ಚಿಕ್ಕಂದವಾಡಿಯಲ್ಲಿ ಒಂದು ಪ್ರಾಥಮಿಕ ಆರೋಗ್ಯ ಉಪ ಕೇಂದ್ರವಿದೆ. ಆದರೆ, ಅದು ನಿಜಕ್ಕೂ ಆರೋಗ್ಯ ಕೇಂದ್ರವೇ ಎಂಬ ಅನುಮಾನ ಮೂಡಿಸುತ್ತದೆ. ಸುತ್ತಮುತ್ತ ಕಸದ ರಾಶಿ, ನಾಮಫಲಕವೇ ಇಲ್ಲದೆ ಕಟ್ಟಡ, ಕುರುಚಲು ಗಿಡ-ಗಂಟಿಗಳು, ರಾಶಿ ಬಿದ್ದಿರುವ ಮರಮುಟ್ಟುಗಳನ್ನು ಕಂಡದೆ ಆರೋಗ್ಯ ಕೇಂದ್ರದ ಆರೋಗ್ಯವೇ ಹಗದೆಟ್ಟಿರುವಂತೆ ಬಾಸವಾಗುತ್ತದೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಚಿಕ್ಕಂದವಾಡಿ ಗ್ರಾಮದಲ್ಲಿ ಆರೋಗ್ಯ ಉಪ ಕೇಂದ್ರ ನಿರ್ಮಾಣ ಮಾಡಲಾಗಿದೆ. ಆದರೆ, ಅದು ಖಾಲಿ ಬಿದ್ದು ಸರಿ ಸುಮಾರು ಎಂಟತ್ತು ವರ್ಷಗಳೇ ಕಳೆದಿವೆ. ಅದರ ಪರಿಸ್ಥಿತಿ ಕಂಡು ಆರೋಗ್ಯ ಸಹಾಯಕರು ಇಲ್ಲಿ ವಾಸ ಮಾಡಲು ಹಿಂದೇಟು ಹಾಕುತ್ತಾರೆ. ಆರೋಗ್ಯ ಸಹಾಯಕರು ಅಲ್ಲಿ ಇಲ್ಲದೇ ಇರುವುದೇ ಆ ಕೇಂದ್ರದ ದುಸ್ಥಿತಿಗೆ ಕಾರಣವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಆರೋಗ್ಯ ಉಪಕೇಂದ್ರದ ಬಗ್ಗೆ ಗಮನ ಹರಿಸದ ತಾಲೂಕಿನ ಅಥವಾ ಸ್ಥಳೀಯ ಆರೋಗ್ಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ, ಚಿಕ್ಕಂದವಾಡಿ ಮತ್ತು ಸುತ್ತಲಿನ ಗ್ರಾಮದ ಸಾವಿರಾರು ಜನರು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೂ 6/7 ಕಿ.ಮೀ ದೂರದ ಆಸ್ಪತ್ರೆಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.
ಈ ಮಧ್ಯೆ. ಯಾರೂ ವಾಸಿಸದ ಆ ಕಟ್ಟಡಕ್ಕೆ ಎರಡು-ಮೂರು ವರ್ಷಕ್ಕೊಮ್ಮೆ ಗ್ರಾಮ ಪಂಚಾಯಿತಿಯವರು ಸುಣ್ಣ ಬಣ್ಣ ಬಳಿದು ಬಿಲ್ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರದಿಂದ ಜನರ ಆರೋಗ್ಯ ಕಾಪಾಡಲು ನಿರ್ಮಾಣವಾಗಿದ್ದ ಕಟ್ಟಡ, ಇದೀಗ ಉಪಯೋಗವೂ ಆಗದೆ, ಸರ್ಕಾರದ ಹಣದ ದುರುಪಯೋಗಕ್ಕೂ ಕಾರಣವಾಗಿದೆ.
ಆರೋಗ್ಯ ಕೇಂದ್ರದ ದುಸ್ಥಿತಿ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಹೆಸರು ಹೇಳಲಿಚ್ಛಿಸದ ಆರೋಗ್ಯ ಸಹಾಯಕರೊಬ್ಬರು, “ಗ್ರಾಮ ಪಂಚಾಯಿತಿಯವರು ವಿದ್ಯುತ್ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಜೊತೆಗೆ ಸುತ್ತಮುತ್ತ ಗಿಡ ಗಂಟಿಗಳು ಬೆಳೆದಿದ್ದು ಕ್ರಿಮಿ ಕೀಟಗಳ ಭಯ ಕಾಡುತ್ತದೆ. ಸುಮಾರು 40 ವರ್ಷಕ್ಕೂ ಹೆಚ್ಚು ವರ್ಷದ ಹಳೆಯ ಕಟ್ಟಡವಾಗಿದ್ದು ಶಿಥಿಲಗೊಂಡಿದೆ. ಸಂಜೆ ಸಮಯದಲ್ಲಿ ಕುಡುಕರ, ಇತರರ ಹಾವಳಿಯಿಂದ ರಕ್ಷಣೆ ಇಲ್ಲದಂತಾಗಿದೆ. ಹಾಗಾಗಿ ಸಿಬ್ಬಂದಿ ವಾಸ ಮಾಡಲು ಹಿಂದೇಟು ಹಾಕುತ್ತಾರೆ., ಸುವ್ಯವಸ್ಥೆ ಕಲ್ಪಿಸಿದರೆ ವಾಸ ಮಾಡಬಹುದು” ಎಂದು ಹೇಳಿದ್ದಾರೆ.
ಗ್ರಾಮದ ನಿವಾಸಿ ಹನುಮಂತ ಎಂಬವರು ಮಾತನಾಡಿ, “ನಾವು ಚಿಕ್ಕಂದಿನಿಂದಲೂ ಈ ಕಟ್ಟಡವನ್ನು ನೋಡುತ್ತಿದ್ದೇವೆ. ಕೆಲವು ವರ್ಷಗಳ ಹಿಂದೆ ಆರೋಗ್ಯ ಸಹಾಯಕರು ಇಲ್ಲಿ ವಾಸ ಮಾಡುತ್ತಿದ್ದರು. ಚಿಕಿತ್ಸೆ, ಹೆರಿಗೆಯ ಸೇವೆಯನ್ನು ಕೊಟ್ಟಿದ್ದಾರೆ. ಆದರೆ, ಇತ್ತೀಚೆಗೆ 8-10 ವರ್ಷಗಳಿಂದ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಹಾಯಕರ ನಿರ್ಲಕ್ಷ್ಯದಿಂದ ದುಸ್ಥಿತಿಗೆ ತಲುಪಿದೆ. ಗ್ರಾಮ ಪಂಚಾಯತಿ ಅಧಿಕಾರಿಗಳು ಸರಿಯಾಗಿ ನಿರ್ವಹಣೆ ಮಾಡದೆ, ಹಾಳು ಬಿದ್ದಿದೆ” ಎಂದು ಹೇಳಿದ್ದಾರೆ.
“ನೀರಿನ ಸಂಪರ್ಕ, ವಿದ್ಯುತ್ ಸಂಪರ್ಕ ಇಲ್ಲದಿರುವುದು ಕೂಡ ಆರೋಗ್ಯ ಸಹಾಯಕರು ವಾಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇದನ್ನು ನಿವಾರಿಸಿ ಅವರಿಗೆ ಸೂಕ್ತ ವ್ಯವಸ್ಥೆ ನೀಡಬೇಕು. ಹೆಚ್ಚು ಜನಸಂಖ್ಯೆ ಇರುವ ಗ್ರಾಮ ಇದಾಗಿದ್ದು ಸಣ್ಣಪುಟ್ಟ ಕಾಯಿಲೆಗಳಿಗೆ ನಗರ ಪ್ರದೇಶಗಳನ್ನು ಆಶ್ರಯಿಸುವುದನ್ನು ತಡೆಯಬೇಕು” ಎಂದಿದ್ದಾರೆ.
ಸ್ಥಳೀಯ ಮಹಿಳೆಯೊಬ್ಬರು ಮಾತನಾಡಿ, “ಕೃಷಿ ಕಾರ್ಮಿಕರು ಸೇರಿದಂತೆ ಬಹಳಷ್ಟು ಬಡವರು ಸಣ್ಣಪುಟ್ಟ ಖಾಯಿಲೆಗಳಿಗೆ ಹತ್ತಿರದ ತಾಲೂಕು ಕೇಂದ್ರ ಅಥವಾ ನಗರ ಕೇಂದ್ರಕ್ಕೆ ಹೋಗಬೇಕಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಹೋದರೆ ಒಂದು ಬಾರಿಗೆ ಇನ್ನೂರರಿಂದ ಸಾವಿರ ರೂಪಾಯಿ ತನಕ ಖರ್ಚು ಮಾಡಿಸುತ್ತಾರೆ. ಕೂಲಿ, ಕೃಷಿ ಕಾರ್ಮಿಕರಿಗೆ, ಬಡವರಿಗೆ ಇದನ್ನು ಬರಿಸಲು ಸಾಧ್ಯವಿಲ್ಲ. ನಮ್ಮೂರಲ್ಲಿ ಆರೋಗ್ಯ ಉಪ ಕೇಂದ್ರ ಇದ್ದರೂ ಕೂಡ ಉಪಯೋಗವಿಲ್ಲದಂತಾಗಿದೆ. ಸಂಬಂಧ ಪಟ್ಟವರು ಈ ಕೇಂದ್ರದಲ್ಲಿಯೇ ಆರೋಗ್ಯ ಸೇವೆ ಸಿಗುವಂತೆ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ
ಆರೋಗ್ಯ ಕೇಂದ್ರದ ಪರಿಸ್ಥಿತಿ ಬಗ್ಗೆ ಮಾತನಾಡಿದ ಚಿಕ್ಕಜಾಜೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪ್ರದೀಪ್, “ಕಟ್ಟಡ ಸುರಕ್ಷಿತವಾಗಿಲ್ಲ. ವಾಸಕ್ಕೂ ಯೋಗ್ಯವಾಗಿಲ್ಲವೆಂದು ಆರೋಗ್ಯ ಸಹಾಯಕರು ಪತ್ರ ನೀಡಿದ್ದಾರೆ. ಪಟ್ಟಣದಿಂದ ಹಳ್ಳಿಗೆ ಓಡಾಡುತ್ತಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೇಲಾಧಿಕಾರಿಗಳಿಗೆ ಈ ಬಗ್ಗೆ ಪತ್ರ ಬರೆದು ತಿಳಿಸಲಾಗಿದೆ. ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಕಟ್ಟಡ ದುರಸ್ತಿ ಮತ್ತು ವ್ಯವಸ್ಥೆ ಮಾಡಲು ತಿಳಿಸಲಾಗಿತ್ತು. ಆದರೆ, ಅವರು ಕ್ರಮ ಕೈಗೊಂಡಿಲ್ಲ” ಎಂದು ಹೇಳಿದ್ದಾರೆ.
ಈದಿನ.ಕಾಮ್ ಜೊತೆ ಮಾತನಾಡಿದ ಗ್ರಾಮ ಪಂಚಾಯತಿ ಪಿಡಿಒ ಪ್ರದೀಪ್, “ಗ್ರಾಮ ಪಂಚಾಯತಿಯಿಂದ ಆರೋಗ್ಯ ಸಹಾಯಕರು ಉಳಿಯಲು ಬರುತ್ತಾರೆಂದು ಎರಡು ವರ್ಷಗಳ ಹಿಂದೆ ಸ್ವಚ್ಛಗೊಳಿಸಿ, ಬಣ್ಣ ಬಳಿದು ವ್ಯವಸ್ಥೆ ಮಾಡಲಾಗಿತ್ತು. ಅವರು ಅಲ್ಲಿ ವಾಸ್ತವ್ಯ ಮಾಡಲಿಲ್ಲ. ಆಗಾಗ್ಗೆ ಸ್ವಚ್ಛ ಮಾಡುತ್ತಿದ್ದು, ಸಹಾಯಕರು ವಾಸ ಮಾಡಲು ಬಂದರೆ ಇನ್ನಷ್ಟು ಸೌಲಭ್ಯ ನೀಡುತ್ತೇವೆ” ಎಂದು ತಿಳಿಸಿದ್ದಾರೆ.
ಅಧಿಕಾರಿಗಳು ಒಬ್ಬರ ಮೇಲೆ ಒಬ್ಬರು ಹೇಳಿಕೊಂಡು ಸಮಸ್ಯೆ ಪರಿಹಾರವಾಗದೆ ಉಳಿದಿದೆ. ಇದೊಂದೇ ಅಲ್ಲ ಹೊಳಲ್ಕೆರೆ ತಾಲೂಕಿನ ಬಹಳಷ್ಟು ಹಳ್ಳಿಗಳಲ್ಲಿ ಆರೋಗ್ಯ ಸಹಾಯಕರು ವಾಸ ಮಾಡದೆ ನಗರ ಕೇಂದ್ರಗಳಲ್ಲಿ ವಾಸಿಸುತ್ತಿದ್ದು, ಗ್ರಾಮೀಣ ಜನತೆಗೆ ಸರಿಯಾದ ವೈದ್ಯಕೀಯ ವ್ಯವಸ್ಥೆ, ಆರೋಗ್ಯ ಸೇವೆ ದೊರೆಯುತ್ತಿಲ್ಲ. ಈ ಬಗ್ಗೆ ಆರೋಗ್ಯ ಇಲಾಖೆಯ ಮೇಲಾಧಿಕಾರಿಗಳು ಗಮನ ಹರಿಸಬೇಕಾಗಿತ್ತು. ಆದರೆ, ಅವರ್ಯಾರು ಗಮನ ಹರಿಸದೆ ತಾಲೂಕಿನ ಹಳ್ಳಿಗಳಲ್ಲಿ ವೈದ್ಯಕೀಯ ಸೇವೆ ಜನಗಳಿಗೆ ಸಮರ್ಪಕವಾಗಿ ದೊರೆಯದಂತಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.