ದುರುಳ ತಂದೆಯೊಬ್ಬ ತನ್ನ ಅವಳಿ ಮಕ್ಕಳನ್ನು ಉಸಿರುಗಟ್ಟಿಸಿ ಕೊಂದಿರುವ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನಲ್ಲಿ ನಡೆದಿದೆ.
ಮೃತಪಟ್ಟ ಮಕ್ಕಳನ್ನು ಅದ್ವೈತ್ (4), ಅನ್ವೀತ್ (4) ಎಂದು ಗುರುತಿಸಲಾಗಿದೆ. ಆರೋಪಿ ಅಮರ್ ಎಂಬಾತ ಮಕ್ಕಳನ್ನು ಹತ್ಯೆಗೈದಿರುವ ದುರುಳ. ಆತನ ಪತ್ನಿ ತವರೂರಿಗೆ ಹೋಗಿದ್ದಾಗ, ಆತ ತನ್ನ ಇಬ್ಬರು ಮಕ್ಕಳನ್ನು ಕಾರಿನಲ್ಲಿ ಕರೆದೊಯ್ದು, ತಾಲೂಕಿನ ಚಳಗೇರಿ ಟೋಲ್ಗೇಟ್ ಬಳಿ ಮುಖಕ್ಕೆ ಟೆಕ್ಸೋ ಟೇಪ್ ಅಂಟಿಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಮಕ್ಕಳನ್ನು ಹತ್ಯೆ ಗೈದಿದ್ದ ಆರೋಪಿ, ತನ್ನ ಪತ್ನಿಗೆ ಕರೆ ಮಾಡಿ, ಮಕ್ಕಳ ಕತೆ ಮುಗಿದಿದೆ ಎಂದು ಹೇಳಿದ್ದಾರೆ. ಗಾಬರಿಗೊಂಡ ಪತ್ನಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಆತನ ನೆಟ್ವರ್ಕ್ ಟ್ರೇಸ್ ಮಾಡಿದ ಪೊಲೀಸರಿಗೆ ಆತ ಚಳಗೇರಿ ಟೋಲ್ ಬಳಿ ಇರುವ ಮಾಹಿತಿ ತಿಳಿದಿದೆ. ಕೂಡಲೇ ಸ್ಥಳಕ್ಕೆ ಧಾವಿಸಿ, ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಅಮರ್, ಬೆಳಗಾವಿ ಜಿಲ್ಲೆ ಗೋಕಾಕ್ ನಿವಾಸಿಯಾಗಿದ್ದು, ದಾವಣಗೆರೆಯಲ್ಲಿ ವಾಸವಿದ್ದಾರೆ. ಹರಿಹರದ ಬಳಿ ಇರುವ ಕಾರ್ಗಿಲ್ ಫ್ಯಾಕ್ಟರಿಯಲ್ಲಿ ಉದ್ಯೋಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.