ತುಂಗಭದ್ರ ಎಡದಂಡೆ ನಾಲೆಯ ಕೊನೆ ಭಾಗಕ್ಕೆ (ಮೈಲ್ 121ರಿಂದ 141) ಹತ್ತಾರು ವರ್ಷಗಳಿಂದ ನೀರು ಪೂರೈಕೆ ಸ್ಥಗಿತಗೊಂಡಿದೆ. ಕಾಲುವೆಗಳು ಮುಚ್ಚಿಹೋಗುವ ಸ್ಥಿತಿಯಿವೆ. ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕುವ ಮೂಲಕ ಕಾಲುವೆ ಅಧುನೀಕರಣಕ್ಕೆ ಮುಂದಾಗಬೇಕು ಎಂದು ಜೆಡಿಎಸ್ ಮುಖಂಡರು ಆಗ್ರಹಿಸಿದ್ದಾರೆ.
ಮಂಗಳವಾರ ರಾಯಚೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜೆಡಿಎಸ್ ಗ್ರಾಮೀಣ ಘಟಕದ ಅಧ್ಯಕ್ಷ ನಿಜಾಮುದ್ದೀನ್, “ಈ ಹಿಂದೆ ಮುನಿಯಪ್ಪ ಮುದ್ದಪ್ಪನವರು ನೀರಾವರಿ ಸಚಿವರಾಗಿದ್ದಾಗ 2008ರಲ್ಲಿ ಈ ಭಾಗಕ್ಕೆ ನೀರು ಬಂದಿತ್ತು. ನಂತರ ಬಂದ ಎಲ್ಲಾ ಸರ್ಕಾರಗಳು ಕೊನೆಭಾಗದ ರೈತರಿಗೆ ನೀರು ಪೂರೈಕೆ ಮಾಡುವಲ್ಲಿ ವಿಫಲವಾಗಿವೆ” ಎಂದು ಕಿಡಿಕಾರಿದ್ದಾರೆ.
“ನಾಲೆಯ ಕೊನೆಯ ಭಾಗದ 38,000 ಎಕರೆ ಕೃಷಿ ಭೂಮಿಗೆ ನಿರುಣಿಸುವ ತುಂಗಭದ್ರ ಎಡದಂಡೆ ಕಾಲುವೆಯ ಮೇಲೆ 48 ಗ್ರಾಮಗಳು, 10,000 ಕುಟುಂಬಗಳು ಅವಲಂಬಿತವಾಗಿವೆ. ನೀರಾವರಿ ನಿಗಮದ ಬೇಜವಬ್ದಾರಿ ಹಾಗೂ ಚುನಾಯಿತಿ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಈ ಭಾಗದ ಜನರು ನೀರಿನಿಂದ ವಂಚಿತವಾಗುವಂತಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಗ್ರಾಮೀಣ ಶಾಸಕರು ಚುನಾವಣೆಯಲ್ಲಿ ಕ್ಷೇತ್ರವನ್ನು ನೀರಾವರಿ ಮಾಡುವದಾಗಿ ಭರವಸೆ ನೀಡಿದ್ದರು. ಆದರೆ, ಕಾಲುವೆ ಅಧುನೀಕರಣ ಕಾಮಗಾರಿ ಕುರಿತು ಸರ್ಕಾರದ ಮೇಲೆ ಒತ್ತಡ ಹಾಕಿ ಬಜೆಟ್ನಲ್ಲಿ ಅನುದಾನ ಕಾಯ್ದಿರಿಸುವಲ್ಲಿ ವಿಫಲರಾಗಿದ್ದಾರೆ” ಎಂದು ಆರೋಪಿಸಿದ್ದಾರೆ.
“ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ದದ್ದಲ್ ಬಸನಗೌಡರು ಸದನದಲ್ಲಿ ಕ್ಷೇತ್ರದ ನೀರಾವರಿ ಸಮಸ್ಯೆ ಕುರಿತು ಮಾತನಾಡಿಲ್ಲ. ಅವರದೇ ಸರ್ಕಾರದ ಅಧಿಕಾರದಲ್ಲಿದ್ದರೂ, ಅವರು ಕೇವಲ ಗುದ್ದಲಿ ಪೂಜೆ ಮಾತ್ರ ಸೀಮಿತವಾಗಿದ್ದಾರೆ. ಮೂರು ತಿಂಗಳೊಳಗೆ ಸರ್ಕಾರದಿಂದ ಭರವಸೆ ದೊರೆತರೆ ಪಕ್ಷಾತೀತವಾಗಿ ಶಾಸಕರನ್ನು ಸನ್ಮಾನಿಸಿ, ಮೆರವಣಗೆ ಮಾಡುತ್ತೇವೆ. ಇಲ್ಲದೇ ಹೋದಲ್ಲಿ ಅವರಿಗೆ ಘೇರಾವ್ ಹಾಕಿ ಪ್ರತಿಭಟನೆ ನಡೆಸುತ್ತೇವೆ” ಎಂದು ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಲಕ್ಷಣಭಂಡಾರಿ, ಗುಜ್ಜಲ್ ತಾಯಪ್ಪ, ಬಡೇಸಾಬ, ವಹೀದ ಪಾಷಾ ಇದ್ದರು.