- ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಏಕಾಂಗಿ ಹೋರಾಟ
- ಶಾಸಕ ಪ್ರೀತಂಗೌಡ ವಿರುದ್ಧ ಎಚ್ ಡಿ ರೇವಣ್ಣ ಪರೋಕ್ಷವಾಗಿ ವಾಗ್ದಾಳಿ
ರಂಜಾನ್ ಉಪವಾಸದ ಸಂದರ್ಭದಲ್ಲೇ ಮುಸ್ಲಿಮರಿಗಿದ್ದ ಮೀಸಲಾತಿ ತೆಗೆದಿದ್ದಾರೆ. ಆ ಭಕ್ತಿಯೇ ಈ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲಿದೆ ಎಂದು ಜೆಡಿಎಸ್ ನಾಯಕ ಮತ್ತು ಶಾಸಕ ಎಚ್.ಡಿ ರೇವಣ್ಣ ಹೇಳಿದ್ದಾರೆ.
ಹಾಸನ ಜಿಲ್ಲೆ ಬೇಲೂರಿನ ಚನ್ನಕೇಶವಸ್ವಾಮಿ ರಥೋತ್ಸವದಲ್ಲಿ ಭಾಗವಹಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದೆ ಜೆಡಿಎಸ್ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ಮರು ಜಾರಿ ಮಾಡುತ್ತೇವೆ ಎಂದು ತಿಳಿಸಿದರು.
“1994ರಲ್ಲಿ ಅಲ್ಪಸಂಖ್ಯಾತರಿಗೆ ದೇವೇಗೌಡರು 2(ಬಿ) ಮೀಸಲಾತಿ ಕೊಟ್ಟರು. ಆದರೆ ಈಗ ಈ ಮೀಸಲಾತಿಯನ್ನು ದುರುದ್ದೇಶ ಪೂರಿತವಾಗಿ ತೆಗೆದಿದ್ದಾರೆ. ವಂಚಿತ ಜನರ ಶಾಪ, ರದ್ದು ಮಾಡಿದವರಿಗೆ ತಟ್ಟಲಿದೆ” ಎಂದು ಕಿಡಿಕಾರಿದ್ದಾರೆ.
“ಕಾಂಗ್ರೆಸ್ ಅಲ್ವಸಂಖ್ಯಾತರನ್ನು ಕೇವಲ ಮತಬ್ಯಾಂಕ್ ಮಾಡಿಕೊಂಡಿತ್ತೇ ಹೊರತು, ಮೀಸಲಾತಿ ನೀಡಿರಲಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಹೊಂದಾಣಿಕೆ ಪಕ್ಷಗಳು. ರಾತ್ರಿ ಹೊತ್ತು ಎರಡೂ ಪಕ್ಷದವರು ಪರಸ್ಪರ ಚನ್ನಾಗಿಯೇ ಮಾತನಾಡುತ್ತಾರೆ, ಬೆಳಗಾಗುತ್ತಲೇ ಒಬ್ಬರನ್ನೊಬ್ಬರು ಬೈಯ್ದಾಡುತ್ತಾರೆ. ಅದೇ ರೀತಿ ಇವರು ಮೀಸಲಾತಿ ಹೆಸರಿನಲ್ಲಿ ಜನರನ್ನು ಹೊಡೆದಾಡಿಸುತ್ತಿದ್ದಾರೆ” ಎಂದು ಆರೋಪಿಸಿದರು.
“250ಕ್ಕೂ ಹೆಚ್ಚು ದಿನಗಳ ಕಾಲ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ನಿರಂತರ ಹೋರಾಟ ಮಾಡಿದರು. ಆದರೆ, ಈಗ ಮೀಸಲಾತಿ ಜಾರಿ ಮಾಡಿದ್ದಾರೆ. ಅದೂ ಜಾರಿ ಆಗುತ್ತೊ ಇಲ್ಲವೊ ಗೊತ್ತಿಲ್ಲ. ಇವರು ಜಾತಿ ಜಾತಿಗಳ ನಡುವೆ ಹೊಡೆದಾಡಿಸುತ್ತಿದ್ದಾರೆ. ಜಾತಿ ಸಂಘರ್ಷ ಮಾಡಿ ರಾಜಕೀಯ ಮಾಡಲು ಹೊರಟಿದ್ದಾರೆ. ಜನರು ಎಚ್ಚರಿಕೆಯಿಂದ ಮತ ಚಲಾವಣೆ ಮಾಡಬೇಕು” ಎಂದು ಮನವಿ ಮಾಡಿದರು.
ಕುಮಾರಸ್ವಾಮಿ ಏಕಾಂಗಿ ಹೋರಾಟ
“2023ರ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಏಕಾಂಗಿ ಹೋರಾಟ ಮಾಡುತ್ತಿದ್ದಾರೆ. ಎರಡೂ ಪಕ್ಷಗಳನ್ನು ಜನರು ನೋಡಿದ್ದಾರೆ. ಹಾಗೆಯೇ ಕುಮಾರಸ್ವಾಮಿ ಅವರ 14 ತಿಂಗಳ ಆಡಳಿತ ಕೂಡ ಜನ ನೋಡಿದ್ದಾರೆ” ಎಂದರು.
“ಕುಮಾರಸ್ವಾಮಿ ಅವರು ಕೊಟ್ಟ ಮಾತು ಉಳಿಸಿಕೊಳ್ಳುವ ನಾಯಕ. ಅಧಿಕಾರದಲ್ಲಿದ್ದಾಗ 25 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ. ಹಿಂದೆ ಕೆಲವರು ಹಾಸನ ಬಜೆಟ್, ಮಂಡ್ಯ ಬಜೆಟ್, ರಾಮನಗರ ಬಜೆಟ್ ಎಂದು ಅಣಕಿಸಿದರೂ ತಲೆ ಕಡಿಸಿಕೊಳ್ಳದೆ ಅಭಿವೃದ್ಧಿ ಕೆಲಸ ಮಾಡಿದರು. ಆದರೆ, ಬಿಜೆಪಿಯವರು ಹಾಸನಕ್ಕೆ ತಾಂತ್ರಿಕ ವಿವಿ ತಡೆ ಹಿಡಿದರು. ಶಾಸಕ ಕೆ ಎಸ್ ಲಿಂಗೇಶ್ ಅವರ ಪ್ರಾಮಾಣಿಕ ಪ್ರಯತ್ನದಿಂದ ಬೇಲೂರು ರಣಘಟ್ಟ ಯೋಜನೆ ಆಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಹಾಸನ | ಚನ್ನಕೇಶವಸ್ವಾಮಿ ರಥೋತ್ಸವ: ವಿರೋಧದ ನಡುವೆಯೂ ಸೌಹಾರ್ದತೆ ಮೆರೆದ ಬೇಲೂರು
ಪ್ರೀತಂ ವಿರುದ್ಧ ಪರೋಕ್ಷ ವಾಗ್ದಾಳಿ
“ಹಿಂದೆ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಅಡಿಗಲ್ಲು ಹಾಕಿದ ಯೋಜನೆಯನ್ನು ರದ್ದು ಮಾಡಿದ್ದರು. ಬೇಲೂರು-ಹಾಸನ ನಡುವಿನ ನಾಲ್ಕು ಪಥದ ರಸ್ತೆಗೆ ಈಗ ಮತ್ತೆ 900 ಕೋಟಿ ರೂ. ಮಂಜೂರು ಮಾಡಿದ್ದಾರೆ. ಜಿಲ್ಲೆಯ ಎಲ್ಲ ರಸ್ತೆಗೆ ನಾನು ಸಚಿವನಾಗಿದ್ದಾಗ 2 ಸಾವಿರ ಕೋಟಿ ಅನುದಾನ ಕೊಟ್ಟಿದ್ದೆ. ಈಗ ಹೊಸದಾಗಿ ಎಲ್ಲೋ ಶೆಡ್ ಹಾಕಲು ಅನುದಾನ ಕೊಟ್ಟಿರಬೇಕು” ಎಂದು ಶಾಸಕ ಪ್ರೀತಂಗೌಡ ಹೆಸರು ಹೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.