ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಚೆನ್ನಹಳ್ಳಿ ಗ್ರಾಮದ ಅಡ್ಡಾಳ ನಾಲೆಗೆ ಸೇತುವೆಯನ್ನೇ ನಿರ್ಮಾಣ ಮಾಡಲಾಗಿಲ್ಲ. ರೈತರು, ಕೃಷಿ ಕೂಲಿ ಕಾರ್ಮಿಕರು ನೀರು ಹರಿಯುತ್ತಿದ್ದರೂ ಒಂದು ದಡದಿಂದ ಮತ್ತೊಂದು ದಡಕ್ಕೆ ನಾಲೆಯಲ್ಲಿ ಇಳಿದೇ ಸಾಗಬೇಕಾದ ಪರಿಸ್ಥಿತಿ ಇದೆ. ನಾಲೆಯಲ್ಲಿ ಹೆಚ್ಚು ನೀರು ಹರಿಯುವಾಗ ಜೀವ ಭಯ ಎದುರಾಗುತ್ತದೆ. ದಿನನಿತ್ಯ ಪ್ರಾಣಾಪಾಯದ ಆತಂಕದಲ್ಲಿಯೇ ಅಲ್ಲಿನ ಜನರು ನಾಲೆ ದಾಟುವಂತಾಗಿದೆ.
ಅಂಕನಹಳ್ಳಿ ಕರೆಯಿಂದ ಕೋಡಿ ಬಿದ್ದ ನೀರು, ಮೈಸೂರು ಗ್ರಾಮಾಂತರ ನಗರದ ಕೊಳಚೆ ನೀರು, ಮೈಸೂರು ನಗರಕ್ಕೆ ಹೊಂದಿಕೊಂಡಿರುವ ಹಂಚ್ಯಾ ಗ್ರಾಮದ ಯುಜಿಡಿ ಮತ್ತು ಒಳಚರಂಡಿ ನೀರು ನೇರವಾಗಿ ಚೆನ್ನಹಳ್ಳಿ ಗ್ರಾಮದ ಅಡ್ಡಾಳ ನಾಲೆಯಲ್ಲಿ ಹರಿಯುತ್ತದೆ. ಚೆನ್ನಹಳ್ಳಿ ಗ್ರಾಮದ ರೈತರ ಸುಮಾರು 30 ಎಕರೆ ಕೃಷಿ ಭೂಮಿ ನಾಲೆಯ ಮತ್ತೊಂದು ಬದಿಯಲ್ಲಿದ್ದು, ದನ, ಕರು ಮೇಯಿಸುವವರು, ಕೃಷಿ ಕೆಲಸಕ್ಕೆ ಹೋಗುವವರು, ರೈತರು -ಎಲ್ಲರೂ ನಾಲೆಯಲ್ಲಿ ಇಳಿದು ಮತ್ತೊಂದು ದಡ ಸೇರಬೇಕಾಗಿದೆ.
ಕೆಲವು ವರ್ಷಗಳಲ್ಲಿ ಐದಾರು ಮಂದಿ ಈ ನಾಲೆಯ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಜೀವ ಭಯದ ಜೊತೆಗೆ, ನಾಲೆಯಲ್ಲಿ ಹರಿಯುವ ಕೊಳಚೆ ನೀರಿನಿಂದ ಅನಾರೋಗ್ಯದ ಭೀತಿಯೂ ಇಲ್ಲಿನ ಜನರಲ್ಲಿದೆ.
ಗ್ರಾಮಸ್ಥ ನವೀನ್ ಕುಮಾರ್ ಈದಿನ.ಕಾಮ್ ಜೊತೆ ಮಾತನಾಡಿ, “ಈ ಹಿಂದೆ ರವೀಂದ್ರ ಶ್ರೀಕಂಠಯ್ಯ ಅವರು ಶಾಸಕರಾಗಿದ್ದ ಸಮಯದಲ್ಲಿ 2 ಕೋಟಿ ಮಂಜೂರಾಗಿತ್ತು. ಆ ವೇಳೆ, ಭಾರೀ ಮಳೆ ಸುರಿದು ಪ್ರವಾಹ ಉಂಟಾಗಿತ್ತು. ಅದೇ ಸಮಯದಲ್ಲಿ ಮುಖ್ಯಮಂತ್ರಿಗಳು ಬದಲಾದ ಕಾರಣ ಮಂಜೂರಾಗಿದ್ದ ಹಣ ವಾಪಸ್ ಹೋಯಿತು. ಸ್ಥಳಕ್ಕೆ ಎಂಜಿನಿಯರ್ಗಳು, ಶಾಸಕರು, ನೀರಾವರಿ ಇಲಾಖೆ ಅಧಿಕಾರಿಗಳು ಭೇಟಿ ಮಾಡಿ ಸ್ಥಳ ಮಹಜರ್ ಮಾಡಿದ್ದರು. ಇನ್ನೇನು ಕಾಮಗಾರಿ ಆಗಬೇಕು ಅನ್ನುವಷ್ಟರಲ್ಲಿ, ಸೇತುವೆ ಕಾಮಗಾರಿ ಅಲ್ಲಿಗೆ ನಿಂತುಹೋಯಿತು” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳೀಯ ರೈತ ಸಿದ್ದೇಗೌಡ ಮಾತನಾಡಿ., “20 ಮೀಟರ್ ಅಷ್ಟು ದೂರದ ಜಮೀನಿಗೆ ವ್ಯವಸಾಯ ಮಾಡಲು ಅಡ್ಡಾಳ ನಾಲೆ ಹಾದಾ ಹೋಗಬೇಕು. ಇಲ್ಲ ಅಂದ್ರೆ 9 ಕಿ.ಮೀ ಸುತ್ತಿಕೊಂಡು ಬರಬೇಕು. ಇಂತಹ ಪರಿಸ್ಥಿತಿಯಲ್ಲಿಯೇ ದನ-ಕುರಿಗೆ ಮೇವು ತರಬೇಕು. ಗೊಬ್ಬರ ಗೋಡು ತಕೊಂಡು ಹೋಗಬೇಕು. ಇದರಿಂದ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ನೀರು ಕಲುಷಿತವೂ ಆಗಿದ್ದು, ಮೈಯೆಲ್ಲಾ ನವೆ ಬರುತ್ತದೆ. ಗುಳ್ಳೆಗಳಾಗುತ್ತವೆ. ಆರೋಗ್ಯ ಕೆಡುತ್ತದೆ. ಆದರೆ, ನಮಗೆ ಬೇರೆ ದಾರಿ ಇಲ್ಲ. ನಾಲೆ ಮೂಲಕವೇ ಜಮೀನಿಗೆ ಹೋಗಬೇಕು. ಎಷ್ಟೇ ಮನವಿ ಮಾಡಿದರೂ ಯಾರೊಬ್ಬರೂ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ?: ಕೆಆರ್ಎಸ್ ಡ್ಯಾಮ್ನ ಪರಿಸ್ಥಿತಿ ಬಗ್ಗೆ ಸಿದ್ದರಾಮಯ್ಯ ಶ್ವೇತಪತ್ರ ಹೊರಡಿಸಲಿ: ಶೋಭಾ ಕರಂದ್ಲಾಜೆ ಆಗ್ರಹ
ರೇಣುಕಮ್ಮ ಮಾತನಾಡಿ, “ಬೆಳೆದ ಬೆಳೆ ಕೊಯ್ಲು ಮಾಡಿ ತರಬೇಕು ಅಂದರೆ ನಾಲೆ ನೀರು ನಿಲ್ಲಿಸುವವರೆಗೆ ಕಾಯಬೇಕು. ಬೇರೆಯವರ ಜಮೀನಿನ ಕೆಲಸ ಮುಗಿದ ಮೇಲೆ, ಅವರ ಅನುಮತಿ ಪಡೆದು ನೀರು ನಿಲ್ಲಿಸಲು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಬೇಕು. ಅವರು ನೀರು ನಿಲ್ಲಿಸಲಿಲ್ಲ ಅಂದರೆ, ನಮ್ಮ ಬೆಳೆ ಜಮೀನಿನಲ್ಲಿಯೇ ಉಳಿಯುತ್ತದೆ. ಇಲ್ಲ, 9 ಕಿ.ಮೀ ಸುತ್ತಿಕೊಂಡು ತರಬೇಕು. ಸುತ್ತಿಕೊಂಡು ಬರಲೂ ಕೂಡ ರಸ್ತೆ ಇಲ್ಲ. ಜಾಮೀನುಗಳ ಮೇಲೆ ಬರಬೇಕು. ಅದಕ್ಕೂ ಜಮೀನು ಮಾಲೀಕರು ತಕಾರಾರು ಮಾಡುತ್ತಾರೆ. ಹೀಗಾದರೆ ರೈತ ಬದುಕೋದು ಹೇಗೆ. ಜೀವನ ನಡೆಸೋದು ಹೇಗೆ? ಅಧಿಕಾರಿಗಳು, ಜನಪ್ರತಿನಿಧಿಗಳು ಸೇತುವೆ ಮಾಡಿಕೊಡಬೇಕು” ಎಂದು ಮನವಿ ಮಾಡಿದರು.
ಸೇತುವೆ ನಿರ್ಮಾಣದ ಬಗ್ಗೆ ಕೆಆರ್ಎಸ್ ಅಣೆಕಟ್ಟೆ ಬಳಿ ಇರುವ ನೀರಾವರಿ ಇಲಾಖೆಯ ಇಇ ಜಯಂತ್ ಅವರನ್ನು ಈದಿನ.ಕಾಮ್ ಪ್ರಶ್ನಿಸಿದ್ದು, “ನಾನು ಇತ್ತೀಚೆಗಷ್ಟೇ ಇಲ್ಲಿಗೆ ಬಂದಿದ್ದೇನೆ. ಹೆಚ್ಚಿನ ಮಾಹಿತಿ ಇಲ್ಲ. ಮಾಹಿತಿ ತರಿಸಿಕೊಂಡು ಕೂಲಂಕುಷ ಪರಿಶೀಲನೆ ಮಾಡುತ್ತೇನೆ. ಅಡ್ಡಾಳ ನಾಲೆಗೆ ತಕ್ಷಣವೇ ಭೇಟಿ ಕೊಟ್ಟು ಸ್ಥಳ ಪರಿಶೀಲನೆ ಮಾಡಿ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುತ್ತೇವೆ. ಸರ್ಕಾರ ಅನುದಾನ ಬಿಡುಗಡೆ ಮಾಡಿದ ಕೂಡಲೆ ಕಾಮಗಾರಿ ಆರಂಭಿಸುತ್ತೇವೆ” ಎಂದು ಹೇಳಿದರು.
ಈದಿನ.ಕಾಮ್ ಜೊತೆ ಮಾತನಾಡಿದ ಶ್ರೀರಂಗಪಟ್ಟಣ ಪ್ರಭಾರ ತಹಸೀಲ್ದಾರ್ ಕುಮಾರ್, “ಅಡ್ಡಾಳ ನಾಲೆ ಸೇತುವೆ ಬಗ್ಗೆ ಹೆಚ್ಚು ಮಾಹಿತಿ ತಿಳಿದಿಲ್ಲ. ಸಂಭಂದಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ತಕ್ಷಣವೇ ಸರ್ಕಾರಕ್ಕೆ ಪತ್ರ ಬರೆಯುವೆ. ಅಡ್ಡಾಳ ನಾಲೆಗೆ ಒಳ ಚರಂಡಿ ನೀರು ಹಾಗೂ ಯುಜಿಡಿ ಕಲುಷಿತ ನೀರನ್ನು ಹರಿಸದಂತೆ ಸಂಭಂದಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಸೂಕ್ತಕ್ರಮ ವಹಿಸುವಂತೆ ತಿಳಿಸುತ್ತೇವೆ” ಎಂದು ಹೇಳಿದರು.