ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಐದು ಗ್ಯಾರಂಟಿಗಳನ್ನು ಜಾರಿಗೆ ತರುವ ಮೂಲಕ ಕೊಟ್ಟ ಮಾತು ಉಳಿಸಿಕೊಂಡಿದೆ. ಜೊತೆಗೆ ಪಂಚ ಗ್ಯಾರಂಟಿಗಳ ಸಮರ್ಪಕ ಅನುಷ್ಠಾನಕ್ಕೆ ಅಗತ್ಯ ಕ್ರಮವಹಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಔರಾದ ಪಟ್ಟಣದ ಗುರುಪದಪ್ಪಾ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ತಾಲೂಕಿನ ಸಾರ್ವಜನಿಕರ ಕುಂದು ಕೊರತೆಗಳ ಜನಸ್ಪಂದನ ಸಭೆ ಮತ್ತು ಗ್ಯಾರಂಟಿ ಯೋಜನೆಗಳ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.
“ಹಿಂದಿನ ರಾಜ್ಯ ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಬೇಸತ್ತು ಹೋದ ಜನತೆ ಜನಪರ ಆಡಳಿತ ಬಯಸಿದರು. ಜನರ ನಿರೀಕ್ಷೆಯಂತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಏಳು ತಿಂಗಳಾಗಿದೆ. ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯಂತೆ ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಹಾಗೂ ಯುವನಿಧಿ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ತಲುಪಿಸಿದ್ದೇವೆ” ಎಂದರು.
“ಕಾಂಗ್ರೇಸ್ನವರು ಗ್ಯಾರಂಟಿ ಕೊಡುತ್ತೇವೆಂದು ಸುಳ್ಳು ಹೇಳುತ್ತಿದ್ದಾರೆ, ಎಲ್ಲಾ ಉಚಿತ ನೀಡಲು ಸಾಧ್ಯವಿಲ್ಲ, ಇದರಿಂದ ರಾಜ್ಯ ದಿವಾಳಿ ಆಗುತ್ತದೆ ಎಂದು ವಿರೋಧ ಪಕ್ಷದವರು ಆರೋಪಿಸಿದರು. ಆದರೆ ನಾವು ಎಲ್ಲಾ ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ” ಎಂದು ಹೇಳಿದರು.
ಕೇಂದ್ರ ಸರ್ಕಾರದ ತಪ್ಪು ನೀತಿಯಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. 2014 ರಿಂದ ತೈಲ ಬೆಲೆ , ಸಿಲಿಂಡರ್ ಬೆಲೆ ಗಗನಕ್ಕೇರುತ್ತಿದೆ. ಅಡುಗೆ ಮನೆ ಹೋದರೆ ಕಣ್ಣೀರು ಬರುತ್ತದೆ. ಹಿಂದಿನ ರಾಜ್ಯ ಬಿಜೆಪಿ ಸರ್ಕಾರ ಸುಮಾರು 650 ಭರವಸೆ ನೀಡಿತ್ತು. ಆದರೆ ಶೇ.90% ಭರವಸೆಗಳು ಸಹ ಈಡೇರಿಸಲಿಲ್ಲ. ಆದರೆ ಜನ ಸಾಮಾನ್ಯರ ಆರ್ಥಿಕ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಕೊಟ್ಟ ಮಾತಿನಂತೆ ಎಲ್ಲ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದೇವೆ” ಎಂದರು.
ಕೆಕೆಆರ್ಡಿಬಿಯಿಂದ ಜಿಲ್ಲೆಗೆ 400 ಕೋಟಿ, ಔರಾದ ತಾಲೂಕಿಗೆ 100 ಕೋಟಿ ರೂ. ಅನುದಾನ :
“ಬೀದರ್ ಜಿಲ್ಲೆಯಲ್ಲಿ 3.50 ಲಕ್ಷ ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಲಾಭ ಪಡೆಯುತ್ತಿದ್ದಾರೆ. ತಿಂಗಳಿಗೆ 70 ಕೋಟಿ. ವರ್ಷಕ್ಕೆ 800 ಕೋಟಿ ರೂ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿದೆ ಮತ್ತು ಗೃಹಜ್ಯೋತಿ ಯೋಜನೆ ಅಡಿಯಲ್ಲಿ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುತ್ತಿದ್ದು, ಇದರಿಂದ ಫಲಾನುಭವಿಗಳಿಗೆ ವರ್ಷಕ್ಕೆ 10 ರಿಂದ 15 ಸಾವಿರ ರೂ. ಉಳಿತಾಯವಾಗಲಿದೆ” ಎಂದು ಹೇಳಿದರು.
“ಅನ್ನಭಾಗ್ಯ ಯೋಜನೆ ಯಾರು ರಾಜ್ಯದಲ್ಲಿ ಹಸಿವಿನಿಂದ ಉಳಿಯಬಾರದು ಎಂದು ಇದನ್ನು ಜಾರಿಗೆ ತಂದಿದ್ದು ರಾಜ್ಯದಲ್ಲಿ 4 ಕೋಟಿಗಿಂತ ಹೆಚ್ಚಿನ ಜನರು ಇದರ ಲಾಭ ಪಡೆಯುತ್ತಿದ್ದು, ತಿಂಗಳಿಗೆ 650 ಕೋಟಿ ರೂ. ವರ್ಷಕ್ಕೆ 7 ಸಾವಿರ ಕೋಟಿ ರೂ. ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತಿದೆ” ಎಂದರು.
“ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಬೀದರ ಜಿಲ್ಲೆಗೆ 400 ಕೋಟಿ ರೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ ಹೆಚ್ಚಿನ ಅನುದಾನ 100 ಕೋಟಿ ರೂ ಔರಾದ ತಾಲೂಕಿಗೆ ಬಂದಿದೆ. ಗಡಿ ತಾಲೂಕು ಔರಾದನಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ” ಎಂದು ಹೇಳಿದರು.
“ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಆದರೆ ಕೆಲವು ಶಕ್ತಿಗಳಿಂದ ದ್ವೇಷ ರಾಜಕಾರಣ ನಡೆಯುತ್ತಿದೆ. ಎಲ್ಲಾ ಧರ್ಮೀಯರನ್ನು ಜೊತೆಗೂಡಿ ರಾಜಕೀಯ ನಡೆಸಿದರೆ ರಾಮ ರಾಜ್ಯ ನಿರ್ಮಾಣ ಸಾಧ್ಯ.
ಇಲ್ಲಿ ಎಲ್ಲಾ ಧರ್ಮ, ಜಾತಿ, ಜನಾಂಗದವರು ವಾಸಿಸುತ್ತಿದ್ದು. ನಾವು ಯಾರನ್ನು ದ್ವೇಷಿಸದೆ ಎಲ್ಲರೂ ಪರಸ್ಪರ ಸಹೋದರತೆಯಿಂದ ಬಾಳಬೇಕಾಗಿದೆ. ನಮ್ಮ ಮಹಾನ್ ಪುರುಷರು ಇದನ್ನೆ ಹೇಳಿದ್ದು. ಎಲ್ಲರ ಒಳಿತನ್ನೆ ಅವರು ಬಯಸಿದ್ದರು, ಅದನ್ನು ನಾವು ಪಾಲಿಸಿಕೊಂಡು ಹೋಗಬೇಕಿದೆ” ಎಂದರು.