- ಭರದಿಂದ ಸಾಗಿದ ಠಾಣಾಗುಂದಿ ಗೇಟ್ ಕೆಳ ಸೇತುವೆ ಕಾಮಗಾರಿ
- ಸ್ಥಳಕ್ಕೆ ಭೇಟಿ ನೀಡಿ ಮತದಾನ ಜಾಗೃತಿ ಮೂಡಿಸಿದ ಉಮೇಶ ಮುದ್ನಾಳ
ಅವೈಜ್ಞಾನಿಕ ರೈಲ್ವೆ ಕೆಳ ಸೇತುವೆಯಿಂದಾಗಿ ಯಾದಗಿರಿ-ಮುದ್ನಾಳ ಮಾರ್ಗವಾಗಿ ಸಂಚರಿಸಲು ಉಂಟಾಗಿದ್ದ ಸಮಸ್ಯೆ ಸರಿಪಡಿಸಬೇಕೆಂದು ಹೋರಾಟ ನಡೆಸಿದ್ದರ ಹಿನ್ನೆಲೆ 22 ಲಕ್ಷ ರೂ. ಅನುದಾಣ ಮಂಜೂರು ಮಾಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ ಮುದ್ನಾಳ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, “ಯಾದಗಿರಿಯಿಂದ ಮುದ್ನಾಳ ಮಾರ್ಗವಾಗಿ ತೆರಳುವ ರಸ್ತೆಯ ಮಧ್ಯೆ (ಎಲ್ ಸಿ 230 ಹಳೆ ಠಾಣಾಗುಂದಿ ಗೇಟ್) ಠಾಣಾಗುಂದಿ ಬಳಿಯ ಚೌಕಿ ತಾಂಡಾದ ರೈಲ್ವೆ ಹಳಿಗಳ ಕೆಳಗೆ ನಿರ್ಮಿಸಲಾದ ಸೇತುವೆ ತೀರ ಅವೈಜ್ಞಾನಿಕವಾಗಿತ್ತು ಎಂದು ಹೋರಾಟ ನಡೆಸಿದ್ದರ ಫಲವಾಗಿ ಇಂದು ಅಧಿಕಾರಿಗಳು ಸ್ಪಂದಿಸಿದ್ದಾರೆ. ಇದು ನಮ್ಮ ಹೋರಾಟಕ್ಕೆ ಸಂದ ಜಯ” ಎಂದಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಗುಂತಕಲ್ ವಿಭಾಗೀಯ ನಿಯಂತ್ರಣಾಧಿಕಾರಿ ಡಿ ಎನ್ ಕೃಷ್ಣಪ್ಪ ಮತ್ತು ರಾಯಚೂರು ಕಚೇರಿಯ ಸಹಾಯಕ ವಿಭಾಗಿಯ ಎಂಜಿನಿಯರ್ (ಎಡಿಎನ್) ಸೈಯದ್ ಮಹಮ್ಮದ್ದುಲ್ಲಾ, 22 ಲಕ್ಷ ರೂ. ವೆಚ್ಚದ ಕಾಮಗಾರಿ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಅಲ್ಲದೇ ಕಳಪೆ ಕಾಮಗಾರಿ ಆಗಬಾರದು, ಗುಣಮಟ್ಟದಿಂದ ಮಾಡುವಂತೆ ಸಂಬಂಧಿಸಿದವರಿಗೆ ಸೂಚಿಸಿದರು ಎಂದು ತಿಳಿಸಿದ್ದಾರೆ.
ಮತದಾನ ಕುರಿತು ಜಾಗೃತಿ
ಇದೇ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕಾರ್ಮಿಕರಿಗೆ ಮತದಾನದ ಕುರಿತು ಜಾಗೃತಿ ಮೂಡಿಸಿದ ಉಮೇಶ, ಪ್ರತಿಯೊಬ್ಬರು ಮತದಾನ ಮಾಡಬೇಕು. ಕೆಲಸ ನಡೆದಿರುವ ಹಿನ್ನೆಲೆ ಮತದಾನ ಬಿಡಬಾರದು ಎಂದು ಸಲಹೆ ನೀಡಿದರು.
ಬೇಸಿಗೆ ಇರುವುದರಿಂದ ಕೃಷಿ ಕಾಯಕ ಇರುವುದಿಲ್ಲ, ಮಕ್ಕಳಿಗೆ ಶಾಲೆ ಇರುವುದಿಲ್ಲ ಹೀಗಾಗಿ ಈ ಭಾಗದ ಕೃಷಿಕರು ಮಹಾನಗರಗಳಿಗೆ ಗುಳೆ ಹೋಗಿರುತ್ತಾರೆ. ಅವರನ್ನು ಚುನಾವಣೆಗೆ ಕರೆಸಲು ರಾಜಕಾರಣಿಗಳು ಹಣ ಕೊಡುವ ವ್ಯವಸ್ಥೆ ಮಾಡುತ್ತಿದ್ದಾರೆ ಎಂದರು.
ಈ ಸುದ್ದಿ ಓದಿದ್ದೀರಾ? ಬೇಲೂರು | ಮೋದಿ ಭಾಷಣ ಏನಿದ್ದರೂ ಕೇಂದ್ರಕ್ಕೆ ಸೀಮಿತ: ಶಾಸಕ ಲಿಂಗೇಶ್
ಆದ್ದರಿಂದ ಚುನಾವಣಾ ಆಯೋಗ ಮತದಾರರನ್ನು ಕರೆ ತರಲು ಹೆಚ್ಚುವರಿ ರೈಲುಗಳ ವ್ಯವಸ್ಥೆ ಮಾಡಬೇಕು, ಇಲ್ಲವೇ ಕೂಲಿ ಕಾರ್ಮಿಕರು ಇರುವ ಸ್ಥಳದಲ್ಲಿಯೇ ಡಿಜಿಟಲ್ ಮತದಾನ ವ್ಯವಸ್ಥೆ ಮಾಡಿ ಅವರು ಮತದಾನದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಸಂಘದ ಪದಾಧಿಕಾರಿಗಳು ಮತ್ತು ಕಾರ್ಮಿಕರು ಉಪಸ್ಥಿತರಿದ್ದರು.