- ಕುಮಾರಸ್ವಾಮಿ ಆರೋಪಗಳು ಹಿಟ್ ಅಂಡ್ ರನ್: ಸಿಎಂ ಸಿದ್ದರಾಮಯ್ಯ
- ಸರ್ಕಾರ ನಡೆಸುವವರು ನಾವು. ಸರಿ ಕಂಡಿದ್ದು ಮಾಡುತ್ತೇವೆ: ಪರಮೇಶ್ವರ್
ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ, ನಾನೇ ಗೃಹಸಚಿವನಾಗಿದ್ದೆ. ಆಗ ಅವರು ವರ್ಗಾವಣೆಗೆ ಯಾವ ರೀತಿ ಸಲಹೆ ಸೂಚನೆ ಕೊಡುತ್ತಿದ್ದರು ಎಂಬುದು ಗೊತ್ತಿದೆ. ಅದನ್ನು ನಾನು ಹೇಳಿಲ್ಲ. ನಮಗೂ ಹೇಳಲು ಬರುತ್ತದೆ ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ್ ತಿರುಗೇಟು ನೀಡಿದ್ದಾರೆ.
ಗೃಹ ಇಲಾಖೆಯಲ್ಲಿ ವರ್ಗಾವಣೆ ದಂಧೆ ಕುರಿತಂತೆ ಸರ್ಕಾರದ ಮೇಲೆ ಆರೋಪ ಮಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಮಾತಿಗೆ ಪ್ರತಿಕ್ರಿಯಿಸಿ, “ಕುಮಾರಸ್ವಾಮಿ ಅವರು ಏನು ಬೇಕಾದ್ರೂ ಕಮೆಂಟ್ ಮಾಡಲಿ. ಸರ್ಕಾರ ನಡೆಸುವವರು ನಾವು. ನಮಗೆ ಯಾವುದು ಸರಿ ಕಾಣುತ್ತದೆಯೋ ಅದನ್ನ ಮಾಡುತ್ತೇವೆ” ಎಂದರು.
“1200 ಇನ್ಸ್ ಪೆಕ್ಟರ್ ಗಳಿದ್ದಾರೆ. ಅಷ್ಟೂ ಜನರನ್ನು ನಾವು ವರ್ಗಾವಣೆ ಮಾಡುವುದಿಲ್ಲ. ಎಷ್ಟು ಮಂದಿ ಅಗತ್ಯ ಇದೆಯೋ ಅಷ್ಟು ಜನರನ್ನ ಮಾತ್ರ ವರ್ಗಾವಣೆ ಮಾಡುತ್ತೇವೆ. ಯಾವ ಏರಿಯಾದಲ್ಲಿ ಯಾವ ರೀತಿ ಯಾರನ್ನು ಹಾಕಿದರೆ ಅಪರಾಧ ಪ್ರಕರಣ ಕಂಟ್ರೋಲ್ಗೆ ಬರುತ್ತದೆ ಎಂಬುದು ಅವಲೋಕಿಸಿ ವರ್ಗಾವಣೆ ಮಾಡುತ್ತೇವೆ” ಎಂದು ತಿಳಿಸಿದರು.
“ಕೆಲವು ವರ್ಗಾವಣೆ ಸರಿ ಅನ್ನಿಸದೇ ಇರುವುದನ್ನು ನಿಲ್ಲಿಸಿದ್ದೇವೆ. ಅದನ್ನೆಲ್ಲ ನೋಡಿ ಸರಿ ಮಾಡಿ ವರ್ಗಾವಣೆ ಮಾಡುತ್ತೇವೆ. ಒಬ್ಬ ಇನ್ ಸ್ಪೆಕ್ಟರ್ ಗೆ 5, 6 ಕಡೆ ಅವಕಾಶ ಇದೆ. ಅದನ್ನು ನೋಡಿ ಸರಿ ಮಾಡಬೇಕು, ಸರಿ ಮಾಡುತ್ತೇವೆ” ಎಂದರು
ಕುಮಾರಸ್ವಾಮಿ ಆರೋಪಗಳು ಹಿಟ್ ಅಂಡ್ ರನ್: ಸಿಎಂ ಸಿದ್ದರಾಮಯ್ಯ
ಎಚ್ ಡಿ ಕುಮಾರಸ್ವಾಮಿಯವರದ್ದು ಯಾವಾಗಲೂ ಹಿಟ್ ಅಂಡ್ ರನ್ ಕೇಸು. ವೃಥಾ ಆರೋಪಗಳನ್ನು ಮಾಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ಇನ್ ಸ್ಪೆಕ್ಟರ್ ವರ್ಗಾವಣೆ ವಿಚಾರದಲ್ಲಿ ʼವೈಎಸ್ಟಿ ಟ್ಯಾಕ್ಸ್ʼ ಏಕೆ ಉಪಸ್ಥಿತರಿದ್ದರು ಎಂದು ಪ್ರಶ್ನಿಸಿರುವ ಬಗ್ಗೆ ಪ್ರತಿಕ್ರಿಯಿಸಿ, “ಈ ಹಿಂದೆ ಪೆನ್ಡ್ರೈವ್ ತೋರಿಸಿದ್ದರು. ಅದನ್ನು ಸಾಬೀತು ಮಾಡಿದರೇ? ಅವರ ಹತ್ತಿರ ಪೆನ್ಡ್ರೈವ್ ಇದ್ದರಲ್ಲವೇ ಹೊರಗೆಬಿಡುವುದು” ಎಂದು ಕುಟುಕಿದರು.