ಮೈಸೂರಿನ ಗೋಕುಲಂ ಬಡಾವಣೆಯಲ್ಲಿರುವ ʼಆದಿತ್ಯ ಅಧಿಕಾರಿ ಆಸ್ಪತ್ರೆʼಗೆ ಬೀಗ ಹಾಕುವಂತೆ ಮತ್ತು ವೈದ್ಯ ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲಿಸುವಂತೆ ಮೈಸೂರು ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಆದೇಶ ಹೊರಡಿಸಿದ್ದಾರೆ. ಆಸ್ಪತ್ರೆಯಲ್ಲಿರುವ ರೋಗಿಗಳನ್ನು ಕೂಡಲೇ ಸ್ಥಳಾಂತರಿಸುವಂತೆ ಸೂಚನೆ ನೀಡಿದ್ದಾರೆ.
ರವಿಗೌಡ ದೊಡ್ಡಪ್ಪ ಶಿವಣ್ಣ ಎಂಬುವರು 2016ರಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದರು. ಗಾಯಗೊಂಡಿದ್ದ ಶಿವಣ್ಣರ ಅವರನ್ನು ಮೊದಲು ಬೇರೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 2017ರಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಆದಿತ್ಯ ಅಧಿಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಒಂದು ಆಪರೇಷನ್ಗಾಗಿ ನಾಲ್ಕು ತಿಂಗಳು ಚಿಕಿತ್ಸೆ ನೀಡಲಾಗಿತ್ತು. ಆಪರೇಷನ್ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಶಿವಣ್ಣ ಮೃತಪಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಮೈಸೂರಿನ ರವಿಗೌಡ ಎಂಬುವರು ಆರೋಗ್ಯ ಇಲಾಖೆಯ ಜಾಗೃತಕೋಶದ ಜಾಗೃತಾಧಿಕಾರಿಗೆ ದೂರು ನೀಡಿದ್ದರು. ವೈದ್ಯರ ನಿರ್ಲಕ್ಷ್ಯದ ಬಗ್ಗೆ ತನಿಖೆ ನಡೆಸಬೇಕು ಮತ್ತು ಆಸ್ಪತ್ರೆಯನ್ನು ಬಂದ್ ಮಾಡಿಸಬೇಕೆಂದು ದೂರಿನಲ್ಲಿ ದಾಖಲಿಸಿದ್ದರು. ಈ ಸಂಬಂಧ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಡಾ.ಚಂದ್ರಶೇಖರ್ ವಿರುದ್ಧ ತನಿಖೆ ನಡೆಸಲು ಆದೇಶಿಸಿತ್ತು.
ಈ ಸುದ್ದಿ ಓದಿದ್ದೀರಾ? ಹಾಸ್ಟೆಲ್ಗಳಲ್ಲಿ ಕಳಪೆ ಗುಣಮಟ್ಟದ ಆಹಾರದ ವಿರುದ್ಧ ಬೆಂವಿವಿ ವಿದ್ಯಾರ್ಥಿಗಳ ಪ್ರತಿಭಟನೆ
ತನಿಖೆ ವೇಳೆ ವೈದ್ಯ ಚಂದ್ರಶೇಖರ್ ಐದು ಅಂಶಗಳ ಲೋಪ ಎಸಗಿರುವುದು ಸಾಬೀತಾಗಿತ್ತು. ಡಾ.ಚಂದ್ರಶೇಖರ್ ಅನಸ್ತೇಷಿಯ ವೈದ್ಯರಲ್ಲ. ಅವರು ಅನಸ್ತೇಷಿಯಾ ವಿಷಯದಲ್ಲಿ ವಿದ್ಯಾರ್ಹತೆ ಹೊಂದಿಲ್ಲ. ಅನಧಿಕೃತವಾಗಿ ಬಿಎಎಂಎಸ್ ವ್ಯಾಸಂಗ ಮಾಡಿರುವವರನ್ನು ನೇಮಕ ಮಾಡಿಕೊಂಡಿದ್ದಾರೆ. ರವಿಗೌಡ ದೊಡ್ಡಪ್ಪ ಶಿವಣ್ಣ ಸಾವಿಗೆ ಕಾರಣವಾಗಿರುವುದು. ಈ ಹಿನ್ನೆಲೆಯಲ್ಲಿ ಮೃತ ಕುಟುಂಬಸ್ಥರಿಗೆ ₹15.60 ಲಕ್ಷ ಪರಿಹಾರ ನೀಡುವಂತೆ 2023ರ ಆಗಸ್ಟ್ 8 ರಂದು ಆದೇಶ ಹೊರಡಿಸಲಾಗಿತ್ತು.