ತೊಗರಿ ನಾಡಿನಲ್ಲಿ ತೊಗರಿ ಬೆಳೆಗಾರರಿಗೆ ಪರಿಹಾರ ಮತ್ತು ಬೆಳೆವಿಮೆ ಹಣ ಬಿಡುಗಡೆ ಮಾಡದೆ ಅನ್ಯಾಯ ಮಾಡಿದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೊಸಳೆ ಕಣ್ಣೀರು ಹಾಕುವುದನ್ನು ಬಿಟ್ಟು ಮೊದಲು ಅನ್ನದಾತರಿಗೆ ಉತ್ತರಿಸಬೇಕು. ತೊಗರಿ ನಾಡಿಗೆ ಬರಲು ಅವರಿಗೆ ಯಾವ ಮುಖವಿದೆ ಎಂದು ಕಲಬುರಗಿ ರೈತ ಸಂಘದ ಮುಖಂಡ ಶರಣಬಸಪ್ಪ ಮಮಶೆಟ್ಟಿ ಕಿಡಿಕಾರಿದ್ದಾರೆ.
“ನೆಟೆ ರೋಗದಿಂದ ಒಣಗಿಹೋದ ತೊಗರಿ ಬೆಳೆಗಾರರಿಗೆ ಪರಿಹಾರ ಘೋಷಿಸಿ, ರೈತರಿಗೆ ಆಸೆ ಹುಟ್ಟಿಸಿ ಹಣ ಬಿಡುಗಡೆ ಮಾಡಲಾರದೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರಿಗೆ ದ್ರೋಹ ಬಗೆದಿವೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರಿಹಾರ ಘೋಷಿಸಿದ ರೈತರ ಖಾತೆಗೆ ಹಣ ಯಾಕೆ ಜಮಾ ಮಾಡಲಿಲ್ಲವೆಂದು ಮೊದಲು ರೈತರಿಗೆ ಉತ್ತರಿಸಲಿ” ಎಂದು ಆಗ್ರಹಿಸಿದ್ದಾರೆ.
“ರಾಜ್ಯ ಸರ್ಕಾರ ರೈತರಿಗೆ ಸುಳ್ಳು, ಮೋಸ, ವಂಚನೆ ಮಾಡಿ, ಕೇವಲ ಅಧಿಕಾರದ ಕುರ್ಚಿಯ ಆಸೆಗಾಗಿ ಚುನಾವಣೆ ಗಿಮಿಕ್ ಮಾಡೋದನ್ನು ಕೈಬಿಟ್ಟು ರೈತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
“ಬೆಳೆವಿಮೆ ಹಣ ಕಟ್ಟಿದ ಎಲ್ಲ ರೈತರಿಗೆ ವಿಮೆ ಹಣ ಬಿಡುಗಡೆ ಮಾಡಲಾಗದೆ ನೆನೆಗುದಿಗೆ ಹಾಕಿ ಯುನಿವರ್ಸೆಲ್ ಸೋಂಪೊ ಇನ್ಸೂರೆನ್ಸ್ ಕಂಪನಿ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ರೈತರ ನೆರವಿಗೆ ಬಾರದ ರಾಜ್ಯದ ಮುಖ್ಯಮಂತ್ರಿ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ರೈತರ ಎದುರು ಸುಳ್ಳು ಹೇಳಿಕೊಂಡು ಓಡಾಡುತ್ತಿರುವ ಮುಖ್ಯಮಂತ್ರಿ ರೈತ ವಿರೋಧಿ ಯುನಿವರ್ಸೆಲ್ ಸೋಂಪೊ ಇನ್ಸೂರೆನ್ಸ್ ಕಂಪನಿ ಬೆನ್ನಿಗೆ ನಿಂತು ಕಂಪನಿಯೊಂದಿಗೆ ಶಾಮೀಲಾದಂತೆ ಕಾಣುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? 2023ರ ವಿಧಾನಸಭಾ ಚುನಾವಣೆ | ಮತದಾರರ ಓಲೈಕೆಗೆ ‘ಉಚಿತ’ಗಳ ಸುರಿಮಳೆ; ಇವು ಕೇವಲ ಭರವಸೆಗಳೇ?
“ಕಲಬುರಗಿ ಮತ್ತು ಯಾದಗಿರಿ ಡಿಸಿಸಿ ಬ್ಯಾಂಕ್ನಿಂದ ಸಾಲ ಮಂಜೂರಾಗಿರುವ ರೈತರಿಗೆ ಸಾಲದ ಹಣ ನೀಡಲಾರದೆ ಪಹಣಿಯಲ್ಲಿ ಭೋಜಾ ಏರಿಸಿ ರೈತರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಆದರೆ ಮುಖ್ಯಮಂತ್ರಿ ಮಾತ್ರ ಕಿಂಚಿತ್ತೂ ರೈತರ ಬಗ್ಗೆ ಕಾಳಜಿ ತೋರುತ್ತಿಲ್ಲ. ಅನ್ನದಾತರಿಗೆ ಬೇಜವಾಬ್ದಾರಿತನ ತೋರುತ್ತಿರುವ ಸರ್ಕಾರದ ನೀತಿ ಖಂಡನೀಯ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.