ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಿವೆ. ಪದೇ ಪದೆ ವಿಳಂಬವಾಗುತ್ತಿದ್ದ ಮೇಯರ್ ಚುನಾವಣೆ ಎಂಟು ತಿಂಗಳ ಹಿಂದೆ ನಡೆದು, ಬಿಜೆಪಿಯ ಶಿವಕುಮಾರ್ ಮೇಯರ್ ಆಗಿ ಆಯ್ಕೆಯಾಗಿದ್ದರು. ಇದೀಗ, ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಮೂರು ಸಮಿತಿಗಳ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್ ಪಡೆದುಕೊಂಡಿದೆ. ಅಧಿಕಾರದಲ್ಲಿ ಇಲ್ಲದಿದ್ದರೂ ಕಾಂಗ್ರೆಸ್ ಒಂದು ಸಮಿತಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.
ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಗೆ ನಡೆಯಬೇಕಿದ್ದ ಚುನಾವಣೆಯೂ ಮೂರು ಬಾರಿ ಮುಂದೂಡಲ್ಪಟ್ಟು, ಅಂತಿಮವಾಗಿ ಗುರುವಾರ ನಡೆದಿದೆ. ಈ ಹಿಂದೆ, ಜೆಡಿಎಸ್-ಬಿಜೆಪಿ ಒಪ್ಪಂದದಂತೆ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಹುದ್ದೆಗಳು ಬಿಜೆಪಿಗೆ ಮತ್ತು ಎಲ್ಲ ಸ್ಥಾಯಿ ಸಮಿತಿಗಳ ಅಧ್ಯಕ್ಷ ಹುದ್ದೆಗಳು ಜೆಡಿಎಸ್ಗೆ ನೀಡಬೇಕಾಗಿತ್ತು. ಆದರೆ, ಜೆಡಿಎಸ್ ಮಾಡಿಕೊಂಡ ಎಡವಟ್ಟಿನಿಂದ ಒಂದು ಸ್ಥಾಯಿ ಸಮಿತಿ ಕಾಂಗ್ರೆಸ್ ಪಾಲಾಗಿದೆ.
ನಾಲ್ಕು ಸ್ಥಾಯಿ ಸಮಿತಿಗಳ ಪೈಕಿ, ಪಟ್ಟಣ ಯೋಜನೆ ಮತ್ತು ಸುಧಾರಣಾ ಸ್ಥಾಯಿ ಸಮಿತಿ ಕಾಂಗ್ರೆಸ್ ಪಾಲಾಗಿದೆ. ಈ ಸಮಿತಿಯಲ್ಲಿ ಏಳು ಮಂದಿ ಸದಸ್ಯರಿದ್ದಾರೆ. ಅವರಲ್ಲಿ ಕಾಂಗ್ರೆಸ್ನ ಇಬ್ಬರು, ಬಿಜೆಪಿ, ಜೆಡಿಎಸ್ ಮತ್ತು ಬಿಎಸ್ಪಿಯ ಒಬ್ಬರು ಹಾಗೂ ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಗುರುವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಸದಸ್ಯ ಮತ್ತು ಒಬ್ಬರು ಪಕ್ಷೇತರ ಸದಸ್ಯ ಗೈರಾಗಿದ್ದರು. ಹೀಗಾಗಿ, ಹಾಜರಿದ್ದು ಮತದಾನಕ್ಕೆ ಐದು ಮಂದಿ ಮಾತ್ರ ಇದ್ದರು. ಇವರಲ್ಲಿ ಕಾಂಗ್ರೆಸ್ಗೆ ಬಿಎಸ್ಪಿ ಸದಸ್ಯೆ ಪಲ್ಲವಿ ಬೇಗಂ ಬೆಂಬಲ ನೀಡಿದರು. ಹೀಗಾಗಿ, ಜೆಡಿಎಸ್ ನಾಮಪತ್ರವನ್ನೇ ಸಲ್ಲಿಸಲಿಲ್ಲ. ಪರಿಣಾಮ, ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನ ಎಚ್.ಎಂ ಶಾಂತಕುಮಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಮೈಸೂರು | ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶ ಕಳುಹಿಸಿದ ಉಪನ್ಯಾಸಕನ ಬಂಧನ
ಉಳಿದ ಮೂರು ಸ್ಥಾಯಿ ಸಮಿತಿಗಳು ಜೆಡಿಎಸ್ ತೆಕ್ಕೆಗೆ ಸೇರಿದ್ದು, ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸವಿತಾ, ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆರ್ ನಾಗರಾಜ್, ಲೆಕ್ಕಪತ್ರಗಳ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ವಿ ರಮೇಶ್ ಆಯ್ಕೆಯಾಗಿದ್ದಾರೆ.