ಹೊಂದಿರುವ ಎಸ್ಸಿ-ಎಸ್ಟಿ ಸಮುದಾಯದ ವ್ಯಕ್ತಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಬಿಎಸ್ಪಿ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ ಆಗ್ರಹಿಸಿದ್ದಾರೆ.
ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಅವರು, “ರಾಜ್ಯದಲ್ಲಿ ಶೇ.12ರಷ್ಟು ಜನಸಂಖ್ಯೆ ಹೊಂದಿರುವ ಲಿಂಗಾಯತ ಸಮುದಾಯದವರು 14 ರಿಂದ 15 ಬಾರಿ ಸಿಎಂ ಆಗಿದ್ದಾರೆ. ಹಾಗೆಯೇ 9 ರಿಂದ 10 ಪರ್ಸೆಂಟ್ ಜನಸಂಖ್ಯೆ ಇರುವ ಒಕ್ಕಲಿಗರು ಕೂಡ ಒಂದು ಬಾರಿ ಪ್ರಧಾನಿ, 9 ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿವೆ. ಆದರೆ, ರಾಜ್ಯದ ಜನಸಂಖ್ಯೆಯ ಶೇ.30ರಷ್ಟು ಇರುವ ಪರಿಶಿಷ್ಟ ಜಾತಿ ಮತ್ತು ವರ್ಗದವರು, ಶೇ.15 ರಷ್ಟು ಅಲ್ಪ ಸಂಖ್ಯಾತ ಸಮುದಾಯದವರನ್ನು ಈವರೆಗೂ ಯಾರೂ ಮುಖ್ಯಮಂತ್ರಿ ಮಾಡಿಲ್ಲ” ಎಂದು ಆರೋಪಿಸಿದರು.
“ರಾಜ್ಯದಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್, ನಾವು ಬಹಳ ಹೆಚ್ಚು ಮತಗಳನ್ನು ಪಡೆದಿದ್ದೇವೆ ಎಂದು ಹೇಳುತ್ತಿದೆ. ಆದರೆ, ಅವರಿಗೆ ಹೆಚ್ಚು ಮತಗಳು ಬರಲು ಕಾರಣ, ಬಿಜೆಪಿಯ ದಬ್ಬಳಿಕೆ, ದೌರ್ಜನ್ಯ, ಭೂ ಸುಧಾರಣಾ ಕಾಯ್ದೆ, ಮುಸ್ಲೀಮರ ಮೇಲಾದ ದೌರ್ಜನ್ಯಗಳು, ದುರಾಡಳಿತ, ಬೆಲೆ ಏರಿಕೆ, ಭ್ರಷ್ಟಾಚಾರ ಈ ಎಲ್ಲದರಿಂದ ಬೇಸತ್ತಿದ್ದ ಜನ ತೀರ್ಮಾನಿಸಿ, ಈ ಬಾರಿ ಕಾಂಗ್ರೆಸ್ಗೆ ಬಹುಮತ ನೀಡಿದ್ದಾರೆ” ಎಂದು ಅಭಿಪ್ರಾಯಪಟ್ಟರು.
“ಡಿ ಕೆ ಶಿವಕುಮಾರ್ ಅವರನ್ನೇ ಮುಖ್ಯಮಂತ್ರಿ ಮಾಡಬೇಕು ಎಂಬ ಲಾಬಿಯನ್ನು ಒಕ್ಕಲಿಗ ಮಠಾಧೀಶರು ಮತ್ತು ಒಕ್ಕಲಿಗ ಸಂಘದವರು ಮಾಡುತ್ತಿದ್ದಾರೆ. ಅದೇ ರೀತಿ ಲಿಂಗಾಯತ ಸಮುದಾಯದ ವ್ಯಕ್ತಿಯನ್ನು ಸಿಎಂ ಮಾಡಬೇಕು ಎಂದು ಲಿಂಗಾಯತ ಮಠಗಳಲ್ಲಿಯೂ ಚರ್ಚೆ ಆಗುತ್ತಿದೆ. ಆದರೆ, ಶೇ. 30ರಷ್ಟು ಜನಸಂಖ್ಯೆ ಹಿಂದಿರುವ ಎಸ್ಸಿ, ಎಸ್ಟಿಗಳು, ಶೇ.15ರಷ್ಟಿರುವ ಅಲ್ಪಸಂಖ್ಯಾತರು ಯಾರು ಇವರ ಕಣ್ಣಿಗೆ ಕಾಣುವುದೇ ಇಲ್ಲ. ಯಾಕಿಷ್ಟು ನಿರ್ಲಕ್ಷ್ಯ” ಎಂದು ಪ್ರಶ್ನಿಸಿದ್ದಾರೆ.
“ಅಹಿಂದ ಪರವಾಗಿ ಇದ್ದೇವೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್, ಯಾಕೆ ದಲಿತರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಮಾತನಾಡುತ್ತಿಲ್ಲ? ಈ ಬಾರಿಯ ಚುನಾವಣೆಯಲ್ಲಿ ಬಹುಸಂಖ್ಯಾತ ಎಸ್ಸಿ, ಎಸ್ಟಿ ಸಮುದಾಯದ 37 ಮಂದಿ ಶಾಸಕರು ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪರಿಶಿಷ್ಟರಿಗೆ ರಾಜಕೀಯ ಮೀಸಲಾತಿ ಕೊಡಿಸಿದ್ದು ಯಾಕೆ? ನಿಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಿ ಎಂದು. ಆದರೆ, ಗೆದ್ದಿರುವ ದಲಿತ ಶಾಸಕರು ಏಕೆ ದ್ವನಿ ಎತ್ತುತ್ತಿಲ್ಲ? ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಾಂಗ್ರೆಸ್ ಗೆಲುವಿನಲ್ಲಿದೆ ಮಲ್ಲಿಕಾರ್ಜುನ ಖರ್ಗೆ ಅಪ್ರತಿಮ ಪಾತ್ರ
“ಎಸ್ಸಿ, ಎಸ್ಟಿ ಸರ್ಕಾರಿ ನೌಕರರು, ಸಾಮಾಜಿಕ ಸಂಘಟನೆಗಳು, ದಲಿತ ಲೇಖಕರು ಸೇರಿದಂತೆ ಹಲವು ಮುಂದೆ ನಿಂತು ಈ ಬಾರಿ ಕಾಂಗ್ರೆಸ್ಗೆ ಮತ ನೀಡಬೇಕು ಎಂದು ಮತ ಹಾಕಿಸಿದ್ದಾರೆ. ಆದರೆ, ಇವರ್ಯಾರು ಈಗ ಮಾತನಾಡುತ್ತಿಲ್ಲ” ಎಂದು ಟೀಕಿಸಿದರು.
”ಅಲ್ಪಸಂಖ್ಯಾತರು ಮತ್ತು ದಲಿತರನ್ನು ಉದ್ದಾರ ಮಾಡಲು ಕಾಂಗ್ರೆಸ್ ಇರುವುದು ಎಂದು ಹೇಳಿಕೊಳ್ಳುವ ಇವರು. ಕಳೆದ 75 ವರ್ಷಗಳಿಂದ ಎಸ್ಸಿ, ಎಸ್ಟಿಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ, ಕೇವಲ ಮತ ಹಾಲು ಮಾತ್ರವೇ ಇವರನ್ನು ಬಳಸಿಕೊಂಡಿದೆ” ಎಂದು ಆರೋಪಿಸಿದರು.
“ಡಿ ಕೆ ಶಿವಕುಮಾರ್ ಅವರನ್ನು ಸಿಎಂ ಮಾಡುವುದರಿಂದ ಅಹಿಂದ ಸಮುದಾಯಗಳಿಗೆ ಯಾವುದೇ ಅನುಕೂಲ ಆಗುವುದಿಲ್ಲ. ಡಿ ಕೆ ಶಿವಕುಮಾರ್ ಹಿಂಬಾಲಕರು ಕನಕಪುರದಲ್ಲಿ ಈಗಾಗಲೇ ಜನರಲ್ಲಿ ಸಾಕಷ್ಟು ಭಯ ಹುಟ್ಟಿಸಿದ್ದಾರೆ. ಅಪರಾಧ ಹಿನ್ನೆಲೆ ಇರುವ ಒಬ್ಬ ವ್ಯಕ್ತಿ ಸಿಎಂ ಆದರೆ ರಾಜ್ಯದ ಅಹಿಂದ ವರ್ಗದವರು ಎಷ್ಟರ ಮಟ್ಟಿಗೆ ನಿರ್ಭೀತಿಯಿಂದ ಬದುಕಲು ಸಾಧ್ಯ? ಎಂಬುದನ್ನು ಅವರ ಹೈಕಮಾಂಡ್ ಗಮನಿಸಬೇಕು. ಒಬಿಸಿ, ದಲಿತ, ಅಲ್ಪಸಂಖ್ಯಾತರ ಮತಗಳು ಮಾತ್ರ ಬೇಕು. ಆದರೆ, ಅಧಿಕಾರ ಕೊಡುವಾಗ ಮಾತ್ರ ಈ ರೀತಿ ಅಪರಾಧ ಹಿನ್ನೆಲೆ ಇರುವವರಿಗೆ ಕೊಡಲು ಹೊರಟಿದ್ದಾರೆ” ಎಂದು ಗಂಭೀರ ಆರೋಪ ಮಾಡಿದರು.
“ಡಿ ಕೆ ಶಿವಕುಮಾರ್ ಒಬ್ಬರ ಪರಿಶ್ರಮದಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎನ್ನುವುದು ಸರಿಯಲ್ಲ. ಎಸ್ಸಿ, ಎಸ್ಟಿ ಸಮುದಾಯದವರೂ ಈ ದೇಶದ ಪ್ರಜೆಗಳು ಎಂಬುದನ್ನು ಪರಿಗಣಿಸಲಿ” ಎಂದು ಒತ್ತಾಯಿಸಿದರು.
ನಿಮ್ಮ ಅಭಿಪ್ರಾಯ ಸರಿಯಾಗಿದೆ ಸರ್ 75 ವರ್ಷ ಕಳೆದರೂ ಇವರಿಗೇ ಮುಖ್ಯ ಮಂತ್ರಿ ಸ್ಥಾನ ಇಲ್ಲವೆಂದರೆ ಎಸ್ಟು ಸಲ ಚುನಾವಣೆಯಲ್ಲಿ ಗೆದ್ದರೆ ಏನು ಪ್ರಯಾಜನ