ಲೋಕಸಭಾ ಚುನಾವಣೆಯಲ್ಲಿ ಮತದಾನಕ್ಕೆ ತಮ್ಮೂರಿನಲ್ಲೇ ಮತಗಟ್ಟೆ ರಚಿಸಬೇಕು. ಇಲ್ಲದಿದ್ದರೆ, ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಮೈಸೂರು ಜಿಲ್ಲೆಯ ಚನ್ನಗುಂಡಿ ಹಾಡಿಯ ಆದಿವಾಸಿ ಸಮುದಾಯ ಎಚ್ಚರಿಕೆ ನೀಡಿದೆ.
“ನಮ್ಮ ಊರಿನಲ್ಲೇ ಇದ್ದ ಮತಗಟ್ಟೆಯನ್ನು ಪಕ್ಕದ ಊರಿಗೆ ಸ್ಥಳಾಂತರಿಸಲಾಗಿದೆ. ಅದನ್ನು ಕೈಬಿಟ್ಟು, ನಮ್ಮೂರಿನಲ್ಲೇ ಮತಗಟ್ಟೆ ಸ್ಥಾಪಿಸಬೇಕು. ನಾವು ಬೇರೆ ಊರಿಗೆ ಹೋಗಿ ಮತ ಚಲಾಯಿಸುವುದಿಲ್ಲ” ಎಂದು ಸಮುದಾಯದ ಜನರು ಪಟ್ಟು ಹಿಡಿದಿದ್ದಾರೆ.
“ಹಲವಾರು ವರ್ಷಗಳಿಂದ ಚನ್ನಗುಂಡಿ ಹಾಡಿಯಲ್ಲೇ ಮತಗಟ್ಟೆ ಸ್ಥಾಪಿಸಲಾಗುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಮತಗಟ್ಟೆಯನ್ನು ಅರಳಹಳ್ಳಿ ಗ್ರಾಮಕ್ಕೆ ವರ್ಗಾಯಿಸಲಾಗಿದೆ. ಗ್ರಾಮದಲ್ಲಿ ವೃದ್ಧರು, ವಿಷೇಶ ಚೇತನರು, ಗರ್ಭಿಣಿ, ಬಾಣಂತಿಯರಿದ್ದಾರೆ. ಸುಮಾರು 5 ಕಿಲೋ ಮೀಟರ್ ದೂರ ನಡೆದುಕೊಂಡು ಹೋಗಿ ಮತ ಚಲಾಯಿಸಲು ಸಾಧ್ಯವಿಲ್ಲ. ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅರಳಹಳ್ಳಿ ಗ್ರಾಮಕ್ಕೆ ಹೋಗಿ ಮತವನ್ನು ಚಲಾಯಿಸಿದ್ದೇವೆ. ಸಂಚಾರಕ್ಕೆ ಯಾವುದೇ ವಾಹನದ ವ್ಯವಸ್ಥೆ ಮಾಡಿರಲಿಲ್ಲ. ಈ ಬಾರಿ, ಮತಗಟ್ಟೆಯನ್ನು ನಮ್ಮ ಗ್ರಾಮದಲ್ಲೇ ಸ್ಥಾಪಿಸಬೇಕು. ಇಲ್ಲದಿದ್ದರೆ, ಮತದಾನ ಬಹಿಷ್ಕರಿಸುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.