ನನ್ನ ಮೇಲೆ ಸುಳ್ಳು ಆರೋಪ ಮಾಡಲು ಯಾರದ್ದೋ ಆಡಿಯೊ ಹಾಕಬೇಡಿ. ನಾನು ಮಾತನಾಡಿದ್ದು ಇದ್ದರೆ ಹಾಕಿ ಎಂದು ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಅವರು ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಸವಾಲು ಹಾಕಿದ್ದಾರೆ.
ಕಲಬುರಗಿ ಜಿಲ್ಲೆ ಚಿತ್ತಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪೇಠಶಿರೂರ ಗ್ರಾಮದಲ್ಲಿ ಮತಯಾಚಿಸಿ ಮಾತನಾಡಿದ ಅವರು, “ಕಾಂಗ್ರೆಸ್ ಮುಖಂಡರ ಅಪಪ್ರಚಾರಕ್ಕೆ ಯಾರೂ ತಲೆ ಕೆಡಿಸಿಕೊಳ್ಳಬೇಡಿ. ನಾನು ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನೀವು ಆಶಿರ್ವಾದ ಮಾಡಿದರೆ, ಪ್ರತಿ ಗ್ರಾಮಗಳ ಅಭಿವೃದ್ಧಿಗೆ ಅಧಿಕಾರಿಗಳನ್ನು ಕರೆದುಕೊಂಡು ಬರುತ್ತೇನೆ” ಎಂಬ ಭರವಸೆ ನೀಡಿದರು.
ಮುಖಂಡ ಬಸವರಾಜ ಶಿವಗೋಳ ಮಾತನಾಡಿ, “ಸೋಲಿನ ಭೀತಿಯಿಂದ ಕಾಂಗ್ರೆಸ್ಸಿನವರು ಏನೇನೋ ಮಾಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಖರ್ಗೆ ಕುಟುಂಬವನ್ನು ಸಾಫ್ ಮಾಡಲು ಯಾರಿಂದಲಾದರೂ ಸಾಧ್ಯವೇ? ಅದೇನು ಸಣ್ಣ ಮಾತಾ?” ಎಂದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಬಂಧನಕ್ಕೆ ದಲಿತ ಮುಖಂಡರ ಆಗ್ರಹ
ಜಿಲ್ಲಾ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ ಮಾತನಾಡಿ, “ಚುನಾವಣೆಯಲ್ಲಿ ಮತದಾರರು ಬಿಜೆಪಿಯತ್ತ ಒಲವು ತೋರುತ್ತಿದ್ದಾರೆ. ಮಣಿಕಂಠ ಅವರ ಗೆಲುವಿಗೆ ಸಂಕಲ್ಪ ಮಾಡಿದ್ದಾರೆ. ಬಿಜೆಪಿಗೆ ದೊರೆಯುತ್ತಿರುವ ಜನಬೆಂಬಲ ತಡೆದುಕೊಳ್ಳಲಾಗದೆ ಇಂತಹ ಅಪಪ್ರಚಾರಕ್ಕೆ ಕೈ ಹಾಕಿದ್ದಾರೆ” ಎಂದು ಆರೋಪಿಸಿದರು.
ಮುಖಂಡರಾದ ಶಿವಾಜಿ ರೂಪನೂರ, ದಶರಥ ನಾಮದಾರ, ವಿಜಯಕುಮಾರ ಗುಂಡಗುರ್ತಿ, ಸೋಮಶೇಖರ ಐನಾಪುರ, ಸದಾಶಿವ ವಿಶ್ವಕರ್ಮ, ಅರ್ಜುನ ಸಿಂಗ್ ಜಾರ್ಖಂಡ, ಡಾ. ವಿನೋದ ಜಾರ್ಖಂಡ, ಶ್ರೀಮಂತ ನಾಮದಾರ ಸೇರಿದಂತೆ ಇತರರು ಇದ್ದರು.