- 100 ಎಕರೆಗೂ ಹೆಚ್ಚು ಪ್ರದೇಶದ ಕಾಫಿ ಗಿಡಗಳಿಗೆ ಹಾನಿ
- ಅಗ್ನಿ ಅವಘಡ ಕಂಡು ಕಣ್ಣೀರಿಟ್ಟ ತೋಟದ ಮಾಲೀಕರು
ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಅಪಾರ ಪ್ರಮಾಣ ಕಾಫಿ ತೋಟ ಸುಟ್ಟುಹೋಗಿರುವ ಘಟನೆ ಹಾಸನ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಹೆತ್ತೂರು ಹೋಬಳಿ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದಲ್ಲಿ ನೂರಾರು ಎಕರೆ ಕಾಫಿ ತೋಟ ಬೆಂಕಿಗೆ ಆಹುತಿಯಾಗಿದೆ.
ಹೊಸಹಳ್ಳಿ ಗ್ರಾಮದ ಕಾಫಿ ಬೆಳೆಗಾರರಾದ ಮಲ್ಲೇಶ್, ಪಾರ್ವತಮ್ಮ, ಹಾದಿಮನೆ ಜಗ, ಚೀರಿ ಸುರೇಶ್, ತಮ್ಮಣ್ಣ ಎಂಬುವರಿಗೆ ಸೇರಿದ ಅಂದಾಜು 100 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ಕಾಫಿ ಗಿಡಗಳು ಸುಟ್ಟು ಹೋಗಿವೆ. ಇದರಿಂದಾಗಿ ಅಪಾರ ಪ್ರಮಾಣದ ನಷ್ಟವುಂಟಾಗಿದೆ.
ಹೊಸಹಳ್ಳಿ ಗ್ರಾಮದ ಥಾಳನೇರಿ ಗುಡ್ಡದ ಸುತ್ತಮುತ್ತ ಭಾನುವಾರ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ತೋಟದಲ್ಲಿ ವ್ಯಾಪಿಸಿದೆ. ಅಕ್ಕಪಕ್ಕದವರ ತೋಟಗಳಿಗೂ ಬೆಂಕಿ ತಗುಲಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮಾಲೀಕರು ಬೆಂಕಿ ನಂದಿಸಲು ಪ್ರಯತ್ನಿಸುವ ಹೊತ್ತಿಗಾಗಲೇ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಕಾಫಿ ಗಿಡಗಳ ಜೊತೆಗೆ ಬೆಲೆ ಬಾಳುವ ಮರಗಳು, ಕಾಳು ಮೆಣಸಿನ ಬಳ್ಳಿ ಬೆಂಕಿಗೆ ಆಹುತಿಯಾಗಿವೆ.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಸೇತುವೆಗೆ ಲಾರಿ ಡಿಕ್ಕಿ; ಒಂದೇ ಕುಟುಂಬದ ಮೂವರು ಸಾವು
ಫಸಲು ನೀಡುವಷ್ಟು ಮಟ್ಟಕ್ಕೆ ಬೆಳೆದು ನಿಂತಿದ್ದ ಕಾಫಿ ಗಿಡಗಳು ಬೆಂಕಿಗೆ ಆಹುತಿಯಾಗಿರುವುದು ಕಂಡು ಕಾಫಿ ತೋಟದ ಮಾಲೀಕರು ಕಣ್ಣೀರಿಟ್ಟಿದ್ದಾರೆ.