ಮುಸ್ಲಿಂ ವ್ಯಾಪಾರಿಗಳ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ್ದ ಬಜರಂಗದಳದ ರಾಜ್ಯ ಸಂಚಾಲಕ ರಘು ವಿರುದ್ಧ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ.
“ಸಾರ್ವಜನಿಕ ಸ್ಥಳಗಳಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡಿರುವ ವಿಡಿಯೋ ವೈರಲ್ ಆದ ಹಿನ್ನೆಲೆ ಪ್ರಚೋದನಕಾರಿ ಭಾಷಣ ಮತ್ತು ಧರ್ಮಗಳ ನಡುವೆ ದ್ವೇಷ ಬಿತ್ತುವ ಪ್ರಯತ್ನ ನಡೆಸಿದ ಕುರಿತು ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಭಜರಂಗದಳದ ರಾಜ್ಯ ಸಂಚಾಲಕ ರಘು ಮತ್ತು ಇತರರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಐಪಿಸಿ ಸೆಕ್ಷನ್ 153ಎ, 295ಎ, 149, 506 ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು, ಬಂಧನಕ್ಕಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ” ಎಂದು ಸಕಲೇಶಪುರ ಡಿವೈಎಸ್ಪಿ ಮಿಥುನ್ ಈದಿನ.ಕಾಮ್ಗೆ ತಿಳಿಸಿದರು.
ಶುಕ್ರವಾರ ಸಕಲೇಶಪುರ ಪಟ್ಟಣದಲ್ಲಿ ಪ್ರತಿಭಟನೆ ನಡೆಯುತಿದ್ದ ವೇಳೆ “ಹಿಂದೂಗಳ ಮನೆಯ ಅಂಗಳಕ್ಕೆ ಯಾರಾದರೂ ಜಿಹಾದಿಗಳು, ಮೀನಿನ ವ್ಯಾಪಾರಿಗಳು, ತರಕಾರಿ ವ್ಯಾಪಾರಿಗಳು ಬರುವಾಗ ಎಚ್ಚರಿಕೆಯಿಂದ ಇರಿ. ಇಲ್ಲದಿದ್ದರೆ ನಮ್ಮಲ್ಲಿರುವಂತಹ ಕೋವಿಗಳು ಹೊರಬರುತ್ತವೆ. ನಾವು ಸಹ ಗುಂಡು ಹಾರಿಸಿಯೇ ಹಾರಿಸುತ್ತೇವೆ” ಎಂದು ಬಜರಂಗ ದಳದ ರಾಜ್ಯ ಸಂಚಾಲಕ ರಘು ಎಚ್ಚರಿಕೆ ನೀಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಕ್ಯಾಮನಹಳ್ಳಿ ಗ್ರಾಮದ ಎಬಿಸಿ ತೋಟದಲ್ಲಿ ಪರವಾನಗಿ ಇಲ್ಲದ ಕೋವಿಯಿಂದ ಎಮ್ಮೆಯನ್ನು ಗುಂಡಿಟ್ಟು ಕೊಲ್ಲಲಾಗಿತ್ತು. ಈ ಘಟನೆಯನ್ನು ಖಂಡಿಸಿ ಸಕಲೇಶಪುರ ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಈ ವೇಳೆ ಭಾಷಣ ಮಾಡಿದ್ದ ರೌಡಿ ಶೀಟರ್ ಮತ್ತು ಬಜರಂಗದಳ ಸಂಚಾಲಕ ರಘು ವಿವಾದಾತ್ಮಕ ಹೇಳಿಕೆ ನೀಡಿದ್ದ. ಜೊತೆಗೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದ್ದ ಆರೋಪಿ. “ಅ ದಳ ಈ ದಳ ಎಂದು ಹೇಳದೆ ನೇರವಾಗಿ ಭಜರಂಗದಳ ಎಂದು ಹೇಳಿ. ಆಗ ನಮ್ಮ ತಾಕತ್ತು ತೋರಿಸುತ್ತೇವೆ. ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪಡೆದರೂ ಸಹ ನಾವು ಗೋವುಗಳ ರಕ್ಷಣೆ ಮಾಡದೆ ಬಿಡುವುದಿಲ್ಲ. ನಮ್ಮ ಪ್ರಾಣ ಹೋದರೂ ಸರಿ” ಎಂದು ಹೇಳಿಕೆ ನೀಡಿದ್ದನು.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆರೋಪಿ ರಘು ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಕೇಸು ದಾಖಲಿಸಿಕೊಂಡು ಆತನನ್ನು ಬಂಧಿಸಲು ಮನೆ ಮೇಲೆ ದಾಳಿ ಮಾಡಿದ ವೇಳೆ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದಾನೆ.
ಈ ಸುದ್ದಿ ಓದಿದ್ದೀರಾ? ₹500 ಕೋಟಿ ಅಕ್ರಮ ಆಸ್ತಿ | ತಹಶೀಲ್ದಾರ ಅಜಿತ್ ಕುಮಾರ್ ರೈ ಅಮಾನತು ಮಾಡಿದ ಕಂದಾಯ ಇಲಾಖೆ
ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೋಲಿಸರನ್ನು ಸಕಲೇಶಪುರ ಪಟ್ಟಣದಲ್ಲಿ ಬಿಗಿ ಬಂದೋಬಸ್ತ್ ಗಾಗಿ ನಿಯೋಜಿಸಲಾಗಿದೆ. ತಾಲೂಕು ಬಿಟ್ಟು ಹೊರಹೋಗದಂತೆ ನಾಕಾಬಂಧಿ ಹಾಕಲಾಗಿದ್ದು, ಪೋಲಿಸರು ಅನೇಕ ತಂಡಗಳಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಸಮಾಜದಲ್ಲಿ ಶಾಂತಿ ಭಂಗ ಮಾಡುವ ಯಾರಾದರೂ ಸರಿ ಜಾತಿ ಮತ ನೋಡದೆ ತಕ್ಕ ಪ್ರಹಾರ ಮಾಡಿದರೆ ಮತ್ತೆ ಈ ಕೆಲಸಕ್ಕೆ ಜನ ಸಿಗಲ್ಲ.