ರೈತರ ಮೇಲೆ ಕೇಂದ್ರ ಸರ್ಕಾರದ ಅನೀತಿ ಖಂಡಿಸಿ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಾವೇರಿಯಲ್ಲಿ ಮಾರ್ಚ್ 5ರಂದು, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೃಹತ್ ಟ್ರ್ಯಾಕ್ಟರ್ ರ್ಯಾಲಿ ಹಮ್ಮಿಕೊಂಡಿದ್ದು, ಈ ಕುರಿತು ರೈತ ಸಂಘ ಪತ್ರಿಕಾಗೋಷ್ಠಿ ನಡೆಸಿತು.
ಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಜಿಲ್ಲೆಯಲ್ಲಿ ಬರಗಾಲ ಘೋಷಣೆ ಮಾಡಿ ಆರು ತಿಂಗಳು ಗತಿಸಿವೆ. ಕೇಂದ್ರ ಸರ್ಕಾರ ಬೆಳೆ ನಷ್ಟ ಪರಿಹಾರ ಕೊಡುವಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ರಾಜ್ಯ ಸರ್ಕಾರ ಕೇವಲ ಎರಡು ಸಾವಿರ ರೂ. ಪರಿಹಾರ ನೆಪ ಮಾತ್ರಕ್ಕೆ ಕೊಟ್ಟಿದೆ. ಕಳೆದ ಎರಡು ವರ್ಷ ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡು ಕಂಗಾಲಾಗಿದ್ದ ರೈತರು ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಬರ ಪರಿಹಾರ ಬೆಳೆವಿಮೆ ಹಾಗೂ ಸಾಲ ಮನ್ನಾ ಮಾಡಿ ರೈತರಿಗೆ ಧೈರ್ಯ ತುಂಬುವಂತಹ ಕೆಲಸ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮಾಡಬೇಕಾಗುತ್ತದೆ ಎಂದರು.
ಸರ್ಕಾರಗಳ ಗಮನ ಸೆಳೆಯಲು ಅನೇಕ ಬಾರಿ ಹೋರಾಟ ಮಾಡಿದರೂ, ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿವೆ. ಕಾಂಗ್ರೆಸ್ ಸರ್ಕಾರ ರೈತರ ಸಂಸತ್ತುಗಳಿಗೆ ಹೊಸದಾಗಿ ಅರ್ಜಿ ತೆಗೆದುಕೊಳ್ಳುತ್ತಿರುವುದು ನಿಲ್ಲಿಸಿದೆ. ಅಕ್ರಮ ಸಕ್ರಮ ಯೋಜನೆಯನ್ನು ನಿಲ್ಲಿಸಿದೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಮಂಜೂರು ಮಾಡಲು ಅನೇಕ ವರ್ಷಗಳಿಂದ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಮಾಡುವ ರೈತರಿಗೆ ಎನ್ಒಸಿ ಕೇಳುವುದನ್ನು ನಿಲ್ಲಿಸಬೇಕು ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ಆರ್.ವಿ. ಕೆಂಚಳ್ಳೆರ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕ ಭದ್ರತೆ ಒದಗಿಸಬೇಕು ಹಾಗೂ ಸ್ವಾಮಿನಾಥನ್ ವರದಿಯನ್ನು ಅನುಷ್ಠಾನಕ್ಕೆ ತರಬೇಕು. ಜೊತೆಗೆ ಸಂಕಷ್ಟದಲ್ಲಿರುವ ರೈತರಿಗೆ ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸುತ್ತಿರುವ ದೆಹಲಿ ಗಡಿ ಭಾಗದಲ್ಲಿ ಚಳವಳಿ ನಿರತ ರೈತರ ಬೇಡಿಕೆಗಳನ್ನು ಕೂಡಲೇ ಈಡೇರಿಸ ಬೇಕು. ಚಳವಳಿ ನಿರತ ರೈತರನ್ನು ಗೌರವಿಸಿಬೇಕು. ಅನವಶ್ಯಕ ಕಿರುಕುಳ ಕೊಡುತ್ತಿರುವ ಕೇಂದ್ರ ಸರ್ಕಾರದ ನಿಲುವನ್ನು ನಮ್ಮ ಸಂಘಟನೆಯು ಖಂಡಿಸುತ್ತದೆ ಎಂದ ಅವರು, ಈ ಮೇಲಿನ ಬೇಡಿಕೆಗಳನ್ನು ಒತ್ತಾಯಿಸಿ ಮಾ.5ರಂದು ಹಾವೇರಿಯ ಕಾಗಿನೆಲೆ ಕ್ರಾಸ್ನಿಂದ ಟ್ರ್ಯಾಕ್ಟರ್ ಮುಖಾಂತರ ಪ್ರತಿಭಟನೆ ಮಾಡುತ್ತಾ ಪುರುಶುದ್ದೇಶ್ವರ ದೇವಸ್ಥಾನದಿಂದ, ಮಾರುಕಟ್ಟೆಯ ಮುಖ್ಯರಸ್ತೆ, ಗಾಂಧಿ ವೃತದಿಂದ ಸಿದ್ದಪ್ಪ ಸರ್ಕಲ್ವರೆಗೆ ಪ್ರತಿಭಟನೆ ನಡೆಸಿ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಧಿಕಾರಿ ಮುಖಾಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.