- ಶಿಗ್ಗಾಂವ ತಾಲೂಕನ್ನು ಬರಗಾಲ ತಾಲ್ಲೂಕು ಎಂದು ಘೋಷಿಸುವಂತೆ ಒತ್ತಾಯ
- ಸಕ್ಕರೆ ಕಾರ್ಖಾನೆ ಆರಂಭಿಸುವ ಮೊದಲು ರೈತರೊಂದಿಗೆ ಸಭೆ ನಡೆಸಿ ಸೂಕ್ತವಾದ ಬೆಲೆ ನಿಗದಿಪಡಿಸಬೇಕು.
ಕಬ್ಬು ಬೆಳೆಗೂ ಬೆಳೆ ವಿಮೆ ನೀಡಬೇಕು. ಬೆಳೆ ವಿಮೆ, ಬರ ಪರಿಹಾರ, ಬೆಳೆ ಹಾನಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ದುಂಡಸಿ ಗ್ರಾಮ ಪಂಚಾಯತಿ ಎದುರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆಯಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ಮುತ್ತಣ್ಣ ಗುಡಗೇರಿ ಮಾತನಾಡಿ, “ನಮ್ಮ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸುವ ಮೊದಲು ರೈತರನ್ನು ಕರೆಯಿಸಿ ಸಭೆ ನಡೆಸಬೇಕು. ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸಬೇಕು. ಒಂದು ವೇಳೆ ರೈತರೊಂದಿಗೆ ಸಕ್ಕರೆ ಕಾರ್ಖಾನೆ ಹೊಂದಾಣಿಕೆ ಮಾಡಿಕೊಳ್ಳದೆ ಇದ್ದಲ್ಲಿ, ತಾಲೂಕು ಮಟ್ಟದಲ್ಲಿ ನಮ್ಮ ಹೋರಾಟವನ್ನು ಮುಂದುವರೆಸಬೇಕಾಗುತ್ತದೆ” ಎಂದು ತಿಳಿಸಿದರು.
ರೈತ ಮುಖಂಡ ಈಶ್ವರಗೌಡ ಮಾತನಾಡಿ, “2023-24ನೇ ಸಾಲಿನ ಮುಂಗಾರು ಹಂಗಾಮಿನ 25% ಬೆಳೆ ವಿಮೆ ವಿತರಿಸಬೇಕು. ಶಿಗ್ಗಾಂವ ತಾಲೂಕನ್ನು ಬರಗಾಲ ತಾಲೂಕು ಎಂದು ಘೋಷಿಸಬೇಕು. ಸಹಕಾರಿ ಸಂಘದಲ್ಲಿ ಸಾಲ ಮಾಡಿದ್ದ ಸಂಕಷ್ಟಕ್ಕೆ ಒಳಗಾಗಿರುವ ರೈತರ ಬೆಳೆ ಸಾಲಮನ್ನಾ ಮಾಡಬೇಕು” ಎಂದು ಆಗ್ರಹಿಸಿದರು.
ಊರಿನ ಮುಖಂಡ ಶಿವನಗೌಡ ಪಾಟೀಲ್ ಮಾತನಾಡಿ, “ಶಿಗ್ಗಾವಿ ಭಾಗ ಮಲೆನಾಡು ಪ್ರದೇಶವಾದರೂ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ರೈತರ ಕಬ್ಬು ಬೆಳೆಗೆ ಫ್ಯಾಕ್ಟರಿ 350 ರೂ ನೀಡುತ್ತದೆ ಆದರೆ ರೈತರಿಂದ 800-1000 ರೂಪಾಯಿ ವಸೂಲಿ ಮಾಡುತ್ತಾರೆ ಇದರಿಂದ ರೈತರಿಗೆ ಸಂಪೂರ್ಣ ಅನ್ಯಾಯವಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಭೆಟ್ಟಿ ನೀಡಿ, ಪ್ರತಿಭಟನಾಕಾರರ ಹಕ್ಕೊತ್ತಾಯಗಳನ್ನು ಆಲಿಸಿದ ಜಿಲ್ಲಾಧಿಕಾರಿ ರಘುನಂದನ ಮೂರ್ತಿ, “ಬೆಳೆ ವಿಮೆ ವಿಚಾರವಾಗಿ ಈಗಾಗಲಿ ಮಾತನಾಡಲಾಗಿದೆ. ಸದ್ಯದಲ್ಲೆ ಸಮಸ್ಯೆ ಬಗೆಹರಿಯುವುದು. ಇನ್ನು ರೈತರ ಎಲ್ಲ ಬೇಡಿಕೆಗಳು ಹಾಗೂ ಸಮಸ್ಯೆಗಳ ಕುರಿತಾಗಿ ಸರ್ಕಾರದ ಮುಂದೆ ಪ್ರಸ್ತಾವನೆಯನ್ನು ಇಡಲಾಗುತ್ತದೆ” ಎಂದು ಭರವಸೆ ನೀಡಿದರು.