ಸ್ವಾತಂತ್ರ್ಯ ಹೋರಾಟದ ಪ್ರಮುಖ ಆಶಯ ಸಮಾನತೆಯು ದೇಶದಲ್ಲಿ ಸಮರ್ಪಕವಾಗಿ ಜಾರಿಯಾಗಬೇಕಾದರೆ ಶಿಕ್ಷಣ ಮತ್ತು ಉದ್ಯೋಗ ಮೂಲಭೂತ ಹಕ್ಕಾಗಬೇಕಿದೆ ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಹೇಳಿದರು.
ಹಾವೇರಿ ನಗರದ ಹೊಯ್ಸಳ ಐಟಿಐ ಕಾಲೇಜಿನಲ್ಲಿ ಬುಧವಾರ(ಫೆ.21) ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) 12ನೇ ರಾಜ್ಯ ಸಮ್ಮೇಳನದ ಭಾಗವಾಗಿ ಏರ್ಪಡಿಸಿದ್ದ ʼಸಾಮರಸ್ಯ, ಉದ್ಯೋಗ, ಘನತೆಯ ಬದುಕಿಗಾಗಿʼ ವಿಷಯ ಕುರಿತು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ದೊರೆತು ಏಳು ದಶಕ ಕಳೆದರೂ ಸರ್ವರಿಗೂ ಶಿಕ್ಷಣ ದೊರೆಯದಿರುವ ಪರಿಣಾಮವಾಗಿ ಬಡವರ ಮಕ್ಕಳು ಇಂದಿಗೂ ಶಾಲೆಯಿಂದ ಹೊರಗುಳಿಯುತ್ತಿದ್ದಾರೆ. ಪ್ರಾಥಮಿಕ ಹಂತದಲ್ಲೇ ಈ ಸ್ಥಿತಿಯಿದ್ದು, ಉನ್ನತ ಶಿಕ್ಷಣವನ್ನು ಎಲ್ಲರಿಗೂ ಪಡೆಯಲಾಗುತ್ತಿಲ್ಲ. ಒಂದು ವೇಳೆ ಕಷ್ಟಪಟ್ಟು ಉನ್ನತ ಶಿಕ್ಷಣ ಪಡೆದರೂ ಉದ್ಯೋಗದ ಖಾತ್ರಿ ಒದಗಿಸುವಲ್ಲಿ ಸರಕಾರಗಳು ವಿಫಲವಾಗುತ್ತಿವೆ. ಆದ್ದರಿಂದಾಗಿ ಶಿಕ್ಷಣ, ಉದ್ಯೋಗದ ಹಕ್ಕಿಗಾಗಿ ಯುವಜನತೆ ಧ್ವನಿ ಎತ್ತಬೇಕಿರುವುದು ಅನಿವಾರ್ಯವಾಗಿದೆ ಎಂದರು.
ಡಿವೈಎಫ್ಐ ಜಿಲ್ಲಾ ಸಂಚಾಲಕರೂ, ಯುವ ವಕೀಲರಾದ ನಾರಾಯಣ ಕಾಳೆ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಬದುಕು ಕಟ್ಟಿಕೊಳ್ಳುವ ಉದ್ದೇಶದಿಂದ ವೃತ್ತಿಪರ ಕೋರ್ಸುಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಿದರೂ, ಉದ್ಯೋಗ ಖಾತ್ರಿ ಪಡಿಸದಿರುವುದು ದುರಂತವಾಗಿದೆ. ಸರಕಾರ ಕೃಷಿ ಪೂರಕವಾದ ಕೈಗಾರಿಕೆಗಳನ್ನು ಆರಂಭಿಸುವ ಮೂಲಕ ಉದ್ಯೋಗ ಸೃಷ್ಠಿಸಲು ಮುಂದಾಗಬೇಕು ಎಂದರು.
ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ರವರ ಆದರ್ಶಗಳನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿ-ಯುವಜನ ಸಮುದಾಯ ಅಧ್ಯಯನದ ಜೊತೆಗೆ ದೇಶ ಕಟ್ಟುವ ಜವಾಬ್ದಾರಿ ಹೊರಬೇಕು. ಈ ನೆಲದ ಐಕ್ಯತೆ, ಸೌಹಾರ್ದತೆ ಹಾಗೂ ಸಮಗ್ರತೆಯನ್ನು ಗಟ್ಟಿಗೊಳಿಸಲು ಮುಂದಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ರವಿ ಉಮ್ಮಣ್ಣವರ ವಹಿಸಿದ್ದರು. ಡಿವೈಎಫ್ಐ ಮುಖಂಡ ರಾಹುಲ ಕಡೆಮನಿ ನಿರ್ವಹಿಸಿದರು. ಬಸವರಾಜ ಗೋವಿಂದಪ್ಪನವರ ವಂದಿಸಿದರು.